ಪ್ರತಿ ಭಾರತೀಯನಿಗೂ ಇಂಟರ್ ನೆಟ್ ಸೇವೆ, ರಾಜೀವ್ ಚಂದ್ರಶೇಖರ್ 5 ಸಲಹೆ
ಟೆಲಿಕಾಂ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಿಂದ (ಐಸಿಟಿ) ನೂರಾರು ಕೋಟಿ ಭಾರತೀಯರ ಬದುಕಲ್ಲಿ ಬದಲಾವಣೆಗಳಾಗಿವೆ. ಆರ್ಥಿಕತೆಯ ಬಂಡಿಗೆ ಒಂದು ವೇಗ ಒದಗಿಸಿದೆ. ಸುಂದರವಾದ ನೆನಪುಗಳು, ಸಂತೃಪ್ತಿ, ಒಳ್ಳೆ ಹಾಗೂ ಕೆಟ್ಟ ಅನುಭವಗಳು ಇದರ ಜತೆಗಿವೆ ಎಂದು ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೆಂಗಳೂರು ಸುಧಾರಣೆಗೆ ರಾಜೀವ್ ಚಂದ್ರಶೇಖರ್ 5 ಅದ್ಭುತ ಸಲಹೆ
ಮುಂದಿನ ವರ್ಷಕ್ಕೆ ಖಾಸಗಿ ವಲಯದ ಮೊದಲ ಸೆಲ್ಯುಲಾರ್ ಸೇವೆ ಒದಗಿಸುವ ಕಂಪನಿ ಪರವಾನಗಿಗೆ ಸಹಿ ಆಗಿ ಇಪ್ಪತ್ತೈದು ವರ್ಷ ಪೂರ್ಣಗೊಳ್ಳುತ್ತದೆ. ಇಷ್ಟು ಸುದೀರ್ಘ ಕಾಲದ ನೆನಪನ್ನು ಒಮ್ಮೆ ಮೆಲುಕು ಹಾಕಿ, ಭವಿಷ್ಯ ಹೇಗಿರಬೇಕು ಎಂಬ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ನೂರಾರು ಕೋಟಿ ಡಾಲರ್ ಗಳ ಬಂಡವಾಳ, ಹತ್ತಾರು ಲಕ್ಷ ಉದ್ಯೋಗಗಳು, ಜಿಡಿಪಿಯ ಶೇ 6.5ರಷ್ಟು ಆದಾಯ ತರುತ್ತಿರುವ ಟೆಲಿಕಾಂ ವಲಯದ ಇತಿಹಾಸದಿಂದ ಪಾಠ ಕಲಿಯಲು ಸಾಕಷ್ಟಿದೆ. ಆದ ತಪ್ಪುಗಳು ಪುನರಾವರ್ತನೆ ಆಗದಂತೆ ಮುಂದಿನ ಹೆಜ್ಜೆ ಇಡಬೇಕಿದೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್), ಮಾಹಿತಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯ ಹಾಗೂ ಸಂವಹನ ಸಚಿವಾಲಯ- ಈ ಮೂರು ಸಹ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಮೂರರ ಕೆಲಸ ಸಂಸ್ಕೃತಿ, ಸಂಘಟನೆ ಹಾಗೂ ಸಾಮರ್ಥ್ಯದಲ್ಲಿ ಭಾರೀ ಬದಲಾವಣೆ ಆಗಬೇಕಿದೆ ಎಂದಿದ್ದಾರೆ.
ಬೆಂಗಳೂರಿನ ಉದ್ಧಾರಕ್ಕೆ ಐಐಎಂಬಿಯಲ್ಲಿ ಚಿಂತಕರ ಚಾವಡಿ
ಇಂಟರ್ ನೆಟ್ ಹಾಗೂ ಟೆಲಿಕಾಂ ವಲಯದ ಆಡಳಿತವನ್ನು ಎರಡು ಬೇರೆ ಸಚಿವಾಲಯಗಳು ನೋಡಿಕೊಳ್ಳುವುದರಲ್ಲಿ ಯಾವುದೇ ತರ್ಕವಿಲ್ಲ. ಮಾಹಿತಿ ತಂತ್ರಜ್ಞಾನ ಹಾಗೂ ಟೆಲಿಕಾಂ ಸಚಿವಾಲಯಗಳು ಒಗ್ಗೂಡಬೇಕು. ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಅಗತ್ಯ ಬಿದ್ದರೆ ಬೇರೆ ಸಚಿವಾಲಯದಡಿ ತರಬೇಕು ಎಂದು ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಸ್ಪರ್ಧೆಯ ವಿಚಾರದ ಬಗ್ಗೆ ಪ್ರಸ್ತಾವಿಸಿರುವ ಅವರು, ರಿಲಯನ್ಸ್ ಜಿಯೋ ಪ್ರಾಯೋಗಿಕವಾಗಿ ಪರಿಚಯಿಸಿದಾಗ ಆದ ವಿವಾದಗಳನ್ನು ನೆನಪಿಸಿಕೊಂಡಿದ್ದಾರೆ. ಆ ನಂತರ ಅಂದರೆ ಕಳೆದ ವರ್ಷದ ಜೂನ್ ನಿಂದ ಈ ವರ್ಷದ ಮಾರ್ಚ್ ಮಧ್ಯೆ ಮೊಬೈಲ್ ಡೇಟಾದ ಬಳಕೆ ಆರೂವರೆ ಪಟ್ಟು ಹೆಚ್ಚಾಗಿರುವುದು ಹಾಗೂ ಒಂದು ಜಿಬಿ ಡೇಟಾಗೆ ಇದ್ದ ಬೆಲೆ ರು.121ರಿಂದ 17 ರುಪಾಯಿಗೆ ಇಳಿಕೆ ಆಗಿರುವುದನ್ನು ಉದಾಹರಣೆ ನೀಡಿದ್ದಾರೆ.
ಆದರೆ, ಈ ಹೊಸ ಸ್ಪರ್ಧೆಯ ಸುತ್ತ ಎದ್ದಿರುವ ವಿವಾದಗಳಿಂದ ಬೇಸರವಾಗುತ್ತದೆ. ಹೊಸದಾದ ಸ್ಪರ್ಧೆಗೆ ವೇದಿಕೆ ಹಾಗೂ ಗ್ರಾಹಕರಿಗೆ ಅನುಕೂಲ ಒದಗಿಸುವುದು ಯಾವುದೇ ಸರಕಾರದ ಆದ್ಯತೆಯಾಗಬೇಕು. ಆದರೆ ಇಂಥ ಹೊಸ ಸ್ಪರ್ಧಿಗಳು ಎಲ್ಲಕ್ಕೂ ಪ್ರಧಾನಿಗಳ ಕಚೇರಿಗೆ ಎಡತಾಕುವುದು, ನೀತಿ-ನಿಯಮದ ಬಗ್ಗೆ ಚರ್ಚಿಸುವುದು ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ಮುಂದೆ ಒಳ್ಳೆ ಅಭಿಪ್ರಾಯ ಮೂಡಿಸುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಟೆಲಿಕಾಂ ನೀತಿ ನಿರೂಪಣೆಯ ಉದ್ದೇಶ ಬದಲಾಗಬೇಕು. ಭವಿಷ್ಯದಲ್ಲಿ ಅದು ಹೇಗಿರಬೇಕು ಎಂಬ ಬಗ್ಗೆ ಕೆಲವು ಸಲಹೆಗಳನ್ನು ರಾಅಜೀವ್ ಚಂದ್ರಶೇಖರ್ ನೀಡಿದ್ದಾರೆ.
* ಎಲ್ಲ ಭಾರತೀಯರಿಗೂ ಇಂಟರ್ ನೆಟ್ ಸೇವೆ ದೊರೆಯಬೇಕು
* ಜಾಗತಿಕ ಮಟ್ಟದಲ್ಲಿ ಇರುವ ತಂತ್ರಜ್ಞಾನ ಹಾಗೂ ಆವಿಷ್ಕಾರಗಳು ಭಾರತೀಯ ಗ್ರಾಹಕರಿಗೆ ದೊರೆಯಬೇಕು
* ಜಾಗತಿಕ ಮಟ್ಟದ ಗುಣಮಟ್ಟ ರೂಪಿಸಬೇಕು, ಅದಕ್ಕೆ ಟೆಲಿಕಾಂ ರೆಗ್ಯುಲೇಟರ್ ಗಳು ಜಾಗತಿ ಮಟ್ಟದಲ್ಲಿರಬೇಕು
* ಟೆಲಿಕಾಂ ವಲಯದ ಗ್ರಾಹಕರಿಗೆ ಕಾನೂನಿನಲ್ಲಿ ರಕ್ಷಣೆ ಒದಗಿಸಬೇಕು
* ಸರಕಾರಿ ಸೇವೆಗಳು ಆನ್ ಲೈನ್ ಮೂಲಕ ದೊರೆಯಬೇಕು. ಪಾರದರ್ಶಕತೆ ಹಾಗೂ ಕಾರ್ಯಕ್ಷಮತೆ ಇರಬೇಕು.
ಈ ಸಲಹೆ ನೀಡಿರುವ ಅವರು, ಈ ಎಲ್ಲವೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಪೂರೈಸುವ ವಿಶ್ವಾಸ ವ್ಯಕ್ತಪಡಿಸಿದ್ದು, ಮುಂದಿನ ವರ್ಷದ ಟೆಲಿಕಾಂ ಹಾಗೂ ತಂತ್ರಜ್ಞಾನ ಯೋಜನೆಗಳು ಡಿಜಿಟಲ್ ಇಂಡಿಯಾ, ನವ ಭಾರತ ಹಾಗೂ ಬದಲಾವಣೆಯ ಭಾರತದ ಗುರಿಯನ್ನು ಈಡೇರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.