WWE ಸೂಪರ್ಸ್ಟಾರ್ 'ದಿ ಗ್ರೇಟ್ ಖಲಿ' ಬಿಜೆಪಿ ಸೇರ್ಪಡೆ
ನವದೆಹಲಿ, ಫೆಬ್ರವರಿ 10: 'ದಿ ಗ್ರೇಟ್ ಖಲಿ' ಎಂದೇ ಪ್ರಸಿದ್ಧರಾದ ಡಬ್ಲ್ಯೂಡಬ್ಲ್ಯೂಇ ಸೂಪರ್ಸ್ಟಾರ್, ವೃತ್ತಿಪರ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಅವರು ಗುರುವಾರ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೇರ್ಪಡೆ ಆಗಿದ್ದಾರೆ. ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ನಡುವೆ 'ದಿ ಗ್ರೇಟ್ ಖಲಿ' ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಮಾಜಿ ಪಂಜಾಬ್ ಪೊಲೀಸ್ ಅಧಿಕಾರಿ 'ದಿ ಗ್ರೇಟ್ ಖಲಿ', ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಸಮ್ಮುಖದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಕೇಂದ್ರದ ಮೂರು ಕೃಷಿ ಕಾಯ್ದೆಯ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕುಸ್ತಿಪಟು ದಲೀಪ್ ಸಿಂಗ್ ರಾಣಾ ರೈತರಿಗೆ ಬೆಂಬಲ ಸೂಚಿಸಿದ್ದರು.
ಇನ್ನು ತಾನು ಬಿಜೆಪಿ ಸೇರ್ಪಡೆ ಆದ ಬಗ್ಗೆ ಸಂತಸ ವ್ಯಕ್ತಪಡಿಸಿದ ವೃತ್ತಿಪರ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಬಿಜೆಪಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯವನ್ನು ಶ್ಲಾಘಿಸಿದ್ದಾರೆ. ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ನೋಡಿಯೇ ತಾನು ಬಿಜೆಪಿ ಸೇರ್ಪಡೆ ಆಗಿದ್ದೇನೆ ಎಂದು ಕೂಡಾ ಹೇಳಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ನೀತಿಯಿಂದ ಪ್ರಭಾವಿತನಾದೆ ಎಂದ 'ದಿ ಗ್ರೇಟ್ ಖಲಿ'
"ನಾನು ಬಿಜೆಪಿಗೆ ಸೇರ್ಪಡೆ ಆಗಿರುವುದು ನನಗೆ ಸಂತಸ ಉಂಟು ಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕಾಗಿ ಮಾಡಿದ ಕೆಲಸಗಳು ನೋಡಿದಾಗ ಅವರ ಆ ಉತ್ತಮ ಕಾರ್ಯಗಳೇ ಅವರನ್ನು ಉತ್ತಮ ಪ್ರಧಾನ ಮಂತ್ರಿಯನ್ನಾಗಿ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ರಾಷ್ಟ್ರದ ಅಭಿವೃದ್ಧಿಗಾಗಿ ನಾನು ಕೂಡಾ ಯಾಕೆ ಆಡಳಿತದ ಭಾಗವಾಗಬಾರದು ಎಂದು ನನಗೆ ಆಲೋಚನೆ ಬಂದಿತು. ಈ ನಿಟ್ಟಿನಲ್ಲಿ ನಾನು ಬಿಜೆಪಿ ಪಕ್ಷವನ್ನು ಸೇರ್ಪಡೆ ಆಗಿದ್ದೇನೆ. ಬಿಜೆಪಿಯ ರಾಷ್ಟ್ರೀಯ ನೀತಿಯಿಂದ ಪ್ರಭಾವಿತನಾಗಿ ನಾನು ಬಿಜೆಪಿ ಸೇರ್ಪಡೆ ಆಗಿದ್ದೇನೆ," ಎಂದು 'ದಿ ಗ್ರೇಟ್ ಖಲಿ' ಎಂದೇ ಪ್ರಸಿದ್ಧರಾದ ಡಬ್ಲ್ಯೂಡಬ್ಲ್ಯೂಇ ಸೂಪರ್ಸ್ಟಾರ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಇಂದಿನಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಇದು ಮೊದಲ ಹಂತದ ಮತದಾನವಾಗಿದೆ. ಉತ್ತರ ಪ್ರದೇಶದಲ್ಲಿ ಮುಂದಿನ ಹಂತಗಳಲ್ಲಿ ಫೆಬ್ರವರಿ 14, 20, 23 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.
ಈ ಹಿಂದೆ ರೈತರಿಗೆ ಬೆಂಬಲ ಸೂಚಿಸಿದ 'ದಿ ಗ್ರೇಟ್ ಖಲಿ'
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ 'ದಿ ಗ್ರೇಟ್ ಖಲಿ' ಎಂದೇ ಪ್ರಸಿದ್ಧರಾದ ಡಬ್ಲ್ಯೂಡಬ್ಲ್ಯೂಇ ಸೂಪರ್ಸ್ಟಾರ್, ವೃತ್ತಿಪರ ಕುಸ್ತಿಪಟು ದಲೀಪ್ ಸಿಂಗ್ ರಾಣಾ ರೈತರಿಗೆ ಬೆಂಬಲ ಸೂಚಿಸಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಕುಸ್ತಿಪಟು ರಾಣಾ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳು ರಾಷ್ಟ್ರದ ಪ್ರತಿಭಟನಾ ನಿರತ ರೈತರಿಗೆ ತಮ್ಮ ಬೆಂಬಲವನ್ನು ತೋರಿಸಬೇಕೆಂದು ಮನವಿ ಮಾಡಿದ್ದರು. ರಾಣಾ ಬೆಂಬಲ ಸೂಚಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. "ಬೆಳೆಯನ್ನು 2 ರೂಪಾಯಿಗೆ ಖರೀದಿಸಿ 200 ರೂಪಾಯಿಗೆ ಮಾರಾಟ ಮಾಡುತ್ತಾರೆ. ಕಾನೂನುಗಳಿಂದ ದಿನಗೂಲಿ ಕಾರ್ಮಿಕರು, ರಸ್ತೆಬದಿ ವ್ಯಾಪಾರಿಗಳಿಗೂ ತೊಂದರೆಯಾಗುತ್ತದೆ. ಜನಸಾಮಾನ್ಯರು ತೊಂದರೆ ಅನುಭವಿಸುತ್ತಾರೆ ರೈತರನ್ನು ಬೆಂಬಲಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಈ ಮೂಲಕ ಕೇಂದ್ರ ಸರ್ಕಾರವು ರೈತರ ಬೇಡಿಕೆಯನ್ನು ಒಪ್ಪಬೇಕಾಗುತ್ತದೆ," ಎಂದು ಹೇಳಿದ್ದರು. (ಒನ್ಇಂಡಿಯಾ ಸುದ್ದಿ)












Click it and Unblock the Notifications