ಅಂಬಾನಿಯ ವಿಮಾ ಕಂಪೆನಿಗೂ ಮೋದಿ ಸರ್ಕಾರದ ನೆರವು? ಮತ್ತೊಂದು ವಿವಾದ
ಶ್ರೀನಗರ, ಅಕ್ಟೋಬರ್ 6: ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರ ಆಡಳಿತವು ತನ್ನ ನೌಕರರು, ಪಿಂಚಣಿದಾರರು ಮತ್ತು ಮಾನ್ಯತೆ ಪಡೆದ ಪತ್ರಕರ್ತರಿಗೆ ಸಮೂಹ ಆರೋಗ್ಯ ವಿಮಾ ಯೋಜನೆಯ ನೀತಿಯನ್ನು ಸೆ.20ರಂದು ಜಾರಿಗೊಳಿಸಿದೆ.
ಆದರೆ, ಈ ಮೆಡಿಕ್ಲೈಮ್ ಯೋಜನೆಯು ಅನಿಲ್ ಅಂಬಾನಿ ಅವರ ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಜತೆ ಸಹಭಾಗಿತ್ವ ಹೊಂದಿದೆ ಎಂದು ಸುದ್ದಿಸಂಸ್ಥೆ ವರದಿ ಹೇಳಿದೆ.
ಈ ಆರೋಗ್ಯ ವಿಮಾ ಯೋಜನೆಯು ಸರ್ಕಾರಿ ನೌಕರರಿಗೆ ವಾರ್ಷಿಕ 8,777 ರೂ ಮತ್ತು ಪಿಂಚಣಿದಾರರಿಗೆ 22,229 ರೂ. ಪ್ರೀಮಿಯಂ ಹೊಂದಿದೆ ಎನ್ನಲಾಗಿದೆ.
ಸಾರ್ವಜನಿಕ ವಲಯದ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಈ ಯೋಜನೆ ಕಡ್ಡಾಯವಾಗಿದೆ. ಪಿಂಚಣಿದಾರರು ಮತ್ತು ಇತರೆ ವರ್ಗದ ನೌಕರರು ಹಾಗೂ ಮಾನ್ಯತೆ ಪಡೆದ ಪತ್ರಕರ್ತರು ಇಚ್ಛಿಸಿದ್ದಲ್ಲಿ ಈ ವಿಮಾ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಆದರೆ, ಸರ್ಕಾರದ್ದೇ ಆದ ಎಲ್ಐಸಿ ಇರುವಾಗ ನಿರ್ದಿಷ್ಟ ಸರ್ಕಾರ ಉದ್ಯೋಗಿಗಳಿಗೆ ಕಡ್ಡಾಯ ವಿಮೆ ಜಾರಿಗೊಳಿಸಲು ರಿಲಯನ್ಸ್ ವಿಮಾ ಸಂಸ್ಥೆಯನ್ನು ಆಯ್ದುಕೊಂಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಂಬಾನಿ, ಅದಾನಿಯಂತಹ ಉದ್ಯಮಿಗಳಿಗೆ ಸಹಾಯ ಮಾಡಲು ಮೋದಿ ಆದ್ಯತೆ ನೀಡುತ್ತಿದ್ದಾರೆಯೇ ಹೊರತು ಸಾರ್ವಜನಿಕರ ಅಭಿಪ್ರಾಯಕ್ಕೆ ಕಿಮ್ಮತ್ತು ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ರಫೇಲ್ ಒಪ್ಪಂದದಲ್ಲಿ ರಿಲಯನ್ಸ್ ಕಂಪೆನಿಗೆ ನೆರವಾಗಲು ಮೋದಿ ಒಪ್ಪಂದವನ್ನು ಬದಲಿಸಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಮತ್ತೊಂದು ವಿವಾದ ಹುಟ್ಟಿಕೊಂಡಿದೆ.

ಆರು ಲಕ್ಷ ರೂ.ವರೆಗೆ ವಿಮೆ
ಈ ವಿಮಾ ಯೋಜನೆಯು ಜಮ್ಮು ಮತ್ತು ಕಾಶ್ಮೀರದ ಪ್ರತಿ ನೌಕರ ಅಥವಾ ಪಿಂಚಣಿದಾರರಿಗೆ ಅವರ ಕುಟುಂಬದ ಐವರು ಅವಲಂಬಿತರ ಜತೆಗೆ ವಾರ್ಷಿಕ ಒಟ್ಟು ಆರು ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಒದಗಿಸುವ ನಿರೀಕ್ಷೆಯಿದೆ.

ನಾವು ಹರಕೆಯ ಕುರಿಗಳು!
ಸರ್ಕಾರಿ ನೌಕರರನ್ನು ಹರಕೆಯ ಕುರಿಗಳನ್ನಾಗಿ ಮಾಡಲಾಗುತ್ತಿದೆ. ಇದು ಸಂಪೂರ್ಣ ಅಸಮರ್ಥನೀಯ ಮತ್ತು ಸರ್ಕಾರಿ ನೌಕರರಿಗೆ ಬಹುದೊಡ್ಡ ಹೊರೆಯಾಗಲಿದೆ. ಇದು ಅನ್ಯಾಯದ, ಒಪ್ಪಿಕೊಳ್ಳಲಾಗದ ಯೋಜನೆ ಎಂದು ನೌಕರರ ಜಂಟಿ ಕಾರ್ಯ ಸಮಿತಿ (ಇಜೆಎಸಿ) ಆರೋಪಿಸಿದೆ.
ಇದರಿಂದ ಒಂದು ನಿರ್ದಿಷ್ಟ ಕಂಪೆನಿಗೆ ಲಾಭ ಸಿಗಲಿದೆ ಎಂದು ಆರೋಪಿಸಿರುವ ಸಮಿತಿ, ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
|
ಮೋದಿ-ರಿಲಯನ್ಸ್ ಸಂಬಂಧದ ಭಾಗ
ಈ ವಿಮಾ ಯೋಜನೆಯು ನರೇಂದ್ರ ಮೋದಿ ಮತ್ತು ರಿಲಯನ್ಸ್ ಬಾಂಧವ್ಯದ ಭಾಗ ಎಂದು ಕಾಂಗ್ರೆಸ್ ಮುಖಂಡ ಸಲ್ಮಾನ್ ನಿಜ್ಮಿ ಆರೋಪಿಸಿದ್ದಾರೆ.
ಮೋದಿ ಅವರು ರಿಲಯನ್ಸ್ ಜತೆ ಯಾವ ರೀತಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಒಳನೋಟ ಬೇಕಿದ್ದರೆ ಯಾವುದೇ ಬಿಡ್ಡಿಂಗ್ ನಡೆಸದೆ, ಸರ್ಕಾರದ್ದೇ ಆದ ಎಲ್ಐಸಿಯನ್ನು ಕಡೆಗಣಿಸಿ ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ನೌಕರರು ರಿಲಯನ್ಸ್ ವಿಮೆಯನ್ನು ಕೊಳ್ಳುವಂತೆ ಬಲವಂತ ಮಾಡುತ್ತಿರುವುದನ್ನು ನೋಡಿದರೆ ಸಾಕು. ವರ್ಷಕ್ಕೆ ಸಂಗ್ರಹಿಸುವ ಪ್ರೀಮಿಯಂ ಮೊತ್ತ 8 ಸಾವಿರ ಕೋಟಿ ರೂ. ಆಗಲಿದೆ ಎಂದು ನಿಜ್ಮಿ ಟ್ವೀಟ್ ಮಾಡಿದ್ದಾರೆ.
|
ಸಾರ್ವಜನಿಕರ ಅಭಿಪ್ರಾಯಕ್ಕೆ ಕಿಮ್ಮತ್ತಿಲ್ಲ
ಇದು ನಿಜಕ್ಕೂ ನಂಬಲಸಾಧ್ಯ! ಸಾರ್ವಜನಿಕರ ಅಭಿಪ್ರಾಯದ ಬಗ್ಗೆ ಕಾಳಜಿ ಇಲ್ಲ. ರಿಲಯನ್ಸ್ ಇನ್ಶೂರೆನ್ಸ್ನಿಂದ ಆರೋಗ್ಯ ವಿಮೆ ಕೊಳ್ಳುವುದನ್ನು ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಉದ್ಯೋಗಿಗಳಿಗೆ ಕಡ್ಡಾಯಗೊಳಿಸಿದೆ. ನೌಕರರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ ಎಂದು ಕಾಂಗ್ರೆಸ್ ಮುಖಂಡ ಶಕೀಲ್ ಅಹ್ಮದ್ ಆರೋಪಿಸಿದ್ದಾರೆ.
|
ಮೋದಿ ಸ್ವಜನ ಪಕ್ಷಪಾತಿ
ರಿಲಯನ್ಸ್ ಆರೋಗ್ಯ ವಿಮೆಯನ್ನು ಪಡೆದುಕೊಳ್ಳುವುದನ್ನು ಮೋದಿ ಸರ್ಕಾರ ಕಡ್ಡಾಯಗೊಳಿಸಿದೆ. ಸರ್ಕಾರಿ ನೌಕರರಿಗೆ ರಿಲಯನ್ಸ್ ಆರೋಗ್ಯ ವಿಮೆಯನ್ನೇ ಪಡೆದುಕೊಳ್ಳುವಂತೆ ಮೋದಿ ಏಕೆ ಕಡ್ಡಾಯಗೊಳಿಸಿದ್ದಾರೆ? ಅಂಬಾನಿಗೆ ನೆರವಾಗಲು ಮೋದಿ ಆದ್ಯತೆ ನೀಡುತ್ತಾರೆ. ಏಕೆಂದರೆ ಮೋದಿ ಸ್ವಜನಪಕ್ಷಪಾತಿ ಎಂದು ಸ್ಯಾಮ್ ಫಿಲಿಪೋಸ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications