ಮಣಿಪುರವನ್ನು ಅಪಹಾಸ್ಯ ಮಾಡಿದ ಪ್ರಧಾನಿ ಮೋದಿ ನಾಚಿಕೆಯಿಲ್ಲದೆ ನಗುತ್ತಿದ್ದರು: ಸಂಸತ್ ಭಾಷಣದ ಕುರಿತು ರಾಹುಲ್ ಗಾಂಧಿ ವಾಗ್ದಾಳಿ
ನವದೆಹಲಿ, ಆಗಸ್ಟ್ 11: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ವಾಗ್ದಾಳಿ ನಡೆಸಿದರು. ಗುರುವಾರ ಸಂಸತ್ತಿನಲ್ಲಿ ಮಾತನಾಡಿರುವ ಪ್ರಧಾನಿ ಮೋದಿ ಮಣಿಪುರದ ವಿಚಾರವನ್ನು ಅಪಹಾಸ್ಯ ಮಾಡಿದರು. ನಾಚಿಕೆಯಿಲ್ಲದೇ ನಗುತ್ತಿದ್ದರು ಎಂದು ಟೀಕಿಸಿದರು. ಪ್ರಧಾನಿ ಮೋದಿ ಅವರ ಪ್ರತಿಕ್ರಿಯೆ ಅನುಚಿತವಾಗಿತ್ತು ಎಂದು ರಾಹುಲ್ ಜರಿದರು. ಮಣಿಪುರ ಸಮಸ್ಯೆಗೆ ಪ್ರಧಾನಿ ಸಮಯವನ್ನೇ ನೀಡಲಿಲ್ಲ ಎಂದು ಆರೋಪಿಸಿದರು.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, 'ಲೋಕಸಭೆಯಲ್ಲಿ ಮಣಿಪುರದ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ಅಣಕಿಸಿ ನಗುತ್ತಿದ್ದರು' ಎಂದು ಹೇಳಿದರು.

'ಭಾರತೀಯ ಸೇನೆಯು ಕೆಲವೇ ದಿನಗಳಲ್ಲಿ ಮಣಿಪುರದಲ್ಲಿ ಶಾಂತಿಯನ್ನು ತರಬಲ್ಲದು. ಆದರೆ ಪ್ರಧಾನಿ ಮೋದಿಯವರು ಮಣಿಪುರವನ್ನು ಹೊತ್ತಿ ಉರಿಯಲು ಬಯಸುತ್ತಿದ್ದಾರೆ. ಅವರು ಅಲ್ಲಿ ಶಾಂತಿಯನ್ನು ತರಲು ಬಯಸುವುದಿಲ್ಲ' ಎಂದು ರಾಹುಲ್ ಆರೋಪಿಸಿದರು.
'ಪ್ರಧಾನಿ ಮೋದಿ ಕೇವಲ 2 ನಿಮಿಷಗಳ ಕಾಲ ಮಣಿಪುರದ ಬಗ್ಗೆ ಮಾತನಾಡಿದರು. ನಿನ್ನೆ ಪ್ರಧಾನಿ ಸಂಸತ್ತಿನಲ್ಲಿ 2 ಗಂಟೆ 13 ನಿಮಿಷಗಳ ಕಾಲ ಮಾತನಾಡಿದರು. ಕೊನೆಗೆ ಮಣಿಪುರದ ಬಗ್ಗೆ ಕೇವಲ 2 ನಿಮಿಷ ಮಾತನಾಡಿದರು. ಮಣಿಪುರವು ತಿಂಗಳುಗಟ್ಟಲೆ ಹೊತ್ತಿ ಉರಿಯುತ್ತಿದೆ. ಅಲ್ಲಿ ಅಮಾಯಕ ಜನರನ್ನು ಕೊಲ್ಲಲಾಗುತ್ತಿದೆ. ಅತ್ಯಾಚಾರಗಳು ನಡೆಯುತ್ತಿವೆ. ಆದರೆ ಪ್ರಧಾನಿ ನಗುತ್ತಿದ್ದರು. ಹಾಸ್ಯ ಚಟಾಕಿ ಹಾರಿಸಿದರು. ಇದು ಅವರಿಗೆ ಸರಿಹೊಂದುವುದಿಲ್ಲ' ಎಂದು ರಾಹುಲ್ ವಾಗ್ದಾಳಿ ನಡೆಸಿದರು.

ಭಾರತ ಮಾತೆಯ ರಕ್ಷಣೆಗೆ ನಾನು ನಿಂತಿರುವುದನ್ನು ನೀವು ಯಾವಾಗಲೂ ನೋಡುತ್ತೀರಿ. ಭಾರತ ಮಾತೆಯ ಮೇಲೆ ದಾಳಿಯಾದಾಗಲೆಲ್ಲಾ ನಾನು ಆಕೆಯ ರಕ್ಷಣೆಗಾಗಿ ಮಾತನಾಡುವುದನ್ನು ನೀವು ಮುಂದೆಯೂ ನೋಡುತ್ತೀರಿ ಎಂದು ರಾಹುಲ್ ಹೇಳಿದರು.
ಮಣಿಪುರದ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಧಾನಿ ಮೋದಿ ಅವರ ಕೈಯಲ್ಲಿ ಅನೇಕ ಸಾಧನಗಳಿವೆ. ಆದರೆ, ಅವರು ಅವುಗಳನ್ನು ಬಳಸುತ್ತಿಲ್ಲ. ನಾನು ಭಾರತೀಯ ಸೇನೆ ಕುರಿತು ಪ್ರಸ್ತಾಪಿಸಿದ್ದೇನೆ. ಅವರು ಕೆಲವೇ ದಿನಗಳಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಬಹುದು ಎಂದು ರಾಹುಲ್ ತಿಳಿಸಿದರು.
ಮಣಿಪುರದಲ್ಲಿ ನಾನು ನೋಡಿದ್ದನ್ನು ಈ ಹಿಂದೆ ನೋಡಿಲ್ಲ. 19 ವರ್ಷಗಳ ಅನುಭವದಲ್ಲಿ ನಾನು ಮಣಿಪುರದಲ್ಲಿ ಕಂಡದ್ದನ್ನು ಮತ್ತು ಕೇಳಿದ್ದನ್ನು ಈ ಹಿಂದೆ ಅನುಭವಿಸಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಭಾರತ ಮಾತೆಯ ಹತ್ಯೆ ಮಾಡಿದ್ದಾರೆ. ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಮಣಿಪುರದಲ್ಲಿ ನಾವು ಮೈತೇಯಿ ಪ್ರದೇಶಕ್ಕೆ ಭೇಟಿ ನೀಡಿದ್ದೆವು. ಆಗ ನಮ್ಮ ಜೊತೆ ಕುಕಿ ಸಮುದಾಯದ ಯಾವುದೇ ವ್ಯಕ್ತಿಯನ್ನು ನಮ್ಮ ಜೊತೆ ಕರೆದುಕೊಂಡು ಬರಬಾರದೆಂದು ತಿಳಿಸಲಾಯಿತು. ನಮ್ಮ ಜೊತೆ ಯಾವುದೇ ಕುಕಿ ವ್ಯಕ್ತಿ ಇದ್ದರೆ, ಆತ ಮೈತೇಯಿ ವ್ಯಕ್ತಿಯನ್ನು ಕೊಲ್ಲುತ್ತಾನೆ ಎಂದು ನಮಗೆ ಸ್ಪಷ್ಟವಾಗಿ ತಿಳಿಸಲಾಯಿತು ಎಂದು ಹೇಳಿದರು.
ನಾವು ಕುಕಿ ಪ್ರದೇಶಕ್ಕೆ ಹೋದಾಗ, ಇದೇ ತೆರನಾಗಿ ಹೇಳಲಾಯಿತು. ಇದೆಲ್ಲವನ್ನೂ ಗಮನಿದಾಗ ಇಲ್ಲಿ ಒಂದು ರಾಜ್ಯವಲ್ಲ, ಎರಡು ರಾಜ್ಯಗಳಿವೆ ಎಂದು ಅನ್ನಿಸತೊಡಗಿತು ಎಂದು ರಾಹುಲ್ ಹೇಳಿದರು.
ಪ್ರಧಾನಿಯಾದ ನಂತರ ನಾಯಕನು ರಾಜಕಾರಣಿಯಾಗುವುದನ್ನು ನಿಲ್ಲಿಸುತ್ತಾನೆ. ದೇಶದ ಧ್ವನಿಯ ಪ್ರತಿನಿಧಿಯಾಗುತ್ತಾನೆ. ಪ್ರಧಾನಿ ಅವರು ರಾಜಕೀಯವನ್ನು ಬದಿಗಿಡಬೇಕು. ಕ್ಷುಲ್ಲಕ ರಾಜಕಾರಣಿಯಾಗಿ ಮಾತನಾಡುವುದನ್ನು ಬಿಡಬೇಕು. ಭಾರತದ ಜನತೆಯ ಭಾರವನ್ನು ಹೊತ್ತು ಪ್ರಧಾನಿ ನಡೆಯಬೇಕು. ಆದರೆ, ನಮ್ಮ ಪ್ರಧಾನಿಗೆ ತಾನು ನಿಜವಾಗಿ ಏನೆಂದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.












Click it and Unblock the Notifications