ಕಿಸಾನ್ ಮಹಾಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಶೂ ಎಸೆತ
ಉತ್ತರ ಪ್ರದೇಶ, ಸೆ.26 : ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೇಲೆ ಶೂ ಎಸೆದಿದ್ದಾರೆ. ಉತ್ತರ ಪ್ರದೇಶದ ಸೀತಾಪುರ್ ನಲ್ಲಿ ರಾಹುಲ್ ಗಾಂಧಿ ಕಿಸಾನ್ ಯಾತ್ರೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. [25 ವರ್ಷದಲ್ಲಿ ಅಯೋಧ್ಯೆಗೆ ಗಾಂಧಿ ಕುಟುಂಬದ ಮೊದಲ ಭೇಟಿ]
ಸೋಮವಾರ ಬೆಳಗ್ಗೆ ಸೀತಾಪುರದಲ್ಲಿ ತೆರೆದ ವಾಹನದಲ್ಲಿ ತೆರಳುತ್ತಿದ್ದ ವೇಳೆ ರಾಹುಲ್ ಗಾಂಧಿ ಮೇಲೆ ಕಿಡಿಗೇಡಿಯೊಬ್ಬ ಶೂ ಎಸೆದಿದ್ದು, ಅದೃಷ್ಟವಶಾತ್ ಶೂ ರಾಹುಲ್ ಗಾಂಧಿ ಅವರಿಗೆ ತಗುಲಿಲ್ಲ. ಆದರೆ ಶೂ ಎಸೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. [ಉತ್ತರಪ್ರದೇಶದ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯಲ್ಲಿ ನಡೆದಿದ್ದೇನು?]
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಹುಲ್, ನಾನು ತೆರೆದ ವಾಹನದಲ್ಲಿ ಚಲಿಸುತ್ತಿದ್ದೆ. ಈ ವೇಳೆ ಶೂವೊಂದನ್ನು ನನ್ನ ಮೇಲೆ ಎಸೆಯಲಾಯಿತು. ಆದರೆ, ಅದು ನನ್ನ ಮೇಲೆ ಬೀಳಲಿಲ್ಲ. ಬಿಜೆಪಿ ಹಾಗೂ ಆರ್ ಎಸ್ ಎಸ್ ಕಡೆಯ ಜನರೇ ನನ್ನ ಮೇಲೆ ಶೂ ಎಸೆದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಕಾಂಗ್ರೆಸ್ ಉಪಾಧ್ಯಕ್ಷ ಸುಮಾರು 2500 ಕಿ.ಮೀ ವರೆಗೆ ಕಿಸಾನ್ ಮಹಾಯಾತ್ರೆಯನ್ನು ನಡೆಸುತ್ತಿದ್ದಾರೆ.
ಇತ್ತೀಚೆಗೆ ಇದೇ ಉತ್ತರ ಪ್ರದೇಶದಲ್ಲಿ ನಡೆದ ಖಾಟ್ ಪೆ ಚರ್ಚಾ ಸಂವಾದ ವೇಳೆಯಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ರೈತರು ರಾಹುಲ್ ಗಾಂಧಿ ಭಾಷಣ ಕೇಳುವ ಬದಲು, ಮಂಚ ಎತ್ತಿಕೊಂಡು ಹೋಗಲು ಕಿತ್ತಾಟ ನಡೆಸಿದ್ದರಿಂದ, ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಅರ್ಧದಲ್ಲೇ ನಿಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.