ಸಮ್ಮೇದ ಶಿಖರ್ಜಿ ಪ್ರವಾಸಿ ಸ್ಥಳ ಘೋಷಣೆ: ದೇಶಾದ್ಯಂತ ಬೀದಿಗಿಳಿದ ಜೈನ ಸಮುದಾಯದ
ನವದೆಹಲಿ, ಜ. 01: ಜೈನರ ಪವಿತ್ರ ಸ್ಥಳ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿ ಸ್ಥಳವನ್ನಾಗಿ ಘೋಷಿಸಿದ ಜಾರ್ಖಂಡ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಜೈನ ಸಮುದಾಯದವರು ಭಾನುವಾರ ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸಿದರು.
ಜಾರ್ಖಂಡ್ನ ಪರಸ್ನಾಥ್ ಬೆಟ್ಟಗಳಲ್ಲಿರುವ ಸಮೇದ್ ಶಿಖರ್ಜಿ ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ. ಸರ್ಕಾರದ ನಿರ್ಧಾರವನ್ನು ಖಂಡಿಸಿ ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ಒಡಿಸಾ, ಮಧ್ಯಪ್ರದೇಶ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ. ಜನವರಿ 1 ರಂದು ಪ್ರವಾಸಿಗರನ್ನು ಹೆಚ್ಚು ಸೆಳೆಯುವ ದೆಹಲಿಯ ಇಂಡಿಯಾ ಗೇಟ್ ಭಾನುವಾರ ಜೈನ ಸಮುದಾಯದ ಬೃಹತ್ ಪ್ರತಿಭಟನೆ ಆಯೋಜಿಸಿತ್ತು.
ಜೈನ ಧರ್ಮ ಅತ್ಯಂತ ಪವಿತ್ರ ಧರ್ಮ, ಭಗವಾನ್ ಮಹಾವೀರರು ನಮಗೆ ಸ್ಪೂರ್ತಿ ಮತ್ತು ಪ್ರೇರಣೆ: ಬಸವರಾಜ ಬೊಮ್ಮಾಯಿ
ಜಾರ್ಖಂಡ್ ಸರ್ಕಾರವು ಯಾತ್ರಾ ಸ್ಥಳವನ್ನು ಪ್ರವಾಸಿ ತಾಣವಾಗಿ ಅಧಿಸೂಚನೆ ಮಾಡಿದ ನಂತರ ವಾರಗಳಿಂದಲೂ ಈ ವಿವಾದ ಪ್ರತಿಭಟನೆಯ ಸ್ವರೂಪ ಪಡೆದುಕೊಂಡಿದೆ. ಮಧ್ಯಪ್ರದೇಶದ ಜೈನ ಸಮಾಜವು ಈ ನಿರ್ಧಾರವನ್ನು ವಿರೋಧಿಸಿ ಹಿಂದೆ ಬೀದಿಗಿಳಿದಿತ್ತು. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಪ್ರಧಾನಿ ಮೋದಿ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಪತ್ರ ಬರೆದು ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
24 ತೀರ್ಥಂಕರರಲ್ಲಿ 20 ಮಂದಿ (ಜೈನ ಆಧ್ಯಾತ್ಮಿಕ ನಾಯಕರು) ಸಮ್ಮೇದ್ ಶಿಖರ್ಜಿಯಲ್ಲಿ ಮೋಕ್ಷವನ್ನು ಪಡೆದರು ಎಂದು ನಂಬಲಾಗಿದೆ. ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ವಿಶ್ವ ಹಿಂದೂ ಪರಿಷತ್ ಹೇಳಿಕೆ ನೀಡಿದ್ದು, ಭಾರತದ ಎಲ್ಲಾ ತೀರ್ಥಕ್ಷೇತ್ರಗಳ ಪಾವಿತ್ರ್ಯತೆಯನ್ನು ರಕ್ಷಿಸಲು ವಿಶ್ವ ಹಿಂದೂ ಪರಿಷತ್ ತೀರ್ಮಾನಿಸಿದೆ ಎಂದು ಹೇಳಿದೆ.
ಸಮ್ಮೇದ್ ಶಿಖರ್ಜಿ ಪ್ರದೇಶವನ್ನು ಪವಿತ್ರ ಪ್ರದೇಶವೆಂದು ಘೋಷಿಸಬೇಕು ಮತ್ತು ಮಾಂಸ ಮತ್ತು ಮಾದಕ ದ್ರವ್ಯಗಳನ್ನು ಒಳಗೊಂಡ ಯಾವುದೇ ಪ್ರವಾಸಿ ಚಟುವಟಿಕೆ ಇರಬಾರದು ಎಂದು ವಿಶ್ವ ಹಿಂದೂ ಪರಿಷತ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಸಿದ್ಧ ಕ್ಷೇತ್ರ ಪಾರ್ಶ್ವನಾಥ ಪರ್ವತದ ಅಭಿವೃದ್ಧಿ ಹಾಗೂ ಅಲ್ಲಿನ ಎಲ್ಲಾ ಯಾತ್ರಾಸ್ಥಳಗಳು ಅನುಯಾಯಿಗಳ ನಂಬಿಕೆಗೆ ಅನುಗುಣವಾಗಿ ಆಗುವಂತೆ ಜಾರ್ಖಂಡ್ನಲ್ಲಿ ತೀರ್ಥಯಾತ್ರೆ ಸಚಿವಾಲಯವನ್ನು ಶೀಘ್ರದಲ್ಲೇ ಸ್ಥಾಪಿಸಬೇಕು. ಸಂಬಂಧಿತ ಅಧಿಸೂಚನೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು. ಆದ್ದರಿಂದ ಸಿದ್ಧ ಪಾರ್ಶ್ವನಾಥ ಪರ್ವತ ಮತ್ತು ತೀರ್ಥರಾಜ್ ಸಮ್ಮೇದ್ ಶಿಖರವನ್ನು ಪ್ರವಾಸಿ ಪ್ರದೇಶಗಳಾಗಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ವಿಎಚ್ಪಿ ಹೇಳಿಕೆಯಲ್ಲಿ ತಿಳಿಸಿದೆ.
ಡಿಸೆಂಬರ್ 16, 2022 ರಂದು, ಗುಜರಾತ್ನಲ್ಲಿ ಜೈನ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ. ಭಾನುವಾರದ ರಾಷ್ಟ್ರವ್ಯಾಪಿ ನಡೆದ ಪ್ರತಿಭಟನೆಯು ಆ ವಿಧ್ವಂಸಕ ಕೃತ್ಯವನ್ನು ಖಂಡಿಸಿದೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಜೈನ ಸಮುದಾಯದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕೂಡಲೇ ಜಾರ್ಖಂಡ್ ಸರ್ಕಾರವು ನಿರ್ಧಾರವನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.