ಹೈರಾಣವಾಗಿರುವ ಕಾಂಗ್ರೆಸ್ಸಿಗೆ ಮಗುದೊಮ್ಮೆ ರಾಹುಲ್ ಗಾಂಧಿಯೇ ಅಧ್ಯಕ್ಷ?
ಕಾಂಗ್ರೆಸ್ಸಿನ ಮುಂದಿನ ಸಾರಥಿ ಯಾರು ಎನ್ನುವುದನ್ನು ನಿರ್ಧರಿಸಲು ಅಧ್ಯಕ್ಷೀಯ ಚುನಾವಣೆ ನಿಗದಿಯಾಗಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳು ಇರುತ್ತಾರೋ ಅಥವಾ ಅವಿರೋಧ ಆಯ್ಕೆಯೋ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.
ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಅಕ್ಟೋಬರ್ ಹದಿನೇಳರ ದಿನ ನಿಗದಿಯಾಗಿದೆ ಮತ್ತು ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದೆ. ಸೆಪ್ಟಂಬರ್ ಮೂವತ್ತರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಕಾಂಗ್ರೆಸ್ ಸರ್ವೋಚ್ಛ ಕುರ್ಚಿಯಲ್ಲಿ ರಾಹುಲ್ ಬದಲಿಗೆ ಕರ್ಚೀಫ್ ಹಾಕಿದ ಲೀಡರ್ ಯಾರು!?
ಗಾಂಧಿ ಕುಟುಂಬದ ಪರಮಾಪ್ತ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆದ ನಂತರ, ಜಿ23 ನಾಯಕರ ಧ್ವನಿಯೂ ಹೆಚ್ಚಾಗ ತೊಡಗಿದೆ. ಚುನಾವಣೆ ಪಾರದರ್ಶಕತೆಯಿಂದ ನಡೆಯಬೇಕು ಎಂದು ಈ ಗುಂಪಿನ ಸದಸ್ಯರು ಒತ್ತಾಯವನ್ನು ಮಾಡುತ್ತಿದ್ದಾರೆ.
ಮತದಾರರ ಪಟ್ಟಿಯನ್ನು ಬಹಿರಂಗ ಪಡಿಸಬೇಕೆಂದು ಈ ಗುಂಪಿನ ನಾಯಕರು ಒತ್ತಾಯಿಸುತ್ತಿದ್ದಾರೆ. ಇದು ಸಾಧ್ಯವಿಲ್ಲ ಎನ್ನುವ ಮಾತನ್ನು ಹಿರಿಯ ಮುಖಂಡ ಮಧುಸೂಧನ್ ಮಿಸ್ತ್ರಿ ಹೇಳುತ್ತಿದ್ದಾರೆ. ಇವೆಲ್ಲದರ ನಡುವೆ, ರಾಹುಲ್ ಗಾಂಧಿಯವರು ಮತ್ತೆ ಅಧ್ಯಕ್ಷರಾಗುತ್ತಾರಾ ಎನ್ನುವ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.
Breaking: ಅ. 17 ರಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ
ಅಶೋಕ್ ಗೆಹ್ಲೋಟ್ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವಂತೆ ಸೋನಿಯಾ ಒತ್ತಡ
2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾದ ನಂತರ ರಾಹುಲ್ ಗಾಂಧಿಯವರು ಕಾಂಗ್ರೆಸ್ ಅನ್ನು ತೊರೆದಿದ್ದರು. ಅಲ್ಲಿಂದ ಹಂಗಾಮಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವ ಸೋನಿಯಾ ಗಾಂಧಿ, ವಯಸ್ಸು ಮತ್ತು ಅನಾರೋಗ್ಯದ ಕಾರಣದಿಂದಾಗಿ ಪಕ್ಷಕ್ಕೆ ಕುಟುಂಬದ ಹೊರತಾದ ಮುಖಂಡರನ್ನು ಆಯ್ಕೆ ಮಾಡಲು ಉತ್ಸುಕರಾಗಿದ್ದರು. ತಾಯಿಯ ನಿಧನದ ಹಿನ್ನಲೆಯಲ್ಲಿ ವಿದೇಶದಲ್ಲಿರುವ ಸೋನಿಯಾ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವಂತೆ ಒತ್ತಾಯಿಸಿದ್ದರು ಎನ್ನುವ ಮಾತು ಕೇಳಿ ಬರುತ್ತಿತ್ತು.
ಕುಟುಂಬದಿಂದ ಹೊರತಾಗಿ ಕಾಂಗ್ರೆಸ್ ಇನ್ನೊಬ್ಬರಿಗೆ ಮಣೆ ಹಾಕಲಿದೆಯಾ?
ಆದರೆ, ಈಗ ಅಧ್ಯಕ್ಷೀಯ ಚುನಾವಣೆ ನಿಗದಿಯಾಗಿದೆ. ಗಾಂಧಿ, ನೆಹರೂ ಕುಟುಂಬದಿಂದ ಹೊರತಾಗಿ ಕಾಂಗ್ರೆಸ್ ಇನ್ನೊಬ್ಬರಿಗೆ ಮಣೆ ಹಾಕಲಿದೆಯಾ ಎನ್ನುವ ಪ್ರಶ್ನೆ ಎದುರಾಗುತ್ತಿರುವ ಸಂದರ್ಭದಲ್ಲಿ ಅಧ್ಯಕ್ಷರಾಗಿ ರಾಹುಲ್ ಗಾಂಧಿಯೇ ಆಯ್ಕೆಯಾಗಬಹುದು ಎನ್ನುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಯಾವುದೇ ಕಾರಣಕ್ಕೂ ಹುದ್ದೆ ವಹಿಸಿಕೊಳ್ಳಲು ಒಪ್ಪದ ರಾಹುಲ್ ಗಾಂಧಿ ಈಗ ಈ ಹುದ್ದೆಗೇರಲು ಮನಸ್ಸು ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ
ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನುವುದು ಪಕ್ಷದ ಹಿರಿಯ ನಾಯಕರು ವಿಶ್ವಾಸದ ಮಾತು. "ಗಾಂಧಿ ಕುಟುಂಬದಿಂದ ಯಾರೂ ನಾಯಕತ್ವವನ್ನು ವಹಿಸಿಕೊಳ್ಳುವುದಿಲ್ಲ" ಎನ್ನುವ ಮಾತನ್ನು ರಾಹುಲ್ ಗಾಂಧಿ ಹೇಳಿದ್ದರು. ಆದರೆ, ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ತೆಗೆದುಕೊಂಡಿದ್ದರು. 2024ರ ಚುನಾವಣೆಗೆ ನಿಮ್ಮ ನಾಯಕತ್ವದ ಅಗತ್ಯ ನಮಗಿದೆ, ಸಂಘಟನೆಯ ಸಾರಥ್ಯವನ್ನು ಒಪ್ಪಿಕೊಳ್ಳಿ ಎನ್ನುವ ಹಿರಿಯ ನಾಯಕರ ಒತ್ತಡಕ್ಕೆ ರಾಹುಲ್ ಗಾಂಧಿ ಪೂರಕವಾಗಿ ಸ್ಪಂದಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಎಐಸಿಸಿ ಕಾರ್ಯದರ್ಶಿ, ತೆಲಂಗಾಣದ ಪಿಸಿಸಿ ಸದಸ್ಯ ವಂಶಿ ಚಂದ್ ರೆಡ್ಡಿ
ಭಾನುವಾರದಿಂದ (ಸೆ 4) ಆರಂಭವಾಗಲಿರುವ ಭಾರತ್ ಜೋಡೊ ಕಾರ್ಯಕ್ರಮದ ಬಳಿಕ ರಾಹುಲ್ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಪಕ್ಷದ ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ, ಒಂದು ದಿನ ಬಿಡುವು ಮಾಡಿಕೊಳ್ಳುತ್ತೇನೆ ಎನ್ನುವ ಮಾತನ್ನು ರಾಹುಲ್ ಗಾಂಧಿ ಆಡಿದ್ದಾರೆ. ಗೆಹ್ಲೋಟ್, ಮಲ್ಲಿಕಾರ್ಜುನ ಖರ್ಗೆ, ಸಲ್ಮಾನ್ ಖುರ್ಷಿದ್ ಮುಂತಾದವರ ಒತ್ತಡ ಮುಂದುವರಿಯುತ್ತಿದೆ. ಎಐಸಿಸಿ ಕಾರ್ಯದರ್ಶಿ, ತೆಲಂಗಾಣದ ಪಿಸಿಸಿ ಸದಸ್ಯ ವಂಶಿ ಚಂದ್ ರೆಡ್ಡಿ, "ರಾಹುಲ್ ಅವರ ನಾಮನಿರ್ದೇಶನ ಪತ್ರಕ್ಕೆ ಪ್ರಪೋಸರ್ ಆಗಿ ಸಹಿ ಹಾಕಲು ಆಶಿಸುತ್ತಿದ್ದೇನೆ" ಎನ್ನುವ ಟ್ವೀಟ್ ಕುತೂಹಲ ಮೂಡಿಸಿದೆ.