ಜೇಟ್ಲಿ ಬಜೆಟನ್ನು ಠುಸ್ ಪಟಾಕಿ ಎಂದ ರಾಹುಲ್ ಗಾಂಧಿ
ಈ ಬಾರಿ ಕೇಂದ್ರ ಬಜೆಟ್ ಜತೆ ರೈಲ್ವೆ ಬಜೆಟನ್ನು ಒಟ್ಟಾಗಿ ಮಂಡಿಸಲಾಯಿತು. ಅರುಣ್ ಜೇಟ್ಲಿ ಮಂಡಿಸಿದ ಬಜೆಟಿಗೆ ಬೇರೆ ಬೇರ ಪಕ್ಷದ ನಾಯಕರು, ಉದ್ಯಮ ಪ್ರತಿನಿಧಿಗಳು ಏನು ಹೇಳಿದರು? ಸ್ಟೋರಿ ನೋಡಿ.
ನವದೆಹಲಿ, ಫೆಬ್ರವರಿ 1: ಹಣಕಾಸು ಸಚಿವ ಅರುಣ್ ಜೇಟ್ಲಿ 2017-18ನೇ ಸಾಲಿನ ಆಯವ್ಯಯವನ್ನು ಮಂಡಿಸಿದರು. ಈ ಬಾರಿ ವಿಶೇಷವಾಗಿ ರೈಲ್ವೇ ಬಜೆಟ್ ಮತ್ತು ಕೇಂದ್ರ ಬಜೆಟನ್ನು ಒಟ್ಟಿಗೆ ಮಂಡಿಸಲಾಯಿತು. ಚುನಾವಣೆಗಳ ಹಿನ್ನಲೆಯಲ್ಲಿ ಅಪಾರ ನಿರೀಕ್ಷೆ ಹೊಂದಿದ್ದ ಜನರಿಗೆ ಈ ಬಜೆಟಿನಿಂದ ಮೇಲ್ನೋಟಕ್ಕೆ ನಿರಾಸೆಯಾಗಿದೆ.
ಸಪ್ಪೆಯಾದ ಬಜೆಟ್ ಬಗ್ಗೆ ಸಹಜವಾಗಿ ರಾಹುಲ್ ಗಾಂಧಿಯಾದಿಯಾಗಿ ವಿರೋಧ ಪಕ್ಷಗಳು ಟೀಕಿಸಿವೆ. ಅದೇ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಸ್ವಪಕ್ಷದವರು ಹೊಗಳುವುದರಲ್ಲಿ ನಿರತರಾಗಿದ್ದಾರೆ. ಹಲವಾರು ನಾಯಕರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದು ಅವೆಲ್ಲವನ್ನೂ ಇಲ್ಲಿ ನೀಡುತ್ತಿದ್ದೇವೆ. ಬಜೆಟಿನ ಘೋಷಣೆಗಳು, ಯೋಜನೆಗಳ ಹಿನ್ನಲೆಯಲ್ಲಿ ವಿವಿಧ ನಾಯಕರು ನೀಡಿದ ಪ್ರತಿಕ್ರಿಯೆಗಳು ಇಲ್ಲಿವೆ.[ಟ್ವಿಟ್ಟರ್: 2018ರೊಳಗೆ ಎಲ್ಲಾ ಗ್ರಾಮಕ್ಕೂ ವಿದ್ಯುತ್ ಪೂರೈಕೆ?]
ಬಜೆಟ್ ಠುಸ್ ಪಟಾಕಿ
ಯುವಕರಿಗೆ, ರೈತರಿಗೆ ಬಜೆಟಿನಲ್ಲಿ ಏನೂ ಮಾಡಿಲ್ಲ. ನಾವೆಲ್ಲಾ ಸುಡುಮದ್ದು ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದರೆ ಬಜೆಟ್ ಠುಸ್ ಪಟಾಕಿಯಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ರಾಜಕೀಯ ದೇಣಿಗೆಯನ್ನು ಸ್ವಚ್ಛ ಮಾಡಲು ಸರಕಾರ ತೆಗೆದುಕೊಳ್ಳುವ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ.[ಕೇಂದ್ರ ಬಜೆಟ್ 2017: ಪ್ರಮುಖ ಅಭಿವೃದ್ಧಿ ಯೋಜನೆಗಳ ವಿವರ ಇಲ್ಲಿದೆ...]
ಹೊಸ ಬಾಟಲಿಯಲ್ಲಿ ಹಳೆ ಮಧ್ಯ
ಈ ಬಜೆಟಿನಲ್ಲಿ ಯಾವುದೇ ಹೊಸ ಅಂಶಗಳಿಲ್ಲ. ನೋಟ್ ಬ್ಯಾನ್ ನೀತಿಯಿಂದ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದರು. ಅವರಿಗೆ ಉದ್ಯೋಗ ನೀಡುವ ಕೆಲಸ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡುವ ನಿರೀಕ್ಷೆಯೂ ಹುಸಿಯಾಗಿದೆ. ಸಂಬಳದ ವರ್ಗಕ್ಕೆ ಮಾತ್ರ ಆದಾಯ ವಿನಾಯತಿ ನೀಡಿದ್ದಾರೆ. ದೇಶದಲ್ಲಿರುವ ಶೇಕಡಾ 60 ರೈತರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಜೆಟಿಗೆ ಚಾಟಿ ಬೀಸಿದ್ದಾರೆ.
ಬಡವರ ಕೈಗೆ ಬಲ
ಬಜೆಟಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದು ಹಣಕಾಸು ಸಚಿವರು ಉತ್ತಮ ಬಜೆಟ್ ಮಂಡಿಸಿದ್ದಾರೆ. ಇದು ಬಡವರ ಕೈ ಬಲಪಡಿಸಲು ಮಂಡಿಸಿದ ಬಜೆಟ್ ಎಂದು ಬಣ್ಣಿಸಿದ್ದಾರೆ. ರೈಲ್ವೇ ಬಜೆಟನ್ನು ಮುಖ್ಯ ಬಜೆಟಿನಲ್ಲಿ ಸೇರಿಸಿರುವುದರಿಂದ ಸಾರಿಗೆ ಕ್ಷೇತ್ರದ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ನವಯುಗಾರಂಭ
ರೈಲ್ವೇ ಬಜೆಟನ್ನು ಕೇಂದ್ರ ಬಜೆಟ್ ಜತೆ ಸೇರಿಸಿ ಮಂಡಿಸಿದ್ದನ್ನು ರೈಲ್ವೇ ಸಚಿವ ಸುರೇಶ್ ಪ್ರಭು ಸ್ವಾಗತಿಸಿದ್ದಾರೆ. ಇದೊಂದು ಹೊಸ ದಾರಿ ತೋರುವ ಬಜೆಟ್. ಭಾರತದಲ್ಲಿ ನವ ಯುಗಾರಂಭವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಅಲಂಕಾರಿಕ ಬಜೆಟ್
ಇದೊಂದು ಅಲಂಕಾರಿಕ ಬಜೆಟ್. ಆದರೆ ನಿಜವಾಗಿಯೂ ಈ ಬಜೆಟಿನಿಂದ ಉದ್ಯೋಗ ಸೃಷ್ಠಿಯಾಗುವುದೇ ಇಲ್ಲ. ರೈಲ್ವೇಯನ್ನು ಸುಮ್ಮನೆ ಕಾಟಾಚಾರಕ್ಕೆ ಉಲ್ಲೇಖ ಮಾಡಲಾಗಿದೆ. ಸರಕಾರದ ಯೋಜನೆಗಳ ಮೇಲಿನ ವೆಚ್ಚ ಹೆಚ್ಚಾಗಿದೆ. ಆದರೆ ಬಜೆಟ್ ಗಾತ್ರ ಹೆಚ್ಚಾಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಬಜೆಟನ್ನು ಟೀಕಿಸಿದ್ದಾರೆ.
ಉಪಯೋಗವಿಲ್ಲದ ವಾರ್ಷಿಕ ಸಂಪ್ರದಾಯ
ಪ್ರತಿ ವರ್ಷ ಬಜೆಟ್ ಮಂಡಿಸುವ ಅಗತ್ಯ ಏನು? ಕಳೆದ ವರ್ಷದ ಬಜೆಟಿನಲ್ಲಿ ನೀಡಿದ ಆಶ್ವಾಸನೆಗಳನ್ನೆಲ್ಲಾ ತಿರಿಸಲಾಗಿದೆಯೇ? ಎಂದು ಬಿಜೆಪಿಯ ಮಾಜಿ ಸಹ ಪಕ್ಷ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.
ಅಪ್ಪನ ಬೆಂಬಲಕ್ಕೆ ಮಗಳು
ಸ್ಕಿಲ್ ಡೆವಲಪ್ಮೆಂಟ್ ಬಗ್ಗೆ ಬಜೆಟಿನಲ್ಲಿ ಫೋಕಸ್ ಇದೆ. ಇದು ಮಹಿಳಾ ಪರವಾಗಿದೆ ಎಂದು ಅರುಣ್ ಜೇಟ್ಲಿ ಪುತ್ರಿ ಸೊನಾಲಿ ಜೇಟ್ಲಿ ಶ್ಲಾಘಿಸಿದ್ದಾರೆ. ಈ ಮೂಲಕ ತಂದೆ ಬೆಂಬಲಕ್ಕೆ ಮಗಳು ಧಾವಿಸಿದ್ದಾರೆ.
ರೈತ ಪರ ಬಜೆಟ್
ಅರುಣ್ ಜೇಟ್ಲಿಯವರು ಮಂಡಿಸಿದ ಬಜೆಟ್ ಬಡವರ, ರೈತ ಪರವಾದ ಐತಿಹಾಸಿಕ ಬಜೆಟ್. ಗ್ರಾಮೀಣ ಭಾಗದಲ್ಲಿ ಒಂದು ಕೋಟಿ ಮನೆ ಕಟ್ಟಲು ಯೋಜನೆಯನ್ನು ಘೋಷಿಸಲಾಗಿದೆ. 2019ರೊಳಗೆ ಎಲ್ಲಾ ಹಳ್ಳಿಗಳಿಗೂ ವಿದ್ಯುತ್ ನೀಡಲಾಗುತ್ತಿದೆ. ಇದೊಂದು ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡ ತಯಾರಿಸಿದ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲೇನು ಮಾಡ್ತಾರೆ?
ಸೇನೆಯ ಬಾಕಿ ಉಳಿದ ಕೆಲಸಗಳ ಬಗ್ಗೆ ಬಜೆಟಿನಲ್ಲಿ ಏನೂ ಉಲ್ಲೇಖಿಸಿಲ್ಲ. ಉತ್ತರ ಪ್ರದೇಶ ಚುನಾವಣೆಯಲ್ಲಿ ಹೇಗೆ ಸ್ಪರ್ಧೆ ಮಾಡುತ್ತಾರೆ? ಅವರೇನು ಚೆಕ್ ಅಥವಾ ಡಿಜಿಟಲ್ ಹಣವನ್ನೇ ಪಡೆಯುತ್ತಾರಾ? ಅಂತ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಪ್ರಶ್ನಿಸಿದ್ದಾರೆ.
ನಿರೀಕ್ಷೆ ಹುಸಿಯಾಗಿದೆ
ಇದೊಂದು ಮಿಶ್ರ ಬಜೆಟ್. ಕೈಗಾರಿಕೆಗಳು ಹೂಡಿಕೆ ಉತ್ತೇಜನವನ್ನು ಸರಕಾರದ ಕಡೆಯಿಂದ ನಿರೀಕ್ಷಿಸಿದ್ದವು. ಪ್ರಧಾನ ಮಂತ್ರಿಗಳು ಸಾಧ್ಯವಾದಷ್ಟು ಮಾಡಿದ್ದಾರೆ ಎಂದು ಅಂದುಕೊಂಡಿದ್ದೇವೆ. ಹೀಗೆ ಪ್ರತಿಕ್ರಿಯೆ ನೀಡಿದವರು ಕೈಗಾರಿಕೆ ಒಕ್ಕೂಟ 'ಅಸೊಚಾಮ್'ನ ಜನರಲ್ ಸೆಕ್ರೆಟರಿ ಡಿ.ಎಸ್ ರಾವತ್ ಹೇಳಿದ್ದಾರೆ.
ಐತಿಹಾಸಿಕ ಬಜೆಟ್
ಇದೊಂದು ಐತಿಹಾಸಿಕ ಬಹಳ ಪ್ರಮುಖ ಬಜೆಟ್. ಭವಿಷ್ಯದಲ್ಲಿ ಇದು ತುಂಬಾ ಪರಿಣಾಮ ಬೀರಲಿದೆ. ದೇಶದ ಆರ್ಥಿಕತೆಯನ್ನು ಈ ಬಜೆಟ್ ನಂಬರ್ ವನ್ ಸ್ಥಾನಕ್ಕೆ ತರಲಿದೆ. ಗ್ರಾಮೀಣ ಭಾಗ ಮತ್ತು ಕೃಷಿಗೆ ಬಜೆಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸ್ವಚ್ಛ ರಾಜಕೀಯಕ್ಕೆ ಆದ್ಯತೆ
ಇದೊಂದು ಸುಧಾರಣೆಗೆ ಒತ್ತು ನೀಡುವ ಬಜೆಟ್. ರಾಜಕೀಯ ವ್ಯವಸ್ಥೆಯ ಕಳಂಕ ತೊಳೆಯುವತ್ತ ಬಜೆಟಿನಲ್ಲಿ ಹೆಜ್ಜೆ ಇಡಲಾಗಿದೆ. ನಾವು ಇದನ್ನು ಮುಕ್ತಕಂಠದಿಂದ ಸ್ವಾಗತಿಸುತ್ತೇವೆ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ಅಭಿವೃದ್ಧಿಗೆ ಪೂರಕ
ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಅಭಿವೃದ್ಧಿಗೆ ಪೂರಕ ಬಜೆಟ್. ತೆರಿಗೆ ಕಟ್ಟುವವರಿಗೆ ಅನುಕೂಲಕರವಾಗಿದೆ. ನರೇಗಾಕ್ಕೆ 47ಸಾವಿರ ಕೋಟಿ ರೂಪಾಯಿ ನೀಡಿದ್ದಾರೆ. ರಾಜಕೀಯ ಪಕ್ಷಗಳನ್ನು ಉತ್ತರದಾಯಿತ್ವ ಮಾಡುವ ಮುನ್ಸೂಚನೆ ಬಜೆಟಿನಲ್ಲಿದೆ ಎಂದು ಸಂಸದ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ರೈಲ್ವೇ ಅಸ್ತಿತ್ವಕ್ಕೆ ಧಕ್ಕೆ
ಕೇಂದ್ರದ ಬಜೆಟ್ ಬಗ್ಗೆ ಅಪಾರವಾದ ನಿರೀಕ್ಷೆ ಇತ್ತು. ಆದರೆ ಯಾವುದೇ ಹೊಸ ಯೋಜನೆಗಳನ್ನು ಕೊಟ್ಟಿಲ್ಲ. ರೈಲ್ವೇ ಮತ್ತು ಕೇಂದ್ರ ಬಜೆಟ್ ವಿಲೀನಗೊಳಿಸುವ ಮೂಲಕ ರೈಲ್ವೆಯ ಅಸ್ತಿತ್ವಕ್ಕೆ ಧಕ್ಕೆ ತರಲಾಗಿದೆ. ದೇಶದ ಜನ ಬರದಿಂದ ತತ್ತರಿಸಿದ್ದಾರೆ. ಬರದಿಂದ ತತ್ತರಿಸಿರುವ ರೈತರಿಗೆ ಪರಿಹಾರ ಸಿಕ್ಕಿಲ್ಲ. ರಾಷ್ಟ್ರೀಕೃತಗಳ ಬ್ಯಾಂಕ್ ಸಾಲ ಮನ್ನಾ ಮಾಡುವ ನಿರೀಕ್ಷೆಯೂ ಹುಸಿಯಾಗಿದೆ ಎಂದು ಸಂಸದ ಮುದ್ದಹನುಮೇಗೌಡ ದೂರಿದ್ದಾರೆ.
ಅಂಕಿ ಅಂಶಗಳ ಕಸರತ್ತು
ಯುವಜನರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಯಾವುದೇ ಸ್ಪಂದನ ನೀಡದ ಪ್ರತಿಗಾಮಿ ಬಜೆಟ್ ಇದು. ಹೊಸ ಉದ್ಯೋಗ ಸೃಷ್ಟಿ, ಉದ್ಯೋಗ ಭದ್ರತೆಗೆ ಸಂಬಂಧಿಸಿ ಯಾವುದೇ ಯೋಜನೆ ಇಲ್ಲ. ಸಾರ್ವಜನಿಕ ಶಿಕ್ಷಣ ಕ್ಷೇತ್ರ ಬಲಗೊಳಿಸುವ ಪ್ರಯತ್ನಗಳಿಲ್ಲ. ಮಧ್ಯಮ ವರ್ಗವನ್ನು ತೃಪ್ತಿ ಪಡಿಸಲು ಅಂಕಿ ಅಂಶಗಳ ಕಸರತ್ತನ್ನಷ್ಟೇ ನಡೆಸಲಾಗಿದೆ. ನೋಟ್ ಬ್ಯಾನ್ ಬೇನೆಗೆ ಕನಿಷ್ಟ ಮುಲಾಮೂ ಹಚ್ಚಲಾಗಿಲ್ಲ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಡಬಲ್ ನಿರಾಸೆ
ವರ್ಣರಂಜಿತವಾಗಿ ಪ್ರಚಾರ ಮಾಡಿ ಕಳೆದ ಬಾರಿ ಮಂಡಿಸಿದ ಬಜೆಟನ್ನ ಮತ್ತೆ ಮಂಡಿಸಲಾಗಿದೆ. ಯಾವುದೇ ಹೊಸತನ ಇಲ್ಲ. ಕಾಟಾಚಾರಕ್ಕೆ, ಆತುರವಾಗಿ ಮಂಡಿಸಿದಂತಿದೆ. ಕಪ್ಪು ಹಣ ಎಲ್ಲಿದೆ..? ಎಂಬುದರ ಬಗ್ಗೆ ಮಾಹಿತಿ ಇಲ್ಲ. ರೈತರ ಪರವಾಗಿ ಏನೂ ಇಲ್ಲ. ಈ ಬಜೆಟನ್ನ ನೋಡಿ ನಮಗೆ ಡಬಲ್ ನಿರಾಸೆಯಾಗಿದೆ ಎಂದು ಮಂಗಳೂರು ಮೇಯರ್ ಹರಿನಾಥ್ ಪ್ರತಿಕ್ರಿಯಿಸಿದ್ದಾರೆ.