ಚೆನ್ನೈ ಸಂಕಷ್ಟದಲ್ಲಿ RSS ತೋರಿದ ಮಾನವೀಯತೆ ಸುದ್ದಿಯಾಗಲೇ ಇಲ್ಲ!
ಕಂಡು ಕೇಳರಿಯದ ಅತಿವೃಷ್ಠಿಯಿಂದ ತತ್ತರಿಸಿ ಹೋಗಿರುವ ಚೆನ್ನೈ ಮಹಾನಗರಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಮಾಡುತ್ತಿರುವ ಮಾನವೀಯ ಕೆಲಸಗಳು ಎಲ್ಲೂ ಸುದ್ದಿಯಾಗಲೇ ಇಲ್ಲ, ಸುದ್ದಿಯಾಗುವುದೂ ಇಲ್ಲ.
ದೇಶದ ಯಾವುದೇ ಪ್ರದೇಶ ನೈಸರ್ಗಿಕ ಪ್ರಕೋಪಕ್ಕೆ ತುತ್ತಾದಾಗ ಆರ್ ಎಸ್ ಎಸ್ ಜನರ ಸಂಕಷ್ಟಕ್ಕೆ ಮುಂದಾಗುತ್ತಿರುವುದು ಇದೇನೂ ಹೊಸತಲ್ಲ. ಸಂತ್ರಸ್ತರನ್ನು ರಕ್ಷಿಸುವುದು, ವೈದ್ಯಕೀಯ ಪರಿಹಾರ ಮತ್ತು ನೀರು ಊಟೋಪಚಾರ ವಿತರಿಸುವ ವಿಚಾರದಲ್ಲಿ ಈ ಸಂಘಟನೆ ಸದ್ದಿಲ್ಲದೇ ಯಾವಾಗಲೂ ಮಂಚೂಣಿಯಲ್ಲಿರುತ್ತದೆ.
ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ RSS ಅನ್ನು ಉಗ್ರ ಸಂಘಟನೆ, ದೇಶದಲ್ಲಿ ಅವರಿಂದಲೇ ಅಸಹಿಷ್ಣುತೆ ಹೆಚ್ಚುತ್ತಿದೆ ಎನ್ನುವ ರಾಜಕೀಯ ನಾಯಕರಿಗೆ ಮತ್ತು ಬುದ್ದಿಜೀವಿಗಳಿಗೆ ಈ ಸಂಘಟನೆ ಮಾಡುತ್ತಿರುವ ಇಂತಹ ಮಾನವೀಯ ಕೆಲಸಗಳು ಜೀರ್ಣಿಸಲಾಗದೇ, ಮುಂದೊಂದು ದಿನ ಇದಕ್ಕೂ ಹೊಸ ತಲೆಪಟ್ಟಿ ಕಟ್ಟಿದರೆ ಆಶ್ಚರ್ಯ ಪಡಬೇಕಾಗಿಲ್ಲ. (ಚೆನ್ನೈನಿಂದ ಬಂದವರಿಗೆ ಉಚಿತ ತಪಾಸಣೆ, ಚಿಕಿತ್ಸೆ)
ಮಾನವೀಯ ದೃಷ್ಟಿಯಿಂದ ಪರಿಹಾರ ಕೆಲಸವನ್ನು ಎಂದಿನಂತೆ ಅತ್ಯಂತ ಶಿಸ್ತುಬದ್ದವಾಗಿ ಮಾಡಿಕೊಂಡು ಬರುತ್ತಿರುವ ಆರ್ ಎಸ್ ಎಸ್ ಸಂಘಟನೆಗೆ, ಪರಿಹಾರದ ವೇಳೆ ಸಂತ್ರಸ್ತರು ನೀಡುತ್ತಿರುವ ಪ್ರೀತಿಯ ಆಶೀರ್ವಾದವೇ ಶ್ರೀರಕ್ಷೆ ಎಂದರೆ ತಪ್ಪಾಗಲಾರದು.
ಯಾಕೆಂದರೆ, ಸಂತ್ರಸ್ತರನ್ನು ರಕ್ಷಿಸುವ ವಿಚಾರದಲ್ಲಾಗಲಿ, ಆಹಾರ ಪೊಟ್ಟಣ ವಿತರಿಸುವ ವಿಚಾರದಲ್ಲಾಗಲಿ ಎಲ್ಲೂ ರಾಜಕೀಯದ ಸುಳಿವು ಇಲ್ಲದೇ ಇರುವುದು.
ಆಹಾರ ಪೊಟ್ಟಣದಲ್ಲಿ ಸಂಘಟನೆಯ ಲೋಗೋವಾಗಲಿ ಅಥವಾ ಬಹುಧರ್ಮೀಯರನ್ನು ಮಾತ್ರ ಹುಡುಕಿ ಪೊಟ್ಟಣ ವಿತರಿಸುವ ಕೆಲಸ ಮಾಡದೇ ಇರುವುದರಿಂದ ಸಂಘಟನೆಯ ಕೆಲಸಕಾರ್ಯಗಳಿಗೆ ಜನ ಮನತುಂಬಿ ನಿಮಗೆ ಒಳ್ಳೆಯದಾಗಲಿ ಎಂದು ಹರಸುತ್ತಿರುವುದು ಚೈನ್ನೈನಲ್ಲಿನ ವಸ್ತುಸ್ಥಿತಿ.
ಆರ್ ಎಸ್ ಎಸ್ ಸಂಘಟನೆ ತೋರಿದ ಕೆಲವೊಂದು ಮಾನವೀಯತೆಯ ಸುದ್ದಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ವಿಪತ್ತು ತಂಡದ ಕೈಜೋಡಿಸಿದ ಸಂಘಟನೆ
ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ ಜೊತೆ ಸಂಘಟನೆಯ ಕಾರ್ಯಕರ್ತರು ಸಾಥ್ ನೀಡಿ, ರಾತ್ರಿ ಹಗಲು ಪಾಳಯದಲ್ಲಿ ಕೆಲಸ ಮಾಡಿ, ಮುಡಿಚೂರು, ಮನ್ನಿವಕ್ಕಂ ಸೇರಿದಂತೆ ಸುಮಾರು ಎಂಬತ್ತಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಂತ್ರಸ್ತರ ಸಂಕಷ್ಟ ಪರಿಹಾರಕ್ಕೆ ಮುಂದಾದರು.
ಪೆರಂಬೂರು ಸುತ್ತಮುತ್ತ
ರಾಜೀವ್ ಗಾಂಧಿ ಹತ್ಯೆಯಾದ ಪೆರಂಬೂರು ಪ್ರದೇಶದಲ್ಲಿರುವ ಸಂತ್ರಸ್ತರಿಗೆ ಇದುವರೆಗೂ ಮೂರೂ ಹೊತ್ತಿನ ಊಟದ ವ್ಯವಸ್ಥೆಯನ್ನು ಸಂಘಟನೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಇದಲ್ಲದೇ ನೇಸಪಾಕ್ಕಂ, ಒಟ್ಟೇರಿ ಪ್ರದೇಶದಲ್ಲೂ ಆಹಾರ ಪೊಟ್ಟಣವನ್ನು ವಿತರಿಸುವ ಕೆಲಸವನ್ನೂ ಮುಂದುವರಿಸಿದೆ.
ಅಣ್ಣಾನಗರ, ರೆಡ್ ಹಿಲ್ಸ್ ಭಾಗ
ಚೆನೈ ನಗರದ ಹೃದಯ ಭಾಗದಲ್ಲಿರುವ ಅಣ್ಣಾನಗರದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು, ರೆಡ್ ಹಿಲ್ಸ್, ಕೊಳತ್ತೂರು, ಟ್ರಿಪ್ಲಿಕೇನ್ ಮುಂತಾದ ಕಡೆ ಸಂಘಟನೆಯ ಕಾರ್ಯಕರ್ತರು ದೇಹದ ಅರ್ಧದಷ್ಟು ಭಾಗ ನೀರು ಆವರಿಸಿದ್ದರೂ, ಈಜಾಡಿಕೊಂಡು ಆಹಾರ ಪೊಟ್ಟಣ ವಿತರಿಸಿದ್ದಾರೆ. ಎಗ್ಮೋರ್, ಬಿ ವಿ ಕಾಲೋನಿ ಮುಂತಾದ ಕಡೆಯೂ ಸಂಘಟನೆಯ ಕಾರ್ಯಕರ್ತರು ಮಾನವೀಯತೆ ಮೆರೆದಿದ್ದಾರೆ.
ಸಹಾಯವಾಣಿಗೂ ಉತ್ತಮ ಪ್ರತಿಕ್ರಿಯೆ
ಬೋಟ್ ಹೋಗಲೂ ದುಸ್ತರವಾಗಿರುವಂತಹ ಪ್ರದೇಶಗಳಿಗೆ ಸೇವಾ ಭಾರತಿ ಸಂಘಟನೆಯೊಂದಿಗೆ ತಲುಪಿ, ಆಹಾರ ಪೊಟ್ಟಣ, ನೀರಿನ ಬಾಟಲ್ ವಿತರಿಸುವ ಕೆಲಸವನ್ನು ಮಾಡಿದೆ. ಸಂತ್ರಸ್ತರಿಗೆ ತುರ್ತಾಗಿ ಪರಿಹಾರ ಸಿಗುವಂತಾಗಲು ಶುರು ಮಾಡಿದ್ದ ಸಂಘಟನೆಯ ಸಹಾಯವಾಣಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಸಂತ್ರಸ್ತನೊಬ್ಬ ವಾಟ್ಸ್ ಅಪ್ ನಲ್ಲಿ ಬರೆದಿದ್ದು ಹೀಗೆ..
ಆರ್ ಎಸ್ ಎಸ್ ಸಂಘಟನೆಯನ್ನು ಉಗ್ರರಂತೆ ಬಿಂಬಿಸುತ್ತಿರುವ ಈ ಸಮಯದಲ್ಲಿ, ಸಂಘಟನೆಯ ಕಾರ್ಯಕರ್ತರನ್ನು ಚನ್ನೈ ರಸ್ತೆಯಲ್ಲಿ ಸಂತ್ರಸ್ತರಿಗೆ ಸಹಾಯ ಮಾಡುತ್ತಿರುವ ದೃಶ್ಯವನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಾನೂ ಪ್ರವಾಹದಲ್ಲಿ ಸಿಕ್ಕಿ ಬೀಳುತ್ತಿರುವುದನ್ನು ಕಂಡ ಸ್ವಯಂಸೇವಕರು ನನ್ನನ್ನು ಜೊತೆಗೆ ಇನ್ನೂ ಹತ್ತು ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿ ಊಟ, ನೀರು ಕೊಟ್ಟರು. ಇದೇ ರೀತಿ ಸ್ವಯಂಸೇವಕರು ಸಂತ್ರಸ್ತರಿಗೆ ನೆರವಾಗುತ್ತಲೇ ಇದ್ದರು. ಮುಂದಿನ ಪುಟ ಕ್ಲಿಕ್ಕಿಸಿ
ವಾಟ್ಸಪ್ ಸಂದೇಶ
ಚೆನ್ನೈ ಪ್ರವಾಹ ಸಂತ್ರಸ್ತರಿಗೆ ಸ್ವಯಸೇವಕರು ಮಾಡುತ್ತಿರುವ ಮಾನವೀಯ ಕೆಲಸ ಮನಮುಟ್ಟುವಂತದ್ದು. ಈ ಘಟನೆಗೆ ನಾನು ಸಾಕ್ಷಿಯಾಗದೇ ಇದ್ದಲ್ಲಿ ನಾನೂ ಕೂಡಾ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತಿರುವುದು ಆರ್ ಎಸ್ ಎಸ್ ನಿಂದ ಎನ್ನುವ ತಪ್ಪು ನಿರ್ಧಾರಕ್ಕೆ ಬರುತ್ತಿದ್ದೆ ಎಂದು ಪ್ರವಾಹದಲ್ಲಿ ಬದುಕುಳಿದು ಬಂದ ವ್ಯಕ್ತಿಯೊಬ್ಬರು ವಾಟ್ಸಪ್ ಸಂದೇಶದಲ್ಲಿ ಬರೆದು ಕೊಂಡಿದ್ದಾರೆ.