ಸತ್ಯಮೇವ ಜಯತೆ: ಚುನಾವಣೆ ಗೆದ್ದ ನಂತರ ಅಹ್ಮದ್ ಪಟೇಲ್ ಹೇಳಿದ ಮಾತು
ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆ ಗೆಲುವು. ತಮ್ಮ ಜಯವನ್ನು ಸತ್ಯಮೇವ ಜಯತೆ ಎಂದು ಬಣ್ಣಿಸಿದ ಕಾಂಗ್ರೆಸ್ ನಾಯಕ.
ಅಹ್ಮದಾಬಾದ್, ಆಗಸ್ಟ್ 9: ''ಇಂದಿನ ರಾಜಕೀಯದಲ್ಲಿ ಹಣ ಬೆಂಬಲ, ಜನ ಬೆಂಬಲವಿದ್ದರೆ ಸಾಕು ಎಂಥ ಸವಾಲನ್ನಾಗಲೀ ಗೆಲ್ಲುತ್ತೇನೆ ಎಂಬ ಸಿದ್ಧಾಂತಕ್ಕೆ ಸೋಲಾಗಿದೆ. ಹಾಗಾಗಿ, ನನ್ನ ಗೆಲುವು ಸತ್ಯದ ಗೆಲುವಾಗಿದ್ದು, ಸತ್ಯಮೇವ ಜಯತೆ ಎಂದು ಬಣ್ಣಿಸಲು ಇಚ್ಛಿಸುತ್ತೇನೆ'' - ಈ ಬಾರಿಯ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಕ್ಲಿಷ್ಟಕರ ಸನ್ನಿವೇಶದಲ್ಲೂ ಗೆಲುವು ಪಡೆದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಮಾತು.
ಅಹ್ಮದ್ ಪಟೇಲ್ ಅವರ ಗೆಲುವಿನ ಫಲಿತಾಂಶ ಹೊರಬೀಳುತ್ತಲೇ, ತಮ್ಮನ್ನು ಸುತ್ತುವರಿದ ಕ್ಯಾಮೆರಾಗಳ ಮುಂದೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಅವರು, ''ನನ್ನ ರಾಜಕೀಯ ಜೀವನದಲ್ಲಿ ಇದೊಂದು ಅತಿ ಕ್ಲಿಷ್ಟಕರ ಚುನಾವಣೆಯಾಗಿತ್ತು. ನನ್ನನ್ನು ಸೋಲಿಸಲು ವಿರೋಧ ಪಕ್ಷವಾದ ಬಿಜೆಪಿ ಹಾಗೂ ಇತ್ತೀಚೆಗೆ ಕಾಂಗ್ರೆಸ್ ನಿಂದ ಹೊರನಡೆದು ಬಿಜೆಪಿ ಜತೆ ಕೈ ಜೋಡಿಸಿದ್ದ ಕೆಲವಾರು ನಾಯಕರು ತೀವ್ರವಾಗಿ ಪ್ರಯತ್ನಿಸಿದರೂ, ಗೆಲುವು ನನಗೇ ದಕ್ಕಿದ್ದು ಖುಷಿ ತಂದಿದೆ'' ಎಂದರು.

ರಾಜಕೀಯದಾಟದಲ್ಲಿ ಅಹ್ಮದ್ ಪಟೇಲ್ ಅವರನ್ನು ಸೋಲಿಸಲು ಇನ್ನಿಲ್ಲದ ಕಸರತ್ತು ಮಾಡಿದ್ದ ಆಡಳಿತಾರೂಢ ಬಿಜೆಪಿ ಪಕ್ಷವು, ರಾಜ್ಯಸಭಾ ಚುನಾವಣೆಯಲ್ಲಿ ಪಟೇಲ್ ವಿರುದ್ಧ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿದ್ದ ಬಲವಂತಸಿನ್ಹ ರಜಪೂತ್ ಅವರನ್ನು ಕಣಕ್ಕಿಳಿಸಿತ್ತು. ಅಹ್ಮದ್ ಪಟೇಲ್ ಅವರನ್ನು ಹೇಗಾದರೂ ಮಾಡಿ ಸೋಲಿಸಬೇಕೆಂದು ನಿರ್ಧರಿಸಿದ್ದ ಬಿಜೆಪಿ, ಕಾಂಗ್ರೆಸ್ ಶಾಸಕರನ್ನು ಖರೀದಿಸುವ ತಂತ್ರಗಾರಿಕೆಗೆ ಕೈಹಾಕಿತ್ತೆಂಬ ವದಂತಿಗಳು ಹರಡಿದ್ದವು.
ಈ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನ ಎಲ್ಲಾ 44 ಶಾಸಕರನ್ನು ಬೆಂಗಳೂರಿಗೆ ಹೈಜಾಕ್ ಮಾಡಿ ಕರೆತರಲಾಗಿತ್ತು. ಆ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಶಾಸಕರು, ಪ್ರತಿ ಶಾಸಕನಿಗೆ 15 ಕೋಟಿ ರು. ನೀಡುವ ಆಮಿಷವನ್ನು ಬಿಜೆಪಿ ನೀಡಿತ್ತೆಂದು ಹೇಳಿದ್ದರು. ರಾಜ್ಯಸಭೆ ಚುನಾವಣೆಯ ಮುನ್ನಾದಿನ (ಆಗಸ್ಟ್ 7) ಎಲ್ಲರೂ ಬೆಂಗಳೂರಿನಿಂದ ಗುಜರಾತ್ ಗೆ ವಾಪಸ್ಸಾಗಿದ್ದರು.
ಆದರೂ, ಬಿಜೆಪಿಗೆ ಮರುಳಾಗಿದ್ದ ಕಾಂಗ್ರೆಸ್ ಇಬ್ಬರು ಶಾಸಕರಾದ ಭೋಲಾ ಭಾಯಿ ಗೋಗಿಲ್, ರಾಘವ್ ಭಾಯಿ ಪಟೇಲ್ ಅವರು ಅಡ್ಡಮತದಾನ ಹಾಕಿ, ಅಹ್ಮದ್ ಪಟೇಲ್ ಅವರಿಗೆ ಕೊನೇ ಕ್ಷಣದಲ್ಲಿ ಕೈ ಕೊಟ್ಟರೂ, ಕೇಂದ್ರ ಚುನಾವಣಾ ಆಯೋಗವು ಇವರ ಮತಗಳನ್ನು ಅಸಿಂಧುಗೊಳಿಸಿದ್ದರಿಂದಾಗಿ, ಜಯ ಅಹ್ಮದ್ ಪಟೇಲ್ ಅವರಿಗೇ ದಕ್ಕಿವೆ.












Click it and Unblock the Notifications