ಪಾಕಿಸ್ತಾನ ವಾಯುಪ್ರದೇಶ ಬಂದ್, ಭಾರತಕ್ಕಾಗಿರುವ ನಷ್ಟವೆಷ್ಟು?
ನವದೆಹಲಿ, ಜುಲೈ 04: ಪುಲ್ವಾಮಾ ಮೇಲೆ ಉಗ್ರರ ದಾಳಿಗೆ ಪ್ರತಿಯಾಗಿ ಬಾಲಾಕೋಟ್ ಮೇಲೆ ಭಾರತ ದಾಳಿ ನಡೆಸಿ ಉಗ್ರರನ್ನು ಸದೆಬಡೆದ ಬಳಿಕ ಪಾಕಿಸ್ತಾನ ಜೊತೆಗಿನ ವಾಣಿಜ್ಯ, ವ್ಯವಹಾರ ಸಂಬಂಧವನ್ನು ಹಳಸತೊಡಗಿತು. ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಬಂದ್ ಮಾಡಿತು. ಇದರಿಂದ ಭಾರತಕ್ಕೆ ಸುಮಾರು 491 ಕೋಟಿ ರು ನಷ್ಟವಾಗಿದೆ.
ಫೆಬ್ರವರಿಯಿಂದ ಜುಲೈ 02ತನಕ ವಾಯುಪ್ರದೇಶವನ್ನು ಬಂದ್ ಮಾಡಿದ ಮೇಲೆ ವಿಮಾನ ಯಾನ ಟಿಕೆಟ್ ದರ ಶೇಕಡಾ ಇಪ್ಪತ್ತೈದರಷ್ಟು ಏರಿಕೆ ಆಗಿದೆ. ಖಾಸಗಿ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್, ಇಂಡಿಗೋ ಹಾಗೂ ಗೋ ಏರ್ ಕ್ರಮವಾಗಿ 30.73 ಕೋಟಿ ರು, 25.1 ಕೋಟಿ ಹಾಗೂ 2.1 ಕೋಟಿ ರು ನಷ್ಟ ಅನುಭವಿಸಿವೆ ಎಂದು ರಾಜ್ಯಸಭೆಯಲ್ಲಿ ನಾಗರಿಕ ವಿಮಾನಯಾನ ಸಚಿವೆ ಹರ್ ದೀಪ್ ಸಿಂಗ್ ಪುರಿ ಹೇಳಿದರು.
ವೈಮಾನಿಕ ನೆಲೆ ಬಂದ್ ಆಗಿದ್ದರಿಂದ ನೂರಾರು ವಾಣಿಜ್ಯ ಹಾಗೂ ಸರಕು ಸಾಗಣೆ ವಿಮಾನ ಯಾನದ ಮೇಲೆ ಪರಿಣಾಮ ಬೀರಿದೆ. ಎಕಾನಮಿ ಕ್ಲಾಸ್ ನ ದೆಹಲಿಯಿಂದ ಯು.ಎಸ್. ಅಥವಾ ಯು.ಕೆ.ಗೆ ತೆರಳುವ ಟಿಕೆಟ್ ಗೆ 1.10 ಲಕ್ಷಕ್ಕಿಂತ ಹೆಚ್ಚಾಗಿದೆ. ಈ ಹಿಂದೆ ದರ 70 ಸಾವಿರದಷ್ಟಿತ್ತು.

ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ(ಐಎಎಫ್) ಫೆಬ್ರವರಿ 26ರಂದು ದಾಳಿ ನಡೆಸಿದ ಬಳಿಕ ಪಾಕಿಸ್ತಾನ 11 ವಿಮಾನಯಾನ ಮಾರ್ಗಗಳನ್ನು ನಿರ್ಬಂಧಿಸಿದೆ. ಸದ್ಯಕ್ಕೆ ದಕ್ಷಿಣ ಪಾಕಿಸ್ತಾನದ ಎರಡು ಮಾರ್ಗಗಳನ್ನು ಮಾತ್ರ ಮುಕ್ತಗೊಳಿಸಲಾಗಿದೆ.
ಮೇ 31ರಂದು ಭಾರತದ ವಾಯುನೆಲೆಗಳಲ್ಲಿ ನಿರ್ಬಂಧ ತೆರವುಗೊಳಿಸಲು ವಾಯುಸೇನೆ ಸಮ್ಮತಿಸಿತ್ತು. ಆದರೆ, ಪಾಕಿಸ್ತಾನ ಮಾತ್ರ ವಾಣಿಜ್ಯ ವಿಮಾನಯಾನ ಹಾರಾಟಕ್ಕೂ ನಿರ್ಬಂಧ ಹೇರಿದೆ.ಯುಎಸ್ ಹಾಗೂ ಯುರೋಪ್ ರಾಷ್ಟ್ರಗಳ ಜೊತೆಗಿನ ಭಾರತದ ವಾಯುಸಂಪರ್ಕಕ್ಕೆ ಪಾಕಿಸ್ತಾನ ಅಡ್ಡಿಯಾಗಿದ್ದು, ವಾಯುಪ್ರದೇಶ ಮುಕ್ತಗೊಳಿಸುವ ನಿರ್ಧಾರ ಯಾವಾಗ ಕೈಗೊಳ್ಳಲಿದೆ ಎಂಬುದು ಸ್ಪಷ್ಟವಿಲ್ಲ ಎಂದು ಹರ್ ದೀಪ್ ಸಿಂಗ್ ಪುರಿ ಅವರು ತಮ್ಮ ಲಿಖಿತ ಉತ್ತರದಲ್ಲಿ ಹೇಳಿದರು.
ಈ ಮಾರ್ಗದಲ್ಲಿ ಅತಿದೊಡ್ಡ ವಿಮಾನಯಾನ ಜಾಲ ಹೊಂದಿರುವ ಇಂಡಿಗೋ ಸಂಸ್ಥೆ ಈಗ ದೆಹಲಿಯಿಂದ ಇಸ್ತಾನ್ ಬುಲ್ ಗೆ ನೇರ ವಿಮಾನ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಮಾರ್ಚ್ ತಿಂಗಳಿನಲ್ಲಿ ದೆಹಲಿ- ಇಸ್ತಾನ್ ಬುಲ್ ನಡುವೆ ಕಡಿಮೆ ವೆಚ್ಚದ ಪ್ರಯಾಣವನ್ನು ಇಂಡಿಗೋ ಘೋಷಿಸಿತ್ತು. ಈಗ ಅರೇಬಿಯನ್ ಸಮುದ್ರ ಮೇಲೆ ಹಾರಿ, ಕತಾರ್ ನ ದೋಹಾದಲ್ಲಿ ನಿಲ್ಲಿಸಿ, ಇಂಧನ ಭರ್ತಿ ಮಾಡಿಕೊಂಡು ತೆರಳಬೇಕಿದೆ.












Click it and Unblock the Notifications