ಸರಕಾರೀ ಬಂಗಲೆ ನಿರಾಕರಿಸಿದ ಬಿಜೆಪಿ ಸಿಎಂ
ಜೈಪುರ, ಜ 4: ರಾಜಮನೆತನದ ಹಿನ್ನೆಲೆಯಿಂದ ಬಂದ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧ್ಯಾ ಮುಖ್ಯಮಂತ್ರಿಗಳಿಗಾಗಿ ಇರುವ ವಿಶೇಷ ಸೌಲಭ್ಯದ ಸರಕಾರೀ ಬಂಗಲೆ ಪಡೆಯಲು ನಿರಾಕರಿಸಿದ್ದಾರೆ.
ಇದಲ್ಲದೇ, ತನಗೆ ನಿಯೋಜಿಸಲಾಗಿದ್ದ ಭದ್ರತಾ ವ್ಯವಸ್ಥೆಯಲ್ಲೂ ಮಾರ್ಪಾಡು ಮಾಡಿ, ಅರ್ಧದಷ್ಟು ಸಿಬ್ಬಂದಿಗಳನ್ನು ಕಡಿತ ಮಾಡಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ವಸುಂಧರಾ ಜನರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿ ಕೊಂಡಿದ್ದಾರೆ.
ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ವಿಶೇಷ ಸಭೆ ನಡೆಸಿದ ರಾಜಸ್ಥಾನದ ಮುಖ್ಯಮಂತ್ರಿ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯಾವ ಕಾರಣಕ್ಕೂ ದಾರಿ ತಪ್ಪಬಾರದು. ಮಹಿಳೆಯರ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕೆಂದು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಸರಕಾರೀ ಬಂಗಲೆ ಮತ್ತು ಭದ್ರತಾ ವ್ಯವಸ್ಥೆಯಲ್ಲಿನ ಮಾರ್ಪಾಡಿನ ಬಗ್ಗೆ ಸಿಎಂ ಸಚಿವಾಲಯ ಪತ್ರಿಕಾ ಹೇಳಿಕೆ ನೀಡಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿರ್ಧಾರಕ್ಕೂ , ವಸುಂಧರಾ ರಾಜೇ ಸಿಂಧ್ಯಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಧಿಕಾರಕ್ಕೇರುವ ಸಮಯದಲ್ಲಿ ಸರಕಾರೀ ಬಂಗಲೆ, ಕಾರು, ಭದ್ರತಾ ಸೌಲಭ್ಯವನ್ನು ಪಡೆದು ಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿದ್ದ ಆಮ್ ಆದ್ಮಿ ಪಕ್ಷದ ದೆಹಲಿ ಮುಖ್ಯಮಂತ್ರಿಗಳು ನಂತರ ತನ್ನ ನಿರ್ಧಾರದಲ್ಲಿ ಬದಲಾವಣೆ ತೆಗೆದುಕೊಂಡು ಸರಕಾರದ ಅಧೀನದಲ್ಲಿರುವ ಐದು ಬೆಡ್ ರೂಂಗಳ ಡ್ಯೂಪ್ಲೆಕ್ಸ್ ಮನೆಗೆ ಶಿಫ್ಟ್ ಆಗಲು ನಿರ್ಧರಿಸಿದ್ದಾರೆ. (ಸರ್ಕಾರಿ ಬಂಗಲೆ, ಕಾರು ಬಳಸುತ್ತೇನೆ ಅಂದ್ರು ಕೇಜ್ರಿವಾಲ್)
ಅಲ್ಲದೇ ಸರಕಾರಿ ಕಾರನ್ನು ಬಳಸಿಕೊಳ್ಳಲು ದೆಹಲಿ ಸಿಎಂ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಇವರ ಸಚಿವ ಸಂಪುಟದ ಸದಸ್ಯರು ಇನ್ನೋವಾ ಕಾರನ್ನು ಬಳಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಒಂದೇ ಒಂದು ಬದಲಾವಣೆ ಎಂದರೆ ಈ ಕಾರುಗಳಿಗೆ ಕೆಂಪು ದೀಪ ಇರುವುದಿಲ್ಲ.












Click it and Unblock the Notifications