Heatwave Update: ಉತ್ತರ ಭಾರತದಲ್ಲಿ ರಣ ರಣ ಬಿಸಿಲು: ರಾಜಸ್ಥಾನದ ಚುರುವಿನಲ್ಲಿ ದಾಖಲೆ ಮುಟ್ಟಿದ ತಾಪಮಾನ
ದೇಶದಲ್ಲಿನ ಜನ ಈಗ ಬರೀ ಆಕಾಶವನ್ನೇ ನೋಡುವುದು ಆಗಿದೆ. ಮೊದಲು ರಣ ರಣ ಬಿಸಿಲಿಗಾಗಿ ನೋಡುತ್ತಿದ್ದರು. ಈಗಲೂ ಉತ್ತರ ಭಾರತದಲ್ಲಿ ಈ ಬಿಸಿಲು ಯಾವಾಗ ಕಡಿಮೆ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ. ಈ ಬಾರಿ ಉತ್ತರ ಭಾರತ ಬಿಸಿಲಿನ ಹೊಡೆತಕ್ಕೆ ನಲುಗಿದೆ.
ಕೆಲವು ರಾಜ್ಯಗಳಲ್ಲಿ ಈಗ ಮಳೆ ಆರಂಭವಾಗಿದೆ. ಆದರೆ ಉತ್ತರದಲ್ಲಿ ಇನ್ನೂ ವರುಣ ದರ್ಶನ ಆಗಿಲ್ಲ. ಹೀಗಾಗಿ ಇಲ್ಲಿನ ತಾಪಾಮಾನ ಜನರನ್ನು ಕಂಗಾಲು ಮಾಡಿದೆ. ಉತ್ತರ ಭಾರತದಲ್ಲಿ ಜನ ಆಗಸದಲ್ಲಿ ಮೋಡಗಳನ್ನು ನೋಡಿ ಖುಷಿ ಪಡುವ ಕಾಲ ಬಂದಿದೆ. ಇನ್ನೇನು ಬೆಸಿಗೆ ಕಾಲ ಹೋಯಿತು, ಮಳೆ ಗಾಲ ಆರಂಭವಾಗುತ್ತದೆ ಎಂಬುದನ್ನು ಕಾಯುತ್ತಿದ್ದ ಜನರಿಗೆ ಆರಂಭದಲ್ಲಿ ನಿರಾಸೆ ಕಾದಿದೆ.

ಕೆಲಸಕ್ಕೆ ಹೋಗವವರನ್ನು ಬಿಟ್ಟರೆ ಬೇರೆ ಯಾರೂ ಮನೆಯಿಂದ ಆಚೆ ಕಾಲು ಇಡದಷ್ಟು ಬಿಸಿಲು ಜನರನ್ನು ಕಂಗೆಡಿಸಿದೆ. ರಸ್ತೆಯಲ್ಲಿ ತರಕಾರಿ ಮಾರುವವರು, ರಿಕ್ಷಾ ಓಡಿಸುವವರು, ದಿನಗೂಲಿ ಕೆಲಸಗಾರರು ಈ ಬಿಸಿಲಿನ ಹೊಡೆತಕ್ಕೆ ಕಂಗಾಲಿಗಿದ್ದಾರೆ.
ಉತ್ತರದಲ್ಲಿ ಭಾರೀ ಬಿಸಿಲು
ಈ ಭಾರಿ ಭಾರತದಲ್ಲಿ ಚಳಿಗಾಲವು ಮುಗಿದ ತಕ್ಷಣ ಬೇಸಿಗೆ ಪ್ರಾರಂಭವಾಗಿದೆ. ಮೇ ತಿಂಗಳಲ್ಲೇ ಬಿಸಿಲಿನ ಬೇಗೆ ಜನರನ್ನು ಕಾಡಲಾರಂಭಿಸಿದೆ. ಬಿಸಿಲಿನ ಝಳದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ದೇಶದ ಅನೇಕ ಭಾಗಗಳಲ್ಲಿ ಮಂಗಳವಾರ ಅತ್ಯಂತ ಬಿಸಿಲು ದಾಖಲಾಗಿದೆ. ಮರುಭೂಮಿ ರಾಜಸ್ಥಾನದಲ್ಲಿ ಮನೆಯಿಂದ ಹೊರಗಡೆ ಕಾಲು ಇಡುವುದು ಸಹ ದುಸ್ಥರವಾಗಿದೆ.
ರಾಜಸ್ಥಾನದ ಪಿಲಾನಿ ಜಿಲ್ಲೆಯಲ್ಲಿ ಬಿಸಿಲು 25 ವರ್ಷಗಳ ದಾಖಲೆಯನ್ನು ಮುರಿದಿದೆ. 28 ಮೇ 2024 ರಂದು ಪಿಲಾನಿಯ ಗರಿಷ್ಠ ತಾಪಮಾನ 49 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ರಾಜ್ಯದ ಚುರುವಿನ ಗರಿಷ್ಠ ತಾಪಮಾನ 50.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ದಾಖಲೆಯ ಬಿಸಿಲು
ರಾಜಸ್ಥಾನದ ಜೊತೆಗೆ, ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ತಾಪಮಾನವು ದಾಖಲೆಗಳನ್ನು ಸೃಷ್ಟಿಸಿದೆ. ಇಂದು ಪಂಜಾಬ್ನ ಬಟಿಂಡಾದಲ್ಲಿ ದಿನದ ತಾಪಮಾನ 49.3 ಡಿಗ್ರಿ ಸೆಲ್ಸಿಯಸ್ನಷ್ಟಿದ್ದರೆ, ಗರಿಷ್ಠ ತಾಪಮಾನ ಹಿಸಾರ್ನಲ್ಲಿ 49.3 ಡಿಗ್ರಿ ಮತ್ತು ಸಿರ್ಸಾದಲ್ಲಿ 50.3 ಡಿಗ್ರಿ ದಾಖಲಾಗಿದೆ. ದೆಹಲಿಯ ಮುಂಗೇಶ್ಪುರದಲ್ಲಿ 49.9 ಡಿಗ್ರಿ ಸೆಲ್ಸಿಯಸ್, ನಜಾಫ್ಗಢದಲ್ಲಿ 49.8 ಮತ್ತು ನರೇಲಾದಲ್ಲಿ 49.9 ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮುಂಗೇಶ್ಪುರ ಮತ್ತು ನರೇಲಾದಲ್ಲಿ ದಾಖಲಾದ ತಾಪಮಾನವು ದೆಹಲಿಯ ಇತಿಹಾಸದಲ್ಲಿ ಗರಿಷ್ಠ ತಾಪಮಾನವಾಗಿದೆ.

ಮೇ 28 ರಂದು ಮಧ್ಯಪ್ರದೇಶದ ನಿವಾರಿಯಲ್ಲಿ 48.5 ಡಿಗ್ರಿ, ದಾತಿಯಾದಲ್ಲಿ 48.4, ರೇವಾದಲ್ಲಿ 48.2 ಮತ್ತು ಖಜುರಾಹೊದಲ್ಲಿ 48 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ. ಯುಪಿಯ ಝಾನ್ಸಿಯಲ್ಲಿ ಗರಿಷ್ಠ ತಾಪಮಾನ 49 ಡಿಗ್ರಿ, ಪ್ರಯಾಗರಾಜ್ನಲ್ಲಿ 48.2 ಡಿಗ್ರಿ, ವಾರಣಾಸಿಯಲ್ಲಿ 47.6 ಡಿಗ್ರಿ ಮತ್ತು ಕಾನ್ಪುರದಲ್ಲಿ 47.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬಿಸಿಗಾಳಿಗೆ ಕಾರಣವೇನು?
ಮರುಭೂಮಿಯಲ್ಲಿನ ವಾತಾವರಣದ ಬದಲಾವಣೆಗಳು ವಾಯುವ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಮೇ ತಿಂಗಳಲ್ಲಿ ಮರುಭೂಮಿಯು ಸೂರ್ಯನ ಶಾಖದಿಂದ ಬಿಸಿಯಾಗುತ್ತದೆ ಮತ್ತು ತಾಪಮಾನವು 50 ಡಿಗ್ರಿ ಸೆಲ್ಸಿಯಸ್ಗೆ ಏರುತ್ತದೆ. ದೆಹಲಿ, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್ನಲ್ಲಿ ಬರ ಮತ್ತು ಅದರ ಜೊತೆಗಿನ ಗಾಳಿಯ ದಿಕ್ಕು ಶಾಖವನ್ನು ಹೆಚ್ಚಿಸುತ್ತದೆ. ಶಾಖಕ್ಕೆ ಮತ್ತೊಂದು ಕಾರಣವೆಂದರೆ ಪಶ್ಚಿಮದಿಂದ ಬರುವ ಬಿಸಿ ಗಾಳಿ. ಈ ಕಾರಣದಿಂದಾಗಿ, ಮರುಭೂಮಿಯ ಶಾಖವು ವಾಯುವ್ಯದ ಬಯಲು ಪ್ರದೇಶಕ್ಕೆ ಹರಿಯುತ್ತದೆ. ಇದರಿಂದಾಗಿ ದೆಹಲಿ ಮತ್ತು ಸುತ್ತಮುತ್ತಲಿನ ತಾಪಮಾನವು ವೇಗವಾಗಿ ಹೆಚ್ಚಾಗುತ್ತದೆ.












Click it and Unblock the Notifications