ಸಿಆರ್ಪಿಎಫ್ ಯೋಧರ ಹತ್ಯೆ : ಭುಗಿಲೆದ್ದ ಆಕ್ರೋಶ, ದೇಶದಾದ್ಯಂತ ಪ್ರತಿಭಟನೆ
ನವದೆಹಲಿ, ಫೆಬ್ರವರಿ 15 : ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯರ ರಕ್ತ ಯಾವ ರೀತಿ ಕುದಿಯುತ್ತಿದೆಯೆಂದರೆ, ಖ್ಯಾತ ಜ್ಯೋತಿಷಿಯೊಬ್ಬರು ಕೂಡ, ನನಗೆ ಹೋಮಹವನ ಮಾಡಲು ಮನಸ್ಸಾಗುತ್ತಿಲ್ಲ, ಕೈಯಲ್ಲಿ ಬಂದೂಕು ಕೊಟ್ಟರೆ ಸಿಆರ್ಪಿಎಫ್ ಯೋಧರನ್ನು ಕೊಂದವರನ್ನು ಸುಟ್ಟು ಬರುತ್ತೇನೆ ಎಂದಿದ್ದಾರೆ.
ಕರ್ನಾಟಕದ ಮಾಜಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರು ಕೂಡ, ನನಗೆ 64 ವರ್ಷ ವಯಸ್ಸು. ನೀವು ಈಗಲೂ ನನಗೆ ಅವಕಾಶ ಕೊಟ್ರೆ ನಾನು ಜಮ್ಮು-ಕಾಶ್ಮೀರಕ್ಕೆ ತೆರಳಿ ಅಲ್ಲಿನ ಉಗ್ರ ಸಂಘಟನೆ ವಿರುದ್ಧ ಹೋರಾಡುತ್ತೇನೆ. ಈ ಕಾರ್ಯಾಚರಣೆಯಲ್ಲಿ ನನ್ನ ಜೀವ ಹೋದರೂ ಪರವಾಗಿಲ್ಲ, ನನ್ನನ್ನು ಕಳುಹಿಸಿಕೊಡಿ ಎಂದು ಮೋದಿಯವರನ್ನು ಕೋರಿದ್ದಾರೆ.
ಇದು ಒಬ್ಬಿಬ್ಬರ ಆಕ್ರೋಶವಲ್ಲ, ಬದಲಾಗಿ ಭಾರತದ ಕೋಟ್ಯಂತರ ನಾಗರಿಕರ ರೋಷಾಗ್ನಿ ಹೊತ್ತಿ ಧಗಧಗನೆ ಉರಿಯುತ್ತಿದೆ. ಬದ್ಧ ರಾಜಕೀಯ ವೈರಿಗಳು ಕೂಡ ನಿಮ್ಮೊಂದಿಗೆ ನಾವಿದ್ದೇವೆ, ಏನೇ ಕ್ರಮ ತೆಗೆದುಕೊಂಡರೂ ನಾವು ಬೆಂಬಲಿಸುತ್ತೇವೆ ಎಂದು ಕೇಂದ್ರ ಸರಕಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಪ್ರತೀಕಾರ ತೀರಿಸಿಕೊಳ್ಳದೆ ನಂದಿ ಹೋಗುವ ಆಕ್ರೋಶ ಇದಂತೂ ಅಲ್ಲವೇ ಅಲ್ಲ.
ಇನ್ನು ದೇಶದಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ, ಜನರು ರಸ್ತೆಗಿಳಿದು ಪಾಕ್ ಬೆಂಬಲಿತ ಉಗ್ರರ ಚಿತ್ರಗಳಿರುವ ಬ್ಯಾನರುಗಳಿಗೆ ಬೆಂಕಿ ಹಚ್ಚಿ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆಯಂತೂ, ನಾವೀ ದಾಳಿಯನ್ನು ಮರೆಯುವುದಿಲ್ಲ, ಮನ್ನಿಸುವುದೂ ಇಲ್ಲ ಪಣ ತೊಟ್ಟಿದ್ದಾರೆ. ಮಾನವ ಬಾಂಬ್ ಅನ್ನು ನುಗ್ಗಿಸಿ 44 ಯೋಧರನ್ನು ಕೊಂದು ಹಾಕಿರುವುದು ಮರೆಯುವೂದೂ ಸಾಧ್ಯವಿಲ್ಲ, ಮನ್ನಿಸುವ ಮಾತೇ ಇಲ್ಲ.

ಜಮ್ಮುನಲ್ಲಿ ಹಿಂಸಾತ್ಮಕ ರೂಪ ಪಡೆದ ಪ್ರತಿಭಟನೆ
ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ 44 ಯೋಧರನ್ನು ಕೊಂದಿದ್ದಕ್ಕೆ ಪ್ರತಿಯಾಗಿ ಜಮ್ಮುವಿನಲ್ಲಿ ನಡೆಸಲಾಗುತ್ತಿರುವ ಜನರ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಜಮ್ಮು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಬಂದ್ ಗೆ ಕರೆ ನೀಡಿತ್ತು. ಈ ಸಮಯದಲ್ಲಿ ಪ್ರತಿಭಟನಾಕಾರರು ಹಿಂಸೆಗಿಳಿದಿದ್ದು, ಕಾರುಗಳನ್ನು ಸುಟ್ಟುಹಾಕಿ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನಾಕಾರರು ಕಂಡ ವಾಹನಗಳ ಮೇಲೆ ಹತ್ತಿ ಭಾರತದ ಬಾವುಟ ಹಿಡಿದು ಪಾಕಿಸ್ತಾನದ ವಿರುದ್ಧ ಧಿಕ್ಕಾರ ಕೂಗಿದರು.

ಜಮ್ಮುನಲ್ಲಿ ಕಲ್ಲು ತೂರಾಟ, ಕಾರುಗಳಿಗೆ ಬೆಂಕಿ
ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಆತ್ಮಾಹುತಿ ಮಾಡಿಕೊಂಡ ಉಗ್ರ 300 ಕೆಜಿ ಸ್ಫೋಟಕಗಳನ್ನು ತುಂಬಿಕೊಂಡ ಸ್ಕಾರ್ಪಿಯೋ ವಾಹನವನ್ನು ಯೋಧರ ವಾಹನಕ್ಕೆ ನುಗ್ಗಿಸಿ ಸ್ಫೋಟಿಸಿದ್ದ. ಇದರಿಂದ ರೊಚ್ಚಿಗೆದ್ದಿರುವ ಜಮ್ಮು ನಿವಾಸಿಗಳು ಆಕ್ರೋಶಭರಿತರಾಗಿ ಕಲ್ಲು ತೂರಾಟ ನಡೆಸಿದ್ದಾರೆ. ಸಿಕ್ಕಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಶಮನ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸರು ಉದ್ವಿಗ್ನಗೊಂಡಿರುವ ನಗರದಲ್ಲಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಹರಸಾಹಸಪಡುತ್ತಿದ್ದಾರೆ.

ಸಿಡಿದ ಆಕ್ರೋಶದ ಜ್ವಾಲಾಮುಖಿ
ಭಾರತದ ಜನರೆಲ್ಲ ಒಗ್ಗೂಡಿದರೆ ಪಾಕಿಸ್ತಾನವನ್ನು ಹೊಸಕಿಹಾಕುವುದು ಕಷ್ಟವೇನಲ್ಲ. ಇದನ್ನು ಅರಿಯದ ಪಾಕ್ ಬೆಂಬಲಿತ ಉಗ್ರರು ಭಾರತದ ಮೇಲೆ ಮೇಲಿಂದ ಮೇಲೆ ದಾಳಿ ನಡೆಸುತ್ತಲೇ ಇದ್ದಾರೆ. ಹಿಂದೆ ಉರಿಯಲ್ಲಿ ನಡೆದ ದಾಳಿಯ ನಂತರ ಸರ್ಜಿಕಲ್ ಸ್ಟ್ರೈಕ್ ಆದ ಮೇಲೂ ಪಾಕ್ ಕಿಡಿಗೇಡಿ ಉಗ್ರರಿಗೆ ಬುದ್ಧಿ ಬಂದಂತಿಲ್ಲ. ಪ್ರತೀಕಾರ ತೀರಿಸಿಯೇ ತೀರಿಸಿಕೊಳ್ಳುತ್ತೇವೆ ಎಂದು ಮೋದಿ, ರಾಜನಾಥ್ ಸಿಂಗ್ ಅಬ್ಬರಿಸಿದ್ದಾರೆ. ಜಮ್ಮುವಿನಲ್ಲಿಯೂ ಆಕ್ರೋಶದ ಜ್ವಾಲಾಮುಖಿ ಸಿಡಿಯಲು ಸಿದ್ಧವಾಗಿದೆ. ಪ್ರತಿಭಟನಾಕಾರರು ಕೈಯಲ್ಲಿ ಭಾರತದ ಧ್ವಜವನ್ನು ಹಿಡಿದುಕೊಂಡು ಉಗ್ರ ಸ್ವರೂಪದಲ್ಲಿ ಧಿಕ್ಕಾರ ಕೂಗಿದರು.

ಪಾಕಿಸ್ತಾನ ಮುರ್ದಾಬಾದ್
ಮುಂಬೈನಲ್ಲಿ ಶಿವಸೇನೆ ಕಾರ್ಯಕರ್ತರು ಲಾಲ್ ಬಾಗ್ ನಲ್ಲಿ ರಸ್ತೆಗಿಳಿದು 'ಪಾಕಿಸ್ತಾನ ಮುರ್ದಾಬಾದ್', 'ಸಿಆರ್ ಪಿಎಫ್ ಜವಾನರಿಗೆ ಭಾವಪೂರ್ಣ ಶ್ರದ್ಧಾಂಜಲಿ', 'ಸರಕಾರವೇನು ನಿದ್ದೆ ಮಾಡುತ್ತಿದೆಯೆ', ಮುಂತಾದ ಬ್ಯಾನರ್ ಗಳನ್ನು ಹಿಡಿದುಕೊಂಡು ಪಾಕ್ ವಿರೋಧಿ ಘೋಷಣೆಗಳನ್ನು ಕೂಗಿದರು. ಈ ಪ್ರತಿಭಟನೆಯಲ್ಲಿ ಹಲವಾರು ಮುಸ್ಲಿಂ ಮೌಲ್ವಿಗಳು ಕೂಡ ಸೇರಿಕೊಂಡಿದ್ದು ವಿಶೇಷ.

ಪಟ್ನಾದಲ್ಲಿ ಬೀದಿಗಿಳಿದು ವಿದ್ಯಾರ್ಥಿಗಳಿಂದ ಪ್ರತಿಭಟನೆ
ಬಿಹಾರದ ಪಟ್ನಾದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾಲೇಜಿಗೆ ಚಕ್ಕರ್ ಹಾಕಿ, ಭಾರತದ ಸಿಆರ್ ಪಿಎಫ್ ಯೋಧರನ್ನು ಕೊಂದು ಹಾಕಿದ ಉಗ್ರರ ವಿರುದ್ಧ ಧಿಕ್ಕಾರ ಕೂಗಿದರು. ಪಾಕಿಸ್ತಾನ ಮುರ್ದಾಬಾದ್, ಭಾರತ ಮಾತಾ ಕಿ ಜೈ, ಜೈ ಜವಾನ ಅಮರ ರಹೇ, ಶಹೀದೋಂಕೆಲಿಯೆ ಪ್ರಾರ್ಥನಾ ಮುಂತಾದ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗಿದರು. ಪಾಕಿಸ್ತಾನಕ್ಕೆ ನೀಡುತ್ತಿರುವ ನೀರಿನ ಸಂಪರ್ಕವನ್ನು ಕಟ್ ಮಾಡಬೇಕು ಎಂದೂ ಕೂಗು ಹಾಕಿದರು. ಕೆಲವೆಡೆ ಪಾಕಿಸ್ತಾನದ ಬಾವುಟಕ್ಕೆ ಬೆಂಕಿ ಹಚ್ಚಿದ ಘಟನೆ ಕೂಡ ನಡೆದಿದೆ.

ಅಮೃತಸರದಲ್ಲಿ ಪಾಕ್ ಧ್ವಜಕ್ಕೆ ಬೆಂಕಿ
ಅಮೃತಸರದಲ್ಲಿ, ಅಖಿಲ ಭಾರತ ಉಗ್ರ ವಿರೋಧಿ ಸಂಘಟನೆ, ಶಿವಸೇನೆ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಾಕಿಸ್ತಾನದ ಧ್ವಜಕ್ಕೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಾರಣಾಸಿಯಲ್ಲಿ ಕೂಡ ಪ್ರತಿಭಟನೆ ಮುಗಿಲು ಮುಟ್ಟಿದ್ದು, ವಕೀಲರು ಕಲಾಪಗಳನ್ನು ಬಹಿಷ್ಕರಿಸಿ, ಭಾರತೀಯ ಜವಾನರನ್ನು ನಿರ್ದಯವಾಗಿ ಕೊಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಪಾಕ್ ಭಯೋತ್ಪಾದಕರ ಪ್ರತಿಕೃತಿಗೆ ಬೆಂಕಿ ಹಚ್ಚಿ ಭಸ್ಮ ಮಾಡಿದರು.

ಮೈಸೂರಿನ ನಾಗರಿಕರಿಂದ ಶಾಂತಿಯುಂತ ಪ್ರತಿಭಟನೆ
ಮೈಸೂರಿನಲ್ಲಿನ ನಾಗರಿಕರು ಶಾಂತ ರೀತಿಯಲ್ಲಿ ಪಾಕ್ ಉಗ್ರರ ವಿರುದ್ಧ ಪ್ರತಿಭಟನೆ ನಡೆಸಿ, ಹುತಾತ್ಮರಾದ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮೈಸೂರಿನ ಜಿಲ್ಲಾ ಕಚೇರಿಯ ಎದಿರು ಜಮಾಯಿಸಿ ಉಗ್ರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೋಟೆಲ್ ಮಾಲಿಕರ ಸಂಘ ಕೂಡ ಬೀದಿಗಿಳಿದು ಉಗ್ರರ ವಿರುದ್ಧ ಕಿಡಿ ಕಾರಿದರು.

ಸರ್ಜಿಕಲ್ ಸ್ಟ್ರೈಕ್ ಆಗಲಿ ಎಂದ ಮಂಗಳೂರಿಗರು
ಮಂಗಳೂರಿನಲ್ಲಿ ಕೂಡ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರಲ್ಲದೆ, ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕಿಸ್ತಾನಿ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು. ಪಿವಿಎಸ್ ವೃತ್ತದ ಬಳಿ ಸೇರಿದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದರು.












Click it and Unblock the Notifications