"ಬಿಜೆಪಿ ಅಧಿಕಾರ ಅವಧಿಯಲ್ಲೇ ರಾಮಮಂದಿರ ನಿರ್ಮಾಣ"
ಲಕ್ನೋ, ಜೂ.7: ವಿವಾದಿತ ಬಿಜೆಪಿ ಸಂಸದ ಸಾಕ್ಷಿ ಮಹರಾಜ್ ಅವರು ಭಾನುವಾರ ಮತ್ತೊಮ್ಮೆ ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಹೇಳಿಕೆ ನೀಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗಲೇ ಶ್ರೀರಾಮಚಂದ್ರನ ದೇಗುಲ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಉನ್ನಾವೊ ಕ್ಷೇತ್ರದ ಸಂಸದ ಸಾಕ್ಷಿ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ,, ಬಿಜೆಪಿ ಕಾಲದಲ್ಲೇ ಮಂದಿರ ನಿರ್ಮಾಣವಾಗಲಿದೆ. ಕಾಂಗ್ರೆಸ್ ಅಥವಾ ಸಮಾಜವಾದಿ ಮುಲಾಯಂ, ಬಹುಜನ ಸಮಾಜವಾದಿ ಮಾಯಾವತಿ ನೆರವು ದೇಗುಲ ಕಟ್ಟಲು ಸಾಧ್ಯವೇ? ನಮ್ಮ ಗುರಿ ಸ್ಪಷ್ಟವಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಈಗ ಒಂದು ವರ್ಷ ಆಗಿದೆ ಅಷ್ಟೇ. ಇನ್ನೂ ನಾಲ್ಕು ವರ್ಷ ಕಾಲಾವಕಾಶ ಇದೆ' ಎಂದರು.

'ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗದಿದ್ದರೆ ನರೇಂದ್ರ ಮೋದಿ ಸರ್ಕಾರ ಅಧಿಕಾರ ಕಳೆದುಕೊಳ್ಳಬೇಕಾದೀತು' ಎಂದು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ಸಂದೇಶ ನೀಡಿದ ಬೆನ್ನಲ್ಲೇ ಬಿಜೆಪಿ ಸಂಸದ ಸಾಕ್ಷಿ ಅವರು ಈ ರೀತಿ ಉತ್ತರಿಸಿದ್ದಾರೆ.
ಕೇವಲ ಅಭಿವೃದ್ಧಿ ಮಂತ್ರದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಇನ್ನೂ ಹಲವು ಪ್ರಮುಖ ವಿಚಾರಗಳ ಬಗ್ಗೆ ಭರವಸೆಯಿತ್ತು ಅಧಿಕಾರ ಪಡೆದಿದೆ. ಅದರಲ್ಲಿ ರಾಮ ಮಂದಿರ ನಿರ್ಮಾಣವೂ ಒಂದು. ಈಗ ಅದನ್ನು ನಿರ್ಲಕ್ಷಿಸಿದರೆ ವಾಜಪೇಯಿ ಸರ್ಕಾರಕ್ಕಾದ ಗತಿಯೇ ಆದೀತು ಎಂದು ವಿಎಚ್ಪಿಯ ವಕ್ತಾರ ಸುರೇಂದ್ರ ಜೈನ್ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಸಾಧು ಮತ್ತು ಆಧ್ಯಾತ್ಮ ಗುರುಗಳೊಂದಿಗೆ ಸಭೆ ಸೇರಿ ಪ್ರಧಾನಿಯವರನ್ನು ಮಂದಿರ ನಿರ್ಮಾಣಕ್ಕೆ ಒತ್ತಾಯಿಸಲಾಗುವುದು. ನಾವು ಬಾಬರ್ ಪರ ನಿಲ್ಲಲು ಹೇಗೆ ಸಾಧ್ಯ? ದೇಶದ ಮೇಲೆ ದಾಳಿ ಮಾಡಿದವರ ಪರ ನಿಲ್ಲುವುದು ಯಾವುದೇ ದೇಶಭಕ್ತನ ಕೆಲಸವಲ್ಲ, ರಾಮ ಮಂದಿರ ನಿರ್ಮಾಣ ಮಾಡಲು ಬಿಜೆಪಿ ಹಿಂದೇಟು ಹಾಕಿದರೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರಕ್ಕೆ ಆದ ಗತಿಯೇ ಮೋದಿ ಸರ್ಕಾರಕ್ಕೂ ಆಗಲಿದೆ ಎಂದು ವಿಎಚ್ಪಿಯ ವಕ್ತಾರ ಸುರೇಂದ್ರ ಜೈನ್ ಸರ್ಕಾರವನ್ನು ಎಚ್ಚರಿಸಿದ್ದರು. (ಪಿಟಿಐ)












Click it and Unblock the Notifications