ಸೈನಿಕ ಶಾಲೆಗಳಲ್ಲಿ ಇನ್ನುಮುಂದೆ ಬಾಲಕಿಯರಿಗೂ ಪ್ರವೇಶ: ಪ್ರಧಾನಿ ಮೋದಿ
ನವದೆಹಲಿ, ಆಗಸ್ಟ್ 15: ಇನ್ನುಮುಂದೆ ಸೈನಿಕ ಶಾಲೆಗಳು ಬಾಲಕರಿಗೆ ಮಾತ್ರ ಸೀಮಿತವಾಗಿರದೆ ಬಾಲಕಿಯರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಸೈನಿಕ ಶಾಲೆಗಳಲ್ಲಿ ಇನ್ನು ಮುಂದೆ ಯುವತಿಯರಿಗೂ ಪ್ರವೇಶವನ್ನು ಘೋಷಿಸಿದ್ದಾರೆ.
ಪ್ರಸ್ತುತ 33 ಸೈನಿಕ ಶಾಲೆಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಮಿಜೊರಾಮ್ ನಲ್ಲಿ ಎರಡುವರೆ ವರ್ಷಗಳ ಹಿಂದೆ ಸೈನಿಕ ಶಾಲೆಗಳಲ್ಲಿ ಬಾಲಕಿ/ಯರಿಗೆ ಪ್ರವೇಶ ನೀಡುವ ಪ್ರಥಮ ಪ್ರಯೋಗವನ್ನು ನಡೆಸಲಾಗಿತ್ತು ಎಂಬುದನ್ನು ಉಲ್ಲೇಖಿಸಿರುವ ಪ್ರಧಾನಿ ಮೋದಿ, ಈಗ ಭಾರತ ಸರ್ಕಾರ ಎಲ್ಲಾ ಸೈನಿಕ ಶಾಲೆಗಳಲ್ಲಿಯೂ ಬಾಲಕಿ/ಯುವತಿಯರಿಗೆ ಪ್ರವೇಶ ಲಭ್ಯವಿರಲಿದೆ ಎಂದು ಹೇಳಿದ್ದಾರೆ.

ಸೈನಿಕ ಶಾಲೆಗಳ ಸೊಸೈಟಿ ಸೈನಿಕ ಶಾಲೆಗಳನ್ನು ನಡೆಸುತ್ತಿದ್ದು ಆಡಳಿತಾತ್ಮಕ ನಿಯಂತ್ರಣ ರಕ್ಷಣಾ ಸಚಿವಾಲಯದ್ದಾಗಿದೆ. ಭಾರತೀಯ ಸಶಸ್ತ್ರ ಪಡೆಗಳಿಗೆ ಸೇರ್ಪಡೆಯಾಗುವುದಕ್ಕೆ ಬಾಲ್ಯದಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಸೈನಿಕ ಶಾಲೆಗಳನ್ನು ಸ್ಥಾಪಿಸಲಾಗಿದೆ.
ಇನ್ನುಮುಂದೆ ಭಾರತದ ಸೈನಿಕ ಸಾಲೆಗಳಲ್ಲಿ ದೇಶದ ಹೆಣ್ಣುಮಕ್ಕಳಿಗೂ ಅವಕಾಶ ನೀಡಬೇಕು ಎಂದು ತೀರ್ಮಾನಿಸಲಾಗಿದೆ. ಭಾರತೀಯರು ಕೋವಿಡ್ ಹೋರಾಟವನ್ನು ಬಹಳ ತಾಳ್ಮೆಯಿಂದ ಹೋರಾಡಿದ್ದಾರೆ. ಪ್ರತಿಯೊಂದು ಪ್ರದೇಶದಲ್ಲಿಯೂ ಅಸಾಧಾರಣ ವೇಗದಲ್ಲಿ ಕೆಲಸ ಮಾಡಿದ್ದೇವೆ. ಇದು ನಮ್ಮ ಕೈಗಾರಿಕೋದ್ಯಮಿಗಳು ಮತ್ತು ವಿಜ್ಞಾನಿಗಳ ಶಕ್ತಿಯ ಪರಿಣಾಮವಾಗಿದೆ, ಇಂದು ಭಾರತವು ಲಸಿಕೆಗಳಿಗಾಗಿ ಬೇರೆ ಯಾವುದೇ ರಾಷ್ಟ್ರವನ್ನು ಅವಲಂಬಿಸಿಕೊಂಡಿಲ್ಲ ಎಂದು ಮೋದಿ ಹೇಳಿದರು.
ನಾವು ನೂರನೇ ವರ್ಷದ ಸ್ವಾತಂತ್ರ್ಯ ದಿನ ಆಚರಣೆಗಾಗಿ ಆದರ್ಶ ಭಾರತ ನಿರ್ಮಾಣದ ಗುರಿ ಹೊಂದಿದ್ದೇವೆ. 100ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ, ಒಗ್ಗಟ್ಟು, ಉತ್ತಮ ಆಡಳಿತ, ಶಿಸ್ತನ್ನು ಅಳವಡಿಸಿಕೊಂಡಿರುವ, ಜಗತ್ತಿನೊಂದಿಗೆ ಸಮಾನಾಂತರವಾಗಿ ಹೆಜ್ಜೆ ಹಾಕುವ ಭಾರತ ನಿರ್ಮಾಣ ನಮ್ಮ ಗುರಿಯಾಗಿದೆ.
100ನೇ ವರ್ಷದ ಸ್ವಾತಂತ್ರ್ಯ ದಿನ ಆಚರಿಸಲು ಇನ್ನೂ 25 ವರ್ಷ ಬಾಕಿ ಇದೆ. ಆದರೆ ನಾವು ಅಲ್ಲಿಯವರೆಗೆ ಕಾಯಬೇಕಿಲ್ಲ. ಈಗಿನಿಂದಲೇ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಯೋಜನೆಯಡಿ, ಎಲ್ಲರೂ ಒಟ್ಟಾಗಿ ಭಾರತದಲ್ಲಿ ಸಕಾರಾತ್ಮಕ ಬದಾಲವಣೆ ತರಲು ಮುಂದಾಗೋಣ. ಆದರ್ಶ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪ್ರಯತ್ನ ಹಾಕಿದರೆ ಖಂಡಿತ ನಮ್ಮ ಗುರಿ ತಲುಪುತ್ತೇವೆ ಎಂದರು.
ಪ್ರತಿ ರಾಷ್ಟ್ರಕ್ಕೂ ಅದರ ಅಭಿವೃದ್ಧಿ ಪಯಣದಲ್ಲಿ, ಹೊಸ ಗುರಿಯೊಂದಿಗೆ ತನ್ನನ್ನು ತಾನು ವ್ಯಾಖ್ಯಾನಿಸಿಕೊಳ್ಳುವ ಸಮಯ ಬರುತ್ತದೆ. ಆಗ ಹೊಸ ನಿರ್ಣಯಗಳು, ಅಭಿವೃದ್ಧಿ ಕಾರ್ಯಗಳೊಂದಿಗೆ ಅದು ಮುಂದಡಿ ಇಡಬೇಕು. ಆ ಕಾಲವೀಗ ಭಾರತಕ್ಕೆ ಬಂದಿದೆ. ಎಲ್ಲರೂ ಒಗ್ಗಟ್ಟಾಗಿ ಭಾರತದ ಅಭಿವೃದ್ಧಿ ಪಯಣಕ್ಕೆ ಒಂದು ಹೊಸ ಮೈಲುಗಲ್ಲು ಹಾಕೋಣ ಎಂದು ಹೇಳಿದರು.
ನಾವು ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯನ್ನು ಪರಿಚಯಿಸಲಿದ್ದೇವೆ. ನಮ್ಮ ದೇಶದ ಮೂಲಸೌಕರ್ಯ, ಸಾರಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಗತಿಶಕ್ತಿ ಯೋಜನೆ ಒಂದು ಮಾಸ್ಟರ್ ಪ್ಲ್ಯಾನ್ ಆಗಲಿದೆ.
ಇದು 100 ಕೋಟಿ ರೂಪಾಯಿಗಳ ಪ್ರಾಜೆಕ್ಟ್ ಆಗಿದ್ದು, ಉದ್ಯೋಗ ಸೃಷ್ಟಿಸುತ್ತದೆ. ಹೊಸಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಅಭಿವೃದ್ಧಿ ಪಥದಲ್ಲಿರುವ ಎಲ್ಲ ಅಡೆತಡೆಗಳನ್ನೂ ಇದು ತೊಡೆದುಹಾಕುತ್ತದೆ ಎಂದು ಹೇಳಿದರು.
ನಾವೀಗ ದೇಶವನ್ನು ಪರಿಪೂರ್ಣತೆಗೆ ಒಯ್ಯಬೇಕು. ಶೇ. 100ರಷ್ಟು ಹಳ್ಳಿಗಳಿಗೂ ರಸ್ತೆ ನಿರ್ಮಾಣವಾಗಬೇಕು, ಶೇ.100 ರಷ್ಟು ಕುಟುಂಬಗಳೂ ಬ್ಯಾಂಕ್ ಅಕೌಂಟ್ ಹೊಂದಬೇಕು. ನೂರಕ್ಕೆ ನೂರು ಪರ್ಸಂಟ್ ಫಲಾನುಭವಿಗಳೂ ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಬೇಕು. ಉಜ್ವಲಾ ಯೋಜನೆಯಡಿಯ ಅರ್ಹರೆಲ್ಲರೂ ಎಲ್ಪಿಜಿ ಗ್ಯಾಸ್ ಸಂಪರ್ಕ ಹೊಂದುವಂತಾಗಬೇಕು ಎಂದು ಪ್ರಧಾನಿ ಹೇಳಿದರು.












Click it and Unblock the Notifications