ಲೋಕಸಭೆ ಚುನಾವಣೆ : 10 ಹೊಸ ವಕ್ತಾರರನ್ನು ನೇಮಿಸಿದ ಕಾಂಗ್ರೆಸ್
ನವದೆಹಲಿ, ಜನವರಿ 02: ಲೋಕಸಭೆ ಚುನಾವಣೆ 2019ಕ್ಕಾಗಿ ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ತನ್ನ ತಂಡಗಳಲ್ಲಿ ಬದಲಾವಣೆ ಮಾಡತೊಡಗಿದೆ. ಹೊಸದಾಗಿ 10 ಮಂದಿ ರಾಷ್ಟ್ರೀಯ ವಕ್ತಾರರನ್ನು ನೇಮಿಸಿರುವುದಾಗಿ ಎಐಸಿಸಿ ಪ್ರಕಟಿಸಿದೆ.
10 ಹೊಸ ರಾಷ್ಟ್ರೀಯ ವಕ್ತಾರರನ್ನು ನೇಮಕಕ್ಕೆ ಅನುಮೋದಿಸಿದ್ದು, ಅವರಲ್ಲಿ ಕೆಲವರು ಈಗಾಗಲೇ ಪಕ್ಷದ ಮಾಧ್ಯಮ ವಕ್ತಾರರಾಗಿದ್ದರು.
ರಾಜ್ಯಸಭಾ ಸಂಸದ ಸೈಯದ್ ನಸೀರ್ ಹುಸೇನ್, ಪವನ್ ಖೇರಾ, ಜೈವೀರ್ ಶೇರ್ಗಿಲ್, ರಾಗಿಣಿ ನಾಯಕ್, ಗೌರವ್ ವಲ್ಲಭ ಮತ್ತು ರಾಜೀವ್ ತ್ಯಾಗಿ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ.

ಉತ್ತರ ಪ್ರದೇಶದ ನಾಯಕ ಅಖಿಲೇಶ್ ಪ್ರತಾಪ್ ಸಿಂಗ್, ಸುನಿಲ್ ಅಹಿರೆ, ಶಾಸಕರಾದ ಹೀನಾ ಕವಾರೆ ಮತ್ತು ಶ್ರವಣ್ ಡಸೋಜು ಅವರು ಪಕ್ಷದ ನೂತನ ವಕ್ತಾರರಾಗಿ ನೇಮಕಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷವು ಈಗ 9 ಪ್ರಮುಖ ನಾಯಕರನ್ನು ಹಿರಿಯ ವಕ್ತಾರರಾಗಿ ಮತ್ತು 26 ವಕ್ತಾರರನ್ನು ಒಳಗೊಂಡಿದ್ದು, ಈ ಸಾಲಿಗೆ ಈ 10 ಜನ ಸೇರ್ಪಡೆಯಾಗಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ಮಾಧ್ಯಮ ಸಂಚಾಲಕರ ನೇಮಕಕ್ಕೂ ಅಸ್ತು ಎಂದಿದ್ದಾರೆ. ಶಾಮಾ ಮೊಹಮ್ಮದ್, ಐಶ್ವರ್ಯ ಮಹಾದೇವ್, ಆದಿಲ್ ಬೋಪರಾಯ್, ಅಮನ್ ಪವಾರ್, ಸಂಜಯ್ ಚೊಕಾರ್, ಅನಿಲ್ ಧಾಂತೋರಿ ಮತ್ತು ಜರಿತಾ ಲೈತ್ಪಹ್ಲಾಂಗ್ ಅವರನ್ನು ನೇಮಕ ಮಾಡಲಾಗಿದೆ.
ಇವರಲ್ಲದೆ, ಸಂಜೀವ್ ಸಿಂಗ್ ಅವರನ್ನು ಮುಖ್ಯ ರಾಷ್ಟ್ರೀಯ ಮಾಧ್ಯಮಗಳ ಸಂಯೋಜಕರಾಗಿ ಮತ್ತು ಮನೋಜ್ ತ್ಯಾಗಿ ಹಾಗೂ ಮೊಹಮ್ಮದ್ ಖಾನ್ ಅವರನ್ನು ರಾಷ್ಟ್ರೀಯ ಮಾಧ್ಯಮ ಸಂಯೋಜಕರಾಗಿ ನೇಮಿಸಲಾಗಿದೆ.(ಪಿಟಿಐ)












Click it and Unblock the Notifications