ಪ್ರಯಾಣಿಕರ ಪರದಾಟ ತಪ್ಪಿಸಿದ ಸುವಿಧ ರೈಲು
ನವದೆಹಲಿ, ಜೂ.20 : ರಜಾ ಮತ್ತು ಹಬ್ಬದ ದಿನಗಳಲ್ಲಿ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿಸುದ್ದಿ. 'ಸುವಿಧ' ಎಂಬ ರೈಲು ಸೇವೆಯನ್ನು ಇಲಾಖೆ ಆರಂಭಿಸುತ್ತಿದೆ. ಇದು ಕನ್ಫರ್ಮ್ ಟಿಕೆಟ್ ಗಳನ್ನು ಮಾತ್ರ ಪ್ರಯಾಣಿಕರಿಗೆ ನೀಡಲಿದೆ. ಇದರಿಂದ ಪ್ರಯಾಣಿಕರು ಟಿಕೆಟ್ ಪಡೆಯಲು ಕಾಯುವುದು ತಪ್ಪಲಿದ್ದು, ಜುಲೈನಲ್ಲಿ ಈ ರೈಲಿನ ಸಂಚಾರ ಆರಂಭವಾಗಲಿದೆ.
ಬೇಸಿಗೆ ರಜೆ, ದಸರಾ, ಹೋಳಿ, ದೀಪಾವಳಿ ಮುಂತಾದ ಸಂದರ್ಭದಲ್ಲಿ ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತದೆ. ಈ ಸಮಯದಲ್ಲಿ ಟಿಕೆಟ್ ಪಡೆಯಲು ಸಾಕಷ್ಟು ಹರಸಾಹಸ ಪಡಬೇಕಾಗುತ್ತದೆ. ಪ್ರಯಾಣಿಕರ ಈ ತೊಂದರೆ ನಿವಾರಿಸಲು ರೈಲ್ವೆ ಇಲಾಖೆಯು 'ಸುವಿಧ' ಎಂಬ ಸೇವೆ ಆರಂಭಿಸುತ್ತಿದೆ. ಈ ರೈಲಿನಲ್ಲಿ ಕನ್ ಫರ್ಮ್ ಟಿಕೇಟ್ಗಳನ್ನು ನೀಡಲಾಗುತ್ತದೆ.
ಆದರೆ, ಪ್ರಥಮ ದರ್ಜೆಯ ಎಸಿ ಹೊರತು ಪಡಿಸಿ ಉಳಿದ ದರ್ಜೆಗಳಿಗೆ ಈ ನಿಯಮ ಅನ್ವಯವಾಗಲಿದೆ. ಪ್ರಾಯೋಗಿಕವಾಗಿ ಈ ಸೌಲಭ್ಯವನ್ನು ಆರಂಭಿಸಲಾಗುತ್ತಿದ್ದು, ಯೋಜನೆ ಯಶಸ್ವಿಯಾದರೆ ಎಲ್ಲಾ ರೈಲುಗಳಲ್ಲೂ ಈ ನಿಯಮ ಜಾರಿಗೆ ತರುವ ಚಿಂತನೆ ಇದೆ.
ಏನಿದು ಸುವಿಧ ರೈಲು? : ಜುಲೈನಲ್ಲಿ ಸಂಚಾರ ಆರಂಭಿಸುರವ ಸುವಿಧ ರೈಲು ರಾಜಧಾನಿ, ದುರೊಂಟೊ ಮತ್ತು ಮೇಲ್ ಆಂಡ್ ಎಕ್ಸ್ ಪ್ರೆಸ್ ಟ್ರೈನ್ಸ್ ಎಂಬ ಮೂರು ವಿಭಿನ್ನ ಹೆಸರಿನಲ್ಲಿ ತನ್ನ ಸಂಚಾರ ಆರಂಭಿಸಲಿದೆ. ಈ ರೈಲುಗಳಲ್ಲಿ ಪ್ರಯಾಣಿಸಲು ಗರಿಷ್ಠ 30 ದಿನ ಅಥವಾ ಕನಿಷ್ಠ 10 ದಿನದ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಬೇಕು. ಖಚಿತವಾಗಿ ಸೀಟ್ ಸಿಕ್ಕರೆ ಮಾತ್ರ ಪ್ರಯಾಣ ಮಾಡಬಹುದಾಗಿದೆ.