ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಧಾರ್ಮಿಕ, ಆಧಾತ್ಮ ಮುಖಂಡರ ಭೀತಿ!
ಭೋಪಾಲ್,ನವೆಂಬರ್ 04 : ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವವರ ಹವಾ ಸ್ವಲ್ಪ ಜೋರಾಗಿದೆ. ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಧಾರ್ಮಿಕ, ಆಧಾತ್ಮ ಮುಖಂಡರ ಭೀತಿ ಎದುರಾಗಿದೆ.
ನವೆಂಬರ್ 28,2018ರಂದು ನಡೆಯಲಿರುವ ಚುನಾವಣೆಯ ಕಣದಲ್ಲಿ ಈಗಾಗಲೇ ಅನೇಕ ಹಿಂದೂ ಪರ ಮುಖಂಡರು, ಬಾಬಾಗಳು ಸ್ಪರ್ಧಿಸುತ್ತಿದ್ದಾರೆ. ಹಿಂದೂ ಮತಗಳನ್ನು ನೆಚ್ಚಿಕೊಂಡಿರುವ ಬಿಜೆಪಿಗೆ ಇದರಿಂದ ಕೊಂಚ ಹಿನ್ನಡೆಯುಂಟಾಗುವ ನಿರೀಕ್ಷೆಯಿದೆ.
ಎಬಿಪಿ ನ್ಯೂಸ್ ಸಮೀಕ್ಷೆ: ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಹವಾ
ಶಿವರಾಜ್ ಸಿಂಗ್ ಅವರ ಸರ್ಕಾರದ ವಿರುದ್ಧ ಧಾರ್ಮಿಕ ಮುಖಂಡರು ತಿರುಗಿ ಬಿದ್ದಿದ್ದು, ನೇರವಾಗಿ ಕಣಕ್ಕಿಳಿದು ಹೋರಾಟಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ಕಂಪ್ಯೂಟರ್ ಬಾಬಾ, ಪಂಡೋಖರ್ ಸರ್ಕಾರ್ ಹಾಗೂ ಬೆಂಬಲಿಗರು, ಸಂತ ಗುರುಶರಣ್ ಶರ್ಮ ಅವರು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.
ಸಂಜಿ ವಿರಾಸತ್ ಪಾರ್ಟಿ ಹೆಸರಿನಲ್ಲಿ 50 ಅಭ್ಯರ್ಥಿಗಳಿಗೆ ಹಿಂದೂ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಶರ್ಮ, ಎಲ್ಲಾ ಜಾತಿ, ಮತ, ಪಂಥಗಳ ಆರ್ಥಿಕ ಸ್ತರದ ಅನುಗುಣವಾಗಿ ಮೀಸಲಾತಿ ಸಿಗಬೇಕು ಎಂಬ ಕಾರಣಕ್ಕೆ ಚುನಾವಣೆ ಕಣಕ್ಕಿಳಿದಿದ್ದೇವೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಬಿಜೆಪಿ ಸರ್ಕಾರವು ಭಾರತೀಯ ಸಂಸ್ಕೃತಿ, ಗೋ ರಕ್ಷಣೆಯಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.
ಸಮಾಜದಲ್ಲಿ ಅಸಮತೋಲನ ಉಂಟಾದಾಗ, ಜನ ಸಾಮಾನ್ಯರಿಗೆ ಅನ್ಯಾಯವಾದಾಗ ಸಾಧು ಸಂತರು ಮುಖ್ಯ ವಾಹಿನಿಗೆ ಬಂದು ಸರಿಪಡಿಸುವುದನ್ನು ಇತಿಹಾಸದಿಂದ ಕಾಣಬಹುದು.
ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ! ಚೌಹಾಣ್ ವಿಶ್ವಾಸ
ಬಿಜೆಪಿ ವಿರುದ್ಧ ಸಾಧು ಸಂತರನ್ನು ಒಗ್ಗೂಡಿಸುವ ಕಾರ್ಯ ಸಾಂಗವಾಗಿ ನಡೆದಿದೆ. ಕಂಪ್ಯೂಟರ್ ಬಾಬಾ, ಪ್ರವಾಚಕ ದೇವಕಿ ನಂದನ್ ಠಾಕೂರ್ ಮುಂತಾದವರು ಮುಂದಾಳತ್ವ ವಹಿಸಿಕೊಂಡಿದ್ದಾರೆ. ಆದರೆ, ವೈಷ್ಣವ ಸಂತರು, ದಿಗಂಬರ್ ಅಖಾರ ನಡುವಿನ ವೈಮನಸ್ಯದಿಂದ ಹಿಂದೂ ಮುಖಂಡರ ತಂತ್ರ ಯಶಸ್ವಿಯಾಗಿಲ್ಲ.