ಮಣಿಪುರದಿಂದ ಮುಂಬೈವರೆಗೆ: ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ನ್ಯಾಯ ಯಾತ್ರೆ
ಭಾರತ ಜೋಡೊ ಯಾತ್ರೆಯ ನಂತರ, ರಾಹುಲ್ ಗಾಂಧಿ ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದ ಇಂಫಾಲ್ನಿಂದ ಮುಂಬೈಗೆ ಜನವರಿ 14 ರಿಂದ 66 ದಿನಗಳ 'ಭಾರತ ನ್ಯಾಯ ಯಾತ್ರೆ' ನಡೆಸಲಿದ್ದಾರೆ.
2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಈ ಯಾತ್ರೆ ನಡೆಯಲಿದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಯಾತ್ರೆಯ ಸಂದರ್ಭದಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ.

ರಾಹುಲ್ ಗಾಂಧಿ ಅವರ ಎರಡನೇ ಯಾತ್ರೆ ಈ ಬಾರಿ ಪೂರ್ವದಿಂದ ಪಶ್ಚಿಮಕ್ಕೆ ಸಾಗಲಿದ್ದು, 14 ರಾಜ್ಯಗಳ 85 ಜಿಲ್ಲೆಗಳಲ್ಲಿ ಬಸ್ ಮತ್ತು ಕಾಲ್ನಡಿಗೆಯಲ್ಲಿ 6,200 ಕಿ.ಮೀ. ದೂರ ಕ್ರಮಿಸಲಿದೆ.
14 ರಾಜ್ಯಗಳಲ್ಲಿ ಭಾರತ ಜೋಡೊ ಯಾತ್ರೆ
ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಸೆಪ್ಟೆಂಬರ್ 7, 2022 ಮತ್ತು ಜನವರಿ 30, 2023 ರವರೆಗೆ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಹುಲ್ ಗಾಂಧಿ 'ಭಾರತ ಜೋಡೋ ಯಾತ್ರೆ' ಹೆಸರಿನಲ್ಲಿ ಕಾಲ್ನಡಿಗೆ ನಡೆಸಿದ್ದರು.
ಜನವರಿ 14ರಂದು ಮಣಿಪುರದಲ್ಲಿ ಎರಡನೇ ಯಾತ್ರೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದು, ಮಾರ್ಚ್ 20ಕ್ಕೆ ನ್ಯಾಯ ಯಾತ್ರೆ ಮುಕ್ತಾಯವಾಗಲಿದೆ.
ನಿರುದ್ಯೋಗ ಮತ್ತು ಬೆಲೆ ಏರಿಕೆಯ ನಡುವೆ ಜನರ ಸಂಕಷ್ಟಗಳನ್ನು ಎತ್ತಿ ತೋರಿಸುವ ಹೊಸ ಕಾರ್ಯಕ್ರಮವನ್ನು ಘೋಷಿಸಿದ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಯುವಜನರು, ಮಹಿಳೆಯರು ಮತ್ತು ಕೆಳ ವರ್ಗಗಳೊಂದಿಗೆ ಸಂವಹನ ನಡೆಸುವ ಗುರಿಯನ್ನು ಯಾತ್ರೆ ಹೊಂದಿದೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಮಾತನಾಡಿ, 'ನ್ಯಾಯಕ್ಕಾಗಿ ಯಾತ್ರೆ' ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ಭದ್ರಪಡಿಸುವ ಗುರಿಯನ್ನು ಹೊಂದಿದ್ದು, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಮತ್ತು ಬೆಲೆ ಮತ್ತು ನಿರುದ್ಯೋಗದ ಇತರ ಜೀವನೋಪಾಯದ ಸಮಸ್ಯೆಗಳ ಬಗ್ಗೆ ಬೆಳಕು ಚಲ್ಲುತ್ತದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಆರ್ಥಿಕ ಅಸಮಾನತೆ, ಧ್ರುವೀಕರಣ ಮತ್ತು ಸರ್ವಾಧಿಕಾರದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.
'ಭಾರತ ನ್ಯಾಯ ಯಾತ್ರೆ' ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್ಗಢ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆಯಲಿದೆ. ರಾಹುಲ್ ಮುಖ್ಯವಾಗಿ ಬಸ್ಸಿನಲ್ಲಿ ಪ್ರಯಾಣಿಸಲಿದ್ದು, ಹಲವು ಕಡೆ ಪಾದಯಾತ್ರೆಗಳೂ ಇರುತ್ತವೆ ಎಂದು ಹೇಳಿದರು.
ಇತ್ತೀಚೆಗೆ ವಿಧಾನಸಭಾ ಚುನಾವಣೆಯಲ್ಲಿ ಸೋತ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ರಾಜ್ಯಗಳ ಮೂಲಕ ಕೂಡ ಯಾತ್ರೆ ಸಾಗಲಿದೆ.
ಇಂಡಿಯಾ ಒಕ್ಕೂಟದ ಪಕ್ಷಗಳು ಸೀಟು ಹಂಚಿಕೆಯ ಮಾತುಕತೆಗಳನ್ನು ಪ್ರಾರಂಭಿಸುತ್ತಿರುವ ಸಮಯದಲ್ಲಿ ಯಾತ್ರೆ ನಡೆಸುವ ಸುದ್ದಿ ಬಂದಿದೆ. ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದಂತಹ ಮಿತ್ರಪಕ್ಷಗಳು ರಾಹುಲ್ ಯಾತ್ರೆಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದು ಕುತೂಹಲ ಹೆಚ್ಚಿಸಿದೆ.
ಭಾರತ ನ್ಯಾಯ ಯಾತ್ರೆಯು ಮಣಿಪುರವನ್ನು ಪುನರ್ನಿರ್ಮಾಣ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ ಎಂದು ಜೈರಾಮ್ ರಮೇಶ್ ಹೇಳಿದರು.
ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾರತ್ ಜೋಡೋ ಯಾತ್ರೆಯ ಮಾದರಿಯಲ್ಲಿ ರಾಹುಲ್ ಎರಡನೇ ಯಾತ್ರೆಯನ್ನು ಕೈಗೊಳ್ಳಬೇಕು ಎಂಬ ಬೇಡಿಕೆಯ ನಂತರ ಯಾತ್ರೆಯ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ, ಕೆಲವು ನಾಯಕರು ದೇಶವು ಚುನಾವಣೆಯ ಮೂಡ್ನಲ್ಲಿ ಇರುವಾಗ ಸಮಯದಲ್ಲಿ ಗಮನವನ್ನು ಬೇರೆಡೆಗೆ ತಿರುಗಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವೇಣುಗೋಪಾಲ್ ಅವರು ಕಾಂಗ್ರೆಸ್ನ ಚುನಾವಣಾ ಸಿದ್ಧತೆಗಳ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ ಏಕೆಂದರೆ ಯಾತ್ರೆಯು ಪಕ್ಷದ ಚುನಾವಣಾ ಸಿದ್ಧತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications