ದಸರಾ ಹಬ್ಬಕ್ಕೆ ವರುಣನ ಅಡ್ಡಿ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಧಿಕ ಮಳೆ ಎಚ್ಚರಿಕೆ
ನವದೆಹಲಿ ಅಕ್ಟೋಬರ್ 04: ದೇಶದ ಹಲವು ರಾಜ್ಯಗಳಲ್ಲಿ ಹವಾಮಾನ ಬದಲಾಗಲಿದೆ. ಇಂದಿನಿಂದ ಅಕ್ಟೋಬರ್ 7 ರವರೆಗೆ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಲಕ್ನೋದಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಉತ್ತರಾಖಂಡ ಮತ್ತು ಹಿಮಾಚಲದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಹೀಗಾದರೆ ದಸರಾ ಆಚರಣೆಗೆ ತೊಂದರೆ ಉಂಟಾಗುವುದು ಖಚಿತ.
ಈಗಾಗಲೇ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು ಹಲವೆಡೆ ಜಿಟಿ ಜಿಟಿ ಮಳೆಯಾಗುತ್ತಿದೆ. ಇದರಿಂದಾಗಿ ದಸರಾ ಹಬ್ಬದ ಸಡಗರದಲ್ಲಿದ್ದ ಜನರಿಗೆ ವರುಣ ಕೊಂಚ ಅಡ್ಡಿಯನ್ನುಂಟು ಮಾಡಿದ್ದಾನೆ. ಮಾರುಕಟ್ಟೆಗಳಲ್ಲಿ ಹೂ, ಹಣ್ಣು, ಕಾಯಿ ಬೆಲೆ ಗಗನಕ್ಕೇರಿದರೆ ಮತ್ತೊಂದೆಡೆ ಮಳೆಯಿಂದಾಗಿ ಜನ ಮನೆಯಿಂದ ಹೊರಬರುವುದು ತೊಂದರೆಯಾಗುತ್ತಿದೆ. ಇದರಿಂದ ಮಾರಾಟಗಾರರು ನಷ್ಟವನ್ನು ಅನುಭವಿಸುವಂತಾಗಿದೆ. ಇಂದು ಆಯುಧ ಪೂಜೆ ಪ್ರಯುಕ್ತ ಹಲವು ಕಡೆ ವಾಹನಗಳಿಗೆ ಪೂಜೆ ಮಾಡಲಾಗುತ್ತಿದೆ. ನಿನ್ನೆ ಸುರಿದ ಮಳೆಯಿಂದಾಗಿ ಪೂಜೆಗೆ ಸ್ವಚ್ಚಗೊಳಿಸಿದ್ದ ವಾಹನಗಳು ಮತ್ತೆ ಸ್ವಚ್ಚಗೊಳಿಸುವ ಸ್ಥಿತಿಗೆ ಬಂದಿದ್ದು ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಈ ವರ್ಷ ವರುಣನ ಕೃಪೆ ರಾಜ್ಯದ ಮೇಲೆ ಉತ್ತಮವಾಗಿದ್ದು, ನಿರೀಕ್ಷೆ ಇಲ್ಲದೆ ಸುರಿಯುತ್ತಿರುವ ಮಳೆಗೆ ಜನ ಹೈರಾಣಾಗಿದ್ದಾರೆ.
ಇಂದು ಮತ್ತು ನಾಳೆ ದೆಹಲಿಯಲ್ಲಿ ಮಳೆ
ಕರ್ನಾಟಕ ಸೇರಿದಂತೆ ಭಾರತದಲ್ಲಿ 'ಹಿಂಗಾರು ಮಳೆ' ಅಕ್ಟೋಬರ್ ಎರಡನೇ ವಾರದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಮುಂಗಾರು ಮಳೆಯೇ ಮುಂದುವರಿಯಲಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಮುಂಗಾರು ಮಳೆ ಅಂತ್ಯಗೊಂಡಿಲ್ಲ ಎಂದು ಹವಾಮಾನ ತಜ್ಞರು ಹಾಗೂ ವಿಜ್ಞಾನಿ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಎಚ್ಚರಿಕೆ ನೀಡಲಾಗಿದೆ.
ಇನ್ನೂ ಇಂದು ಮತ್ತು ನಾಳೆ ದೆಹಲಿಯಲ್ಲಿ ಹವಾಮಾನ ತೇವವಾಗಿರಲಿದ್ದು ಮಧ್ಯಂತರ ಮಳೆಯಾಗಲಿದೆ. ಇದರಿಂದಾಗಿ ದೆಹಲಿ ತಾಪಮಾನ ಕುಸಿಯಲಿದೆ. ದೆಹಲಿಯಲ್ಲಿ ಇಂದು ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಆಗಿರಬಹುದು ಎಂದು IMD ಹೇಳಿದೆ.
ಯುಪಿ, ಬಿಹಾರ, ಜಾರ್ಖಂಡ್ನಲ್ಲಿ ಮಳೆ
ಪೂರ್ವ ಉತ್ತರ ಪ್ರದೇಶದಲ್ಲಿ ಇಂದು ಹಗುರದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಇಲಾಖೆ 48 ಗಂಟೆಗಳ ಕಾಲ ಇಲ್ಲಿ ಎಚ್ಚರಿಕೆ ನೀಡಿದೆ. ಯುಪಿ ಮಾತ್ರವಲ್ಲದೆ ಬಿಹಾರ, ಜಾರ್ಖಂಡ್, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಒಡಿಶಾ, ಜಾರ್ಖಂಡ್, ಬಂಗಾಳದಲ್ಲೂ ಮಳೆಯಾಗಲಿದೆ. ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ಇಲ್ಲಿ ಎಚ್ಚರಿಕೆ ನೀಡಿದೆ.
ಹಿಮಾಚಲದಲ್ಲಿ ವೇಗವಾಗಿ ಬದಲಾದ ಹವಾಮಾನ
ಆದರೆ ಈಗ ಹಿಮಾಚಲದಲ್ಲಿ ಹವಾಮಾನವು ವೇಗವಾಗಿ ಬದಲಾಗುತ್ತಿದೆ. ಇಲ್ಲಿನ ಅನೇಕ ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಲಘು ಹಿಮಪಾತವನ್ನು ಸಹ ಕಾಣಬಹುದು. ಈಗ ಇಲ್ಲಿ ತಾಪಮಾನ ಕಡಿಮೆಯಾಗುತ್ತಿದೆ. ಮತ್ತೊಂದೆಡೆ, ಕಾಶ್ಮೀರದ ಕೆಲವು ಪ್ರದೇಶಗಳು ಲಘು ಹಿಮಪಾತವನ್ನು ಸಹ ಕಾಣುತ್ತಿದೆ. ಇದರಿಂದಾಗಿ ತಾಪಮಾನವು ಕಡಿಮೆಯಾಗಿದೆ. ಮಾನ್ಸೂನ್ ಹಿಂತಿರುಗಿದ ತಕ್ಷಣ ಚಳಿಗಾಲ ಬೇಗನೇ ಪ್ರವೇಶವನ್ನು ಆವರಿಸಬಹುದು ಎಂದು IMD ಹೇಳಿದೆ.
ಎಲ್ಲೆಲ್ಲಿ ತಾಪಮಾನದಲ್ಲಿ ಕುಸಿತ?
ಮತ್ತೊಂದೆಡೆ, ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಮುಂದಿನ 24 ಗಂಟೆಗಳಲ್ಲಿ ದೆಹಲಿ, ಯುಪಿ, ಉತ್ತರಾಖಂಡ, ಬಿಹಾರ, ಯುಪಿ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ ಮತ್ತು ಅಂಡಮಾನ್, ಈಶಾನ್ಯ, ಪಶ್ಚಿಮ ಬಂಗಾಳ, ಜಾರ್ಖಂಡ್ನಲ್ಲಿ ಮಳೆಯಾಗಲಿದೆ ಎಂದು ಹೇಳಿದೆ. ಈ ಪ್ರದೇಶಗಳಲ್ಲಿ ಅಧಿಕ ಮಳೆಯ ಎಚ್ಚರಿಕೆ ನೀಡಲಾಗಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಹವಾಮಾನವು ವೇಗವಾಗಿ ಬದಲಾಗುತ್ತದೆ ಮತ್ತು ತಾಪಮಾನವು ಕುಸಿಯುತ್ತದೆ ಎಂದು ಸ್ಕೈಮೆಟ್ ಈಗಾಗಲೇ ಹೇಳಿದೆ.