ಗ್ಯಾಸ್ ಬೆಲೆ ಏರಿಕೆ ವಿರುದ್ಧ ರಾಹುಲ್ ಕಾವ್ಯಾತ್ಮಕ ಟೀಕೆ
ಸಾಮಾಜಿಕ ಜಾಲತಾಣದಲ್ಲಿ ಮುಂಚಿಗಿಂತಲೂ ಹೆಚ್ಚು ಕ್ರಿಯಾಶೀಲರಾಗಿರುವ ಎ.ಐ.ಸಿ.ಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಣದುಬ್ಬರ ಮತ್ತು ಬೆಲೆ ಏರಿಕೆಯ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಿಂದಿಯಲ್ಲಿ ಹನಿಗವನವನ್ನು ಪ್ರಕಟಿಸಿ ಆ ಮೂಲಕ ಮೋದಿ ಅವರ ಕಾರ್ಯ ವೈಖರಿಯನ್ನು ಟೀಕಿಸಿ, ಮೋದಿ ಅವರ ಭಾಷಣವನ್ನು ಟೊಳ್ಳು ಎಂದು ಕರೆದಿದ್ದಾರೆ.
ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ!
ಭಾನುವಾರ ನವೆಂಬರ್ 5ರಂದು ಬೆಳಿಗ್ಗೆ ರಾಹುಲ್ ಅವರು ಗ್ಯಾಸ್ ದುಬಾರಿಯಾಗಿರುವ ಬಗ್ಗೆ ಪ್ರಕಟಗೊಂಡಿರುವ ವರದಿಯೊಂದನ್ನು ತಮ್ಮ ಟ್ವಿಟರ್ ಖಾತೆಯ ಮೂಲಕ ಪ್ರಕಟಿಸಿ, "ದುಬಾರಿ ಗ್ಯಾಸ್, ದುಬಾರಿಯಾಗಿದೆ ರೇಷನ್, ಸಾಕು ನಿಲ್ಲಿಸಿ ನಿಮ್ಮ ಟೊಳ್ಳು ಭಾಷಣ, ಬೆಲೆ ಏರಿಕೆ ನಿಯಂತ್ರಿಸಿ, ಉದ್ಯೋಗ ಸೃಷ್ಠಿಸಿ, ಇಲ್ಲವೇ ಬಿಟ್ಟಿಳಿಯಿರಿ ಸಿಂಹಾಸನ' ಎಂಬ ಟುಕುಟು ಕವಿತೆಯನ್ನು ಬರೆದುಕೊಂಡಿದ್ದಾರೆ.
ಎಲ್.ಪಿ.ಜಿ ದರವು 16 ತಿಂಗಳಲ್ಲಿ 19 ಬಾರಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾಹುಲ್ ಈ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಅನ್ನು 16 ಸಾವಿರ ಮಂದಿ ಲೈಕ್ ಮಾಡಿದ್ದು, 7600 ಮಂದಿ ರೀಟ್ವೀಟ್ ಮಾಡಿದ್ದಾರೆ.
ಗ್ಯಾಸ್ ದರ ಹೆಚ್ಚಾಗಿರುವುದನ್ನು ಗುಜರಾತ್ ಚುನಾವಣಾ ಭಾಷಣದಲ್ಲಿಯೂ ಪ್ರಸ್ತಾಪಿಸುತ್ತಿರುವ ರಾಹುಲ್ ಗಾಂಧಿ, ಬೆಲೆ ಏರಿಕೆ, ಜಿ.ಡಿ.ಪಿ ಕುಸಿತ ಮತ್ತು ಉದ್ಯೋಗ ಸಮಸ್ಯೆಯನ್ನು ಮುನ್ನೆಲೆಯಲ್ಲಿಟ್ಟು ಚುನಾವಣಾ ಪ್ರಚಾರ ಮಾಡುವ ತಂತ್ರಕ್ಕೆ ಅನುಸರಿಸುತ್ತಿದ್ದಾರೆ.
ಇದೇನಿದು ರಾಹುಲ್ ಮಾತುಗಳಲ್ಲಿ ಹಾಸ್ಯ, ವ್ಯಂಗ್ಯದ ಹೊನಲು!
ಗುಜರಾತ್ ಚುನಾವಣಾ ಪ್ರಚಾರದಲ್ಲಿ ಅಮೀತ್ ಷಾ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು. ರಾಹುಲ್ ಅವರು ಗುಜರಾತ್ ನ ರೈತರ ಸಂಕಷ್ಟಗಳ ಬಗ್ಗೆ ಮಾತನಾಡಿದ್ದಕ್ಕೆ ವ್ಯಂಗ್ಯದ ಮೂಲಕ ಟೀಕಿಸಿದ್ದಾರೆ. "ರಾಹುಲ್ ಅವರಿಗೆ ಲಾಭಕೋರ ಎನ್.ಜಿ.ಒ ಗಳು ಗುಜರಾತ್ ರೈತರ ಬಗ್ಗೆ ಮಾತನಾಡುವಂತೆ ಚೀಟಿ ಬರೆದುಕೊಟ್ಟಿವೆ' ಎಂದಿದ್ದಾರೆ.
महंगी गैस, महंगा राशन
— Office of RG (@OfficeOfRG) November 5, 2017
बंद करो खोखला भाषण
दाम बांधो, काम दो
वर्ना खाली करो सिंहासन https://t.co/LMd2KL0N5t
ಗುಜರಾತ್ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದ್ದು, ವರ್ಷದ ಹಿಂದೆಯಷ್ಟೆ ಬಿ.ಜೆ.ಪಿಯ ಭಧ್ರ ಕೋಟೆ ಎಂದೇ ಬಿಂಬಿತವಾಗಿದ್ದ ಗುಜರಾತ್ ನಲ್ಲೀಗ ಕಾಂಗ್ರೆಸ್, ಬಿ.ಜೆ.ಪಿ ನಡುವೆ ಸಮಬಲದ ಹೋರಾಟದ ಸಾಧ್ಯತೆಗಳು ದಟ್ಟವಾಗಿವೆ. ಜಿಗ್ನೇಷ್ ಮೆವಾನಿ ಕಾಂಗ್ರೆಸ್ ಕೈಜೋಡಿಸಿರುವುದು, ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪರ ಒಲವು ತೋರಿರುವುದು ಕಾಂಗ್ರೆಸ್ ಗೆ ಗೆಲ್ಲುವ ಆಸೆ ಚಿಗುರಿಸಿದೆ.
ಆದರೆ ಮತದಾರ ಯಾರ ಪರವಾಗಿದ್ದಾನೆಂಬುದು ಚುನಾವಣಾ ಫಲಿತಾಂಶ ಹೊರಬಿದ್ದಮೇಲಷ್ಟೆ ಗೊತ್ತಾಗಲಿದೆ.