ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ; ಕಣ್ಣ ಮುಂದೆಯೇ ಕೊಚ್ಚಿಹೋಯ್ತು ರೈಲ್ವೆ ಸೇತುವೆ
ಶಿಮ್ಲಾ, ಆಗಸ್ಟ್ 20: ಭಾರಿ ಮಳೆಯ ಹಿನ್ನೆಲೆಯಲ್ಲಿ ಹಿಮಾಚಲಪ್ರದೇಶದ ಕಂಗ್ರಾದಲ್ಲಿ ರೈಲ್ವೆ ಸೇತುವೆಯೊಂದು ಕುಸಿದ್ದು ಬಿದ್ದು, ನದಿಯಲ್ಲಿ ಕೊಚ್ಚಿಹೋದ ಘಟನೆ ನಡೆದಿದೆ.
ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಚಕ್ಕಿ ಸೇತುವೆ ಶನಿವಾರ ಕುಸಿದಿದ್ದು, ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಸೇತುವೆಯ ಅದರ ಒಂದು ಪಿಲ್ಲರ್ ಕುಸಿದ ಪರಿಣಾಮ ರೈಲ್ವೆ ಹಳಿ ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿಹೋಗಿದೆ. ವಿಡಿಯೋ ದೃಶ್ಯಗಳಲ್ಲಿ ಚಕ್ಕಿ ನದಿಯ ಮೇಲೆ ನಿರ್ಮಿಸಲಾದ ರೈಲ್ವೆ ಸೇತುವೆಯ ಒಂದು ಭಾಗವು ಮಳೆಯ ಬೀಳುತ್ತಿರುವಾಗ ಕುಸಿದಿರುವುದನ್ನು ಕಾಣಬಹುದಾಗಿದೆ.
ಶನಿವಾರ ಧರ್ಮಶಾಲಾದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಈ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ರಾಜ್ಯದ ಮಂಡಿ ಜಿಲ್ಲೆಯಲ್ಲಿ ಇಂದು ಮುಂಜಾನೆ ಹಠಾತ್ ಪ್ರವಾಹ ಸಂಭವಿಸಿದ್ದು, ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿತ್ತು. ಹೀಗಾಗಿ ನಿವಾಸಿಗಳು ಸಿಕ್ಕಿಹಾಕಿಕೊಂಡಿದ್ದರು. ಮಳೆಯಿಂದ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ. ಈ ಘಟನೆಯು ಜಿಲ್ಲೆಯ ಬಾಲ್, ಸದರ್, ಥುನಾಗ್, ಮಂಡಿ ಮತ್ತು ಲಮಾಥಾಚ್ನಲ್ಲಿನ ಸ್ಥಳಗಳಲ್ಲಿ ಕೂಡ ಪರಿಣಾಮ ಬೀರಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಕಂಗ್ರಾ, ಕುಲು ಮತ್ತು ಮಂಡಿ ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಹಿಮಾಚಲ ಪ್ರದೇಶದ ಕಾಂಗ್ರಾ, ಚಂಬಾ, ಬಿಲಾಸ್ಪುರ್, ಸಿರ್ಮೌರ್ ಮತ್ತು ಮಂಡಿ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮಳೆಯ ಕೆಟ್ಟ ವಾತಾವರಣದಲ್ಲಿ ನದಿಗಳು ಮತ್ತು ತೊರೆಗಳ ಬಳಿ ಹೋಗುವುದನ್ನು ತಪ್ಪಿಸಲು ಸ್ಥಳೀಯರು ಮತ್ತು ಪ್ರವಾಸಿಗರಿಗೆ ಸೂಚಿಸಲಾಗಿದೆ.
ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣಾ ಇಲಾಖೆಯು ರಾಜ್ಯದಲ್ಲಿ ಆಗಸ್ಟ್ 25 ರವರೆಗೆ ಭಾರಿ ಮಳೆಯ ಮುನ್ಸೂಚನೆಯಿಂದಾಗಿ ಭೂಕುಸಿತದ ಎಚ್ಚರಿಕೆಯನ್ನು ನೀಡಿದೆ. ಮೂರು ದಿನದ ಹಿಂದೆ ಹಿಮಾಚಲ ಪ್ರದೇಶದ ಕುಲುವಿನ ಸೋಲಾಂಗ್ ನಾಲಾದಲ್ಲಿ ರಕ್ಷಣೆಗಾಗಿ ನಿಯೋಜನೆಗೊಂಡ ತಂಡಗಳು ಈ ಪ್ರದೇಶದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಒಂದು ದಿನದ ಹಿಂದೆ ನಾಪತ್ತೆಯಾಗಿದ್ದ ಇಬ್ಬರ ಮೃತದೇಹಗಳನ್ನು ಮಂಗಳವಾರ ಪತ್ತೆ ಹಚ್ಚಿದ್ದರು. ಪತ್ತೆಯಾಗಿರುವ ಮೃತದೇಹಗಳ ಪೈಕಿ ಒಂದು ಮೃತದೇಹ ಗುರುತಿಸಲಾಗದ ಸ್ಥಿತಿಯಲ್ಲಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದರು.
ನಾಪತ್ತೆಯಾದವರ ಒಟ್ಟು ಸಂಖ್ಯೆ ತಿಳಿದಿಲ್ಲ
ಎಸ್ಡಿಎಂ ಸುರೇಂದರ್ ಠಾಕೂರ್ ಪ್ರಕಾರ, ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಆಡಳಿತದ ತಂಡ ಮತ್ತು ಸ್ಥಳೀಯ ಸ್ವಯಂಸೇವಕರು ಸೇರಿದಂತೆ ಸುಮಾರು 100 ಜನರನ್ನು ನಿಯೋಜಿಸಲಾಗಿದೆ. ನಾಪತ್ತೆಯಾದವರ ಒಟ್ಟು ಸಂಖ್ಯೆ ಇನ್ನೂ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.
ಗುಡುಗು ಸಹಿತ ಭಾರಿ ಮಳೆ
ಸೋಮವಾರ ಮನಾಲಿಯ ಸೋಲಾಂಗ್ನಲ್ಲಿ ಚರಂಡಿಯ ಮೇಲೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆಯನ್ನು ದಾಟುವಾಗ ಇಬ್ಬರು ನೀರಿನಲ್ಲಿ ಮುಳುಗಿದರು. ಈ ತಾತ್ಕಾಲಿಕ ಸೇತುವೆಯನ್ನು ಸ್ಥಳೀಯರು ಬಳಸುತ್ತಿದ್ದರು. ಮಾಹಿತಿ ಪ್ರಕಾರ, ಸೇತುವೆ ಕೊಚ್ಚಿಕೊಂಡು ಹೋಗುವಾಗ ಕೆಲವರು ನಾಲಾ ದಾಟುವ ಸೇತುವೆಯ ಮೇಲಿದ್ದರು ಎನ್ನಲಾಗಿದೆ. ಏತನ್ಮಧ್ಯೆ, ಭಾರತೀಯ ಹವಾಮಾನ ಇಲಾಖೆಯು ಇಂದು ಭಾರಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ.
ಚರಂಡಿಯಲ್ಲಿ ಮುಳುಗಿದ ಇಬ್ಬರು ವ್ಯಕ್ತಿಗಳು
ಜಿಲ್ಲಾಧಿಕಾರಿ ಕುಲು ಅಶುತೋಷ್ ಗರ್ಗ್ ಅವರು, "ಮನಾಲಿಯ ಸೋಲಾಂಗ್ ಪ್ರದೇಶದಲ್ಲಿ ನೀರಿನ ಹರಿವಿಗೆ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿರುವ ಬಗ್ಗೆ ವರದಿಯಾಗಿದೆ. ಅಪಘಾತ ಸಂಭವಿಸಿದಾಗ ಕೆಲವರು ಸೇತುವೆಯನ್ನು ದಾಟುತ್ತಿದ್ದರು. ಪ್ರತ್ಯಕ್ಷದರ್ಶಿಗಳ ಹೇಳಿದಂತೆ ಇಬ್ಬರು ಚರಂಡಿಯಲ್ಲಿ ಮುಳುಗಿದ್ದು, ಮೃತರಲ್ಲಿ ಒಬ್ಬನ ಶವವನ್ನು ಹೊರತೆಗೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಭಾರಿ ಪ್ರಮಾಣದ ನೀರು
ಇನ್ನೂ ಹೆಚ್ಚಿನ ಮಳೆ ಬರುವ ನಿರೀಕ್ಷೆಯಿದೆ. ಸೋಲಾಂಗ್ ನಲ್ಲಾ ಪ್ರದೇಶದಲ್ಲಿ ಇನ್ನೂ ಭಾರಿ ಪ್ರಮಾಣದ ನೀರಿನಿಂದ ಹರಿಯುತ್ತಿದೆ. ಇದರ ಪರಿಣಾಮವಾಗಿ ನಾಪತ್ತೆಯಾದವರ ರಕ್ಷಣೆ ಸ್ಥಗಿತಗೊಂಡಿದೆ. ನಾಪತ್ತೆಯಾದವರ ಸಂಖ್ಯೆ ಇನ್ನೂ ತಿಳಿದಿಲ್ಲ. ಘಟನೆಯಿಂದ ಎಷ್ಟು ಜನರು ತೊಂದರೆಗೀಡಾಗಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ. ಬದುಕುಳಿದವರು ಇದ್ದರೆ, ಅವರನ್ನು ಉಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
Recommended Video