Breaking: ಜಮ್ಮುಗೆ ರಾಹುಲ್ ಗಾಂಧಿ ಭೇಟಿ, ಕಾಂಗ್ರೆಸ್ & ಎನ್ಸಿ ಮೈತ್ರಿ?
ಶ್ರೀನಗರ, ಆಗಸ್ಟ್ 21: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ನ್ಯಾಷನಲ್ ಕಾನ್ಪರೆನ್ಸ್ ಜೊತೆ ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಿದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. 90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಈಗಾಗಲೇ ನ್ಯಾಷನಲ್ ಕಾನ್ಪರೆನ್ಸ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎರಡು ದಿನದ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಈಗಾಗಲೇ ರಾಜ್ಯದ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಿದೆ. ಆದ್ದರಿಂದ ನ್ಯಾಷನಲ್ ಕಾನ್ಪರೆನ್ಸ್ ಜೊತೆ ಮೈತ್ರಿ ಮಾತುಕತೆ ನಡೆಯುವ ನಿರೀಕ್ಷೆ ಇದೆ.

ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಜಮ್ಮುವಿನಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರ ಜೊತೆ ಸಭೆಯನ್ನು ನಡೆಸಲಿದ್ದಾರೆ. ಸೀಟುಗಳ ಹಂಚಿಕೆ ಕುರಿತು ಅಭಿಪ್ರಾಯವನ್ನು ಸಂಗ್ರಹ ಮಾಡಲಿದ್ದಾರೆ. ಗುರುವಾರ ನ್ಯಾಷನಲ್ ಕಾನ್ಪರೆನ್ಸ್ ಮುಖ್ಯಸ್ಥರ ಜೊತೆ ಸಭೆ ನಿಗದಿಯಾಗಿದೆ.
ಮೈತ್ರಿಕೂಟದಲ್ಲಿವೆ: ಈಗಾಗಲೇ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಲೋಕಸಭೆ ಚುನಾವಣೆ 2024ಕ್ಕೆ ರಚನೆಗೊಂಡ 'ಇಂಡಿಯಾ' ಮೈತ್ರಿಕೂಟದಲ್ಲಿ ಒಟ್ಟಿಗೆ ಇವೆ. ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಕೆಲವು ದಿನಗಳ ಹಿಂದೆ, "ಯಾವುದೇ ಪಕ್ಷದ ಜೊತೆ ಚುನಾವಣಾ ಪೂರ್ವ ಮೈತ್ರಿ ಇಲ್ಲ" ಎಂದು ಹೇಳಿದ್ದರು. ಆದರೆ ಮೂಲಗಳ ಮಾಹಿತಿ ಪ್ರಕಾರ ನ್ಯಾಷನಲ್ ಕಾನ್ಪರೆನ್ಸ್ ಆಹ್ವಾನದ ಮೇರೆಗೆ ರಾಹುಲ್ ಗಾಂಧಿ ಮತ್ತು ಖರ್ಗೆ ಎರಡು ದಿನದ ಭೇಟಿಗಾಗಿ ಆಗಮಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ ಮಂಗಳವಾರವೇ ಜಮ್ಮುವಿಗೆ ಆಗಮಿಸಿದ್ದಾರೆ. ಕಾರ್ಯಕರ್ತರ ಜೊತೆ ಸಭೆ ನಡೆಸಿದ ಅವರು, "ಬಿಜೆಪಿ ಮತ್ತು ಅದರ ರಾಜಕೀಯ ವಿರೋಧಿಸುವ ಯಾವುದೇ ಪಕ್ಷ, ವ್ಯಕ್ತಿಗಳ ಜೊತೆ ಕಾಂಗ್ರೆಸ್ ಪಕ್ಷ ಕೈ ಜೋಡಿಸಲಿದೆ. ಇದು ನಮ್ಮ ಸರಳವಾದ ನೀತಿ" ಎಂದು ಹೇಳಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿಯೂ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಎನ್ಸಿ ಸೀಟು ಹಂಚಿಕೆ ಮಾಡಿಕೊಂಡಿದ್ದವು. ಜಮ್ಮು ಮತ್ತು ಲಡಾಕ್ನ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಿತ್ತು. ಎನ್ಸಿ ಕಾಶ್ಮೀರದ ಮೂರು ಸೀಟುಗಳಲ್ಲಿ ಕಣಕ್ಕಿಳಿದಿತ್ತು. ಕಾಂಗ್ರೆಸ್ ಎಲ್ಲಾ 3 ಸೀಟುಗಳಲ್ಲಿ ಸೋತರೆ, ಎನ್ಸಿ ಎರಡು ಸೀಟುಗಳಲ್ಲಿ ಜಯಗಳಿಸಿತ್ತು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಈಗ ದಿನಾಂಕ ಘೋಷಣೆಯಾಗಿದೆ. ಒಟ್ಟು ಮೂರು ಹಂತದಲ್ಲಿ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1ರಂದು ಮತದಾನ ನಡೆಯಲಿದೆ. ಅಕ್ಟೋಬರ್ 4ರಂದು ಮತ ಎಣಿಕೆ ನಡೆಯಲಿದೆ.
ನ್ಯಾಷನಲ್ ಕಾನ್ಪರೆನ್ಸ್ ಪಕ್ಷ ಸೋಮವಾರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ಕ್ಕೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪಕ್ಷದ ನಾಯಕ ಉಮರ್ ಅಬ್ದುಲ್ಲಾ, "ಇದು ಕೇವಲ ಚುನಾವಣಾ ಪ್ರಣಾಳಿಕೆ ಅಲ್ಲ, ಮುಂದಿನ 5 ವರ್ಷದ ಸಂಪೂರ್ಣ ಆಡಳಿತದ ಮಾರ್ಗಸೂಚಿ" ಎಂದು ಹೇಳಿದ್ದಾರೆ.












Click it and Unblock the Notifications