'ತೆರಿಗೆ ಬೇಡವೇ ಬೇಡ, ಆದಾಯದಲ್ಲಿ ಶೇ 2ರಷ್ಟು ಕೊಟ್ಟರೆ ಸಾಕು!'
ಪುಣೆ, ನವೆಂಬರ್ 15: ಪ್ರಧಾನಿ ನರೇಂದ್ರ ಮೋದಿ ಅವರಿಗೆ 500, 1000 ರುಪಾಯಿ ನೋಟು ರದ್ದು ಮಾಡುವ ಐಡಿಯಾ ಕೊಟ್ಟಿದ್ದ ಪುಣೆ ಮೂಲದ 'ಅರ್ಥ ಕ್ರಾಂತಿ'ಯ ಸಲಹೆಗಳಿಂದ ನಿಜಕ್ಕೂ ದೇಶದಲ್ಲಿ ಕ್ರಾಂತಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇನ್ನೊಂದು ಸೊಗಸಾದ ಸಲಹೆ ಇದೇ ಸಂಸ್ಥೆ ನೀಡಿತ್ತು ಎಂಬ ಸುದ್ದಿ ಜೋರಾಗಿ ಹರಿದಾಡಿದೆ.
ಅದೇನಪ್ಪ ಅಂತೀರಾ? ಈಗ ಸಂಗ್ರಹಿಸುತ್ತಿರುವ ಆದಾಯ ತೆರಿಗೆ ಹಾಗೂ ಐವತ್ತಾರು ವಿವಿಧ ಬಗೆಯ ತೆರಿಗೆಗಳ ಸಂಗ್ರಹವನ್ನು ಸರಕಾರ ನಿಲ್ಲಿಸಬೇಕಂತೆ. ಅದರ ಬದಲು ಬ್ಯಾಂಕಿಂಗ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಬಿಟಿಟಿ) ಇದ್ದರೆ ಸಾಕಂತೆ. ಯಾವುದೇ ವ್ಯಕ್ತಿಯ ಆದಾಯದಲ್ಲಿ ಶೇ 2ರಷ್ಟು ನೀಡಿದರೆ ಅಯ್ತಂತೆ.[500, 1000 ರುಪಾಯಿ ನೋಟು ರದ್ದು ನಿರ್ಧಾರದ ಹಿಂದಿರುವ ವ್ಯಕ್ತಿ ಯಾರು?]
ಸುಮ್ಮನೆ ಊಹಿಸಿಕೊಳ್ಳಿ, ತೆರಿಗೆ ಯಾವುದೂ ಇಲ್ಲ ಅಂದರೆ ಪೆಟ್ರೋಲ್ ಬೆಲೆ ಲೀಟರ್ ಗೆ 28 ರುಪಾಯಿ ಆಗುತ್ತೆ. ಇದು ಅರ್ಥಕ್ರಾಂತಿಯ ಮುಂದಿನ ಪ್ರಸ್ತಾವ' ಎಂದು ಟ್ವೀಟ್ ಕೂಡ ಮಾಡಲಾಗಿದೆ. ಈ ಸಂಸ್ಥೆಯಲ್ಲಿರುವವರೆಲ್ಲ ತಾಂತ್ರಿಕ ಪರಿಣತರು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಗಳು. ಇವರು ಮೊದಲಿಗೆ 1999ರಲ್ಲಿ ಐದು ಅಂಶದ ತೆರಿಗೆ ಸುಧಾರಣೆ ಬಗ್ಗೆ ಪ್ರಸ್ತಾವ ಮಾಡಿದ್ದರು.
ಸಂಸ್ಥೆಯೇ ತಿಳಿಸಿರುವ ಪ್ರಕಾರ, ಪ್ರಧಾನಮಂತ್ರಿ ಕಾರ್ಯಾಲಯದ ಜತೆಗೆ 2015ರಿಂದ ನಿರಂತರ ಚರ್ಚೆಗಳನ್ನು ನಡೆಸುತ್ತಿದೆ. ದೇಶದಲ್ಲಿ ಅಗಬೇಕಾದ ಆರ್ಥಿಕ ಕ್ರಾಂತಿ ನೀಲಿ ನಕಾಶೆಯನ್ನು ಪ್ರಧಾನಿ ಆಗುವ ಮುಂಚೆಯೇ ಮೋದಿ ಅವರಿಗೆ 2014ರಲ್ಲಿ ಕೊಡಲಾಗಿತ್ತು. ಈ ವರ್ಷದ ಜುಲೈನಲ್ಲಿ 'ಅರ್ಥಕ್ರಾಂತಿ'ಯ ಅನಿಲ್ ಬೊಕಿಲ್ ಒಂಬತ್ತು ನಿಮಿಷ ಪ್ರಧಾನಿ ಜತೆ ಆಡಿದ ಮಾತುಗಳಿಂದ ನೋಟು ರದ್ದು ನಿರ್ಧಾರಕ್ಕೆ ಬೀಜಾಂಕುರವಾಗಿದೆ.[ಕೋಟಿಗಟ್ಟಲೆ ಹಣ ಬ್ಯಾಂಕ್ ಗೆ ಕಟ್ಟಿ, ತೆರಿಗೆ ಪಾವತಿಸಿ ಸಾಕು!]
ಮೂಲತಃ ಔರಂಗಾಬಾದ್ ನವರಾದ ಅನಿಲ್ ಬೊಕಿಲ್ ಈ ವರ್ಷದ ಜುಲೈನಲ್ಲಿ ಮೊದಲಿಗೆ ಒಂಬತ್ತು ನಿಮಿಷವಷ್ಟೇ ಅವಕಾಶ ಸಿಕ್ಕಿತ್ತು. ಆ ನಂತರ ಸಿಕ್ಕ ತೊಂಬತ್ತು ನಿಮಿಷದ ಅವಧಿಯಲ್ಲಿ ನೋಟು ರದ್ದು ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದರು. 2013ರಲ್ಲಿ, ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅರ್ಥಕ್ರಾಂತಿಯ ಗುಂಪು ಗಾಂಧಿನಗರದಲ್ಲಿ ಭೇಟಿಯಾಗಿತ್ತು.
ಮೋದಿ ಅವರು ಭಾನುವಾರ ಬೆಳಗಾವಿಗೆ ಬಂದಿದ್ದ ಸಂದರ್ಭದಲ್ಲೂ ಈ ವಿಚಾರ ಪ್ರಸ್ತಾಪಿಸಿ, ಸಣ್ಣ ತಂಡವೊಂದು ಹತ್ತು ತಿಂಗಳಿಂದ ಈ ನಡೆಯ ಯೋಜನೆ ರೂಪಿಸಿತ್ತು ಎಂದಿದ್ದರು. ಸದ್ಯಕ್ಕಂತೂ ಪುಣೆ ಮೂಲದ ಸಂಸ್ಥೆಯ ಸಲಹೆ ಏನೆಂದರೆ, ಅಬಕಾರಿ ಹಾಗೂ ಸೀಮಾ ಸುಂಕ ಬಿಟ್ಟರೆ ಇನ್ನೆಲ್ಲ ತೆರಿಗೆಗಳನ್ನು ಕೈಬಿಡಬೇಕು.[ಚಿನ್ನಾಭರಣ ಅಂಗಡಿ ಸಿಸಿಟಿವಿ ಫೂಟೇಜ್ ಮೇಲೂ ಐಟಿ ಕಣ್ಣು]
ಬ್ಯಾಂಕಿಂಗ್ ವ್ಯವಸ್ಥೆ ಹೊರಗಿನ ದೊಡ್ಡ ಪ್ರಮಾಣದ ನಗದು ವ್ಯವಹಾರಗಳನ್ನು ನಿಲ್ಲಿಸಬೇಕು, ನೂರು ರುಪಾಯಿ ನೋಟು ಕೂಡ ಚಲಾವಣೆ ನಿಲ್ಲಬೇಕು, ಯಾವುದೇ ದೊಡ್ಡ ಮೊತ್ತದ ಹಣದ ವ್ಯವಹಾರ ಬ್ಯಾಂಕ್ ಮೂಲಕವೇ ಆಗಬೇಕು. ನಗದು ವಿಥ್ ಡ್ರಾ ಮಿತಿ ವಿಧಿಸಬೇಕು. ಜತೆಗೆ ಬ್ಯಾಂಕಿಂಗ್ ಟ್ರಾನ್ಸಾಕ್ಷನ್ ಟ್ಯಾಕ್ಸ್ ಕೇಂದ್ರ ಸರಕಾರ, ರಾಜ್ಯ ಸರಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯಿತಿಗಳ ಹಂಚಿಕೆಯಾಗಬೇಕು ಎಂಬುದು ಕೂಡ ಸಲಹೆಯಲ್ಲಿ ಸೇರಿದೆ.