ರಾಹುಲ್ ಸತತ ವೈಫಲ್ಯ: ಪ್ರಿಯಾಂಕ ಗಾಂಧಿಗೆ ಮಹತ್ವದ ಜವಾಬ್ದಾರಿ?
ಸ್ವಾತಂತ್ರ್ಯಾನಂತರದ ಭಾರತದಲ್ಲಿ ಕುಟುಂಬ ರಾಜಕಾರಣ ಎನ್ನುವ ಪದ ಶುರುವಾಗಿದ್ದೇ ನೆಹರೂ ಕುಟುಂಬದಿಂದ. ತದನಂತರ ಅದರ ಮುಂದುವರಿದ ಭಾಗವಾಗಿ ಅದು ಎಲ್ಲಾ ರಾಜ್ಯ, ರಾಷ್ಟ್ರೀಯ ಮಟ್ಟದ ಪಕ್ಷವನ್ನು ಆವರಿಸಿಕೊಂಡಿತು.
Organization chart ರೀತಿಯಲ್ಲಿ ನೆಹರೂ, ಇಂದಿರಾ, ಸಂಜಯ್, ರಾಜೀವ್, ಸೋನಿಯಾ, ರಾಹುಲ್ ಗಾಂಧಿ ನಂತರ ಈಗ ಪ್ರಿಯಾಂಕ ಗಾಂಧಿ ವಾದ್ರಾಗೆ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ಇಳಿಯಲು ವೇದಿಕೆ ಸಜ್ಜಾಗುತ್ತಿದೆ. (ರಾಜ್ಯ ರಾಜಕಾರಣಕ್ಕೆ ರಾಹುಲ್, ಪ್ರಿಯಾಂಕ)
ಸಕ್ರಿಯ ರಾಜಕಾರಣಕ್ಕೆ ಇಳಿಯುವ ಸಂಬಂಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ದೇಶನದ ಮೇರೆಗೆ ಗುಲಾಂನಬಿ ಆಜಾದ್ ನೀಡಿದ ಆಫರ್ ಅನ್ನು ಪ್ರಿಯಾಂಕ ನಯವಾಗಿ ಸ್ವೀಕರಿಸಿದ್ದಾರೆ ಎಂದು ಸಿಎನ್ಎನ್ - ನ್ಯೂಸ್ 18 ವರದಿ ಮಾಡಿದೆ.
ಕಾಂಗ್ರೆಸ್, ಬಿಜೆಪಿ, ಬಿಎಸ್ವಿ ಮತ್ತು ಎಸ್ಪಿಗೆ ನಿರ್ಣಾಯಕವಾಗಿರುವ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆ ಮುಂದಿನ ವರ್ಷ ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ಪರವಾಗಿ ಕಾರ್ಯತಂತ್ರ ರೂಪಿಸಲು ನಿಯೋಜನೆಗೊಂಡಿರುವ ಐಪ್ಯಾಕ್ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಕಿಶೋರ್, ಪ್ರಿಯಾಂಕ ಉತ್ತರಪ್ರದೇಶ ಚುನಾವಣೆಯ ಆಖಾಡಕ್ಕೆ ಇಳಿಯಲೇ ಬೇಕೆಂದು ಸೂಚಿಸಿದ್ದಾರೆ.
ತಾಯಿ ಸೋನಿಯಾ ಗಾಂಧಿಯವರ ರಾಯ್ ಬರೇಲಿ, ಸಹೋದರ ರಾಹುಲ್ ಗಾಂಧಿಯ ಅಮೇಠಿ ಕ್ಷೇತ್ರದಲ್ಲಿ ಮಾತ್ರ ಮತದಾರರ ಕಷ್ಟಸುಖ ವಿಚಾರಿಸುತ್ತಿದ್ದ ಪ್ರಿಯಾಂಕ ಗಾಂಧಿ ಈಗ ಉತ್ತರಪ್ರದೇಶದ ಮತದಾರರ ಕಷ್ಟ ಆಲಿಸಲು ಮುಂದಾಗಿದ್ದಾರೆ. (ಆಧುನಿಕ ಚಾಣಕ್ಯನ ಬೆನ್ನೇರಿದ ಸೋನಿಯಾ ಪಡೆ)
ಪ್ರಶಾಂತ್ ಕಿಶೋರ್ ಸಲಹೆಯಂತೆ ಉತ್ತರಪ್ರದೇಶ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ಪ್ರಿಯಾಂಕ ವಹಿಸಿಕೊಳ್ಳಲಿದ್ದಾರೆ, ಆದರೆ ಸಿಎಂ ಅಭ್ಯರ್ಥಿಯಾಗಿಯಲ್ಲ. ಸಿಎಂ ಅಭ್ಯರ್ಥಿಯಾಗಿ ಪಕ್ಷದ ಹಿರಿಯ ಮುಖಂಡರೊಬ್ಬರ ಹೆಸರನ್ನು ಕಾಂಗ್ರೆಸ್ ಅಂತಿಮ ಗೊಳಿಸುವ ಸಾಧ್ಯತೆಯಿದೆ. ಮುಂದೆ ಓದಿ..
ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯಿಂದ ಪಕ್ಷಕ್ಕೆ ಹೆಚ್ಚಿನ ಲಾಭವಾಗದ ಹಿನ್ನಲೆಯಲ್ಲಿ ಪ್ರಿಯಾಂಕಾ ಗಾಂಧಿಯವರನ್ನು ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಮೂಲಕ ಸಕ್ರಿಯ ರಾಜಕಾರಣಕ್ಕೆ ಇಳಿಸಲು ಸೋನಿಯಾ ಗಾಂಧಿ ಉತ್ಸುಕರಾಗಿದ್ದಾರೆ. ಪಕ್ಷದ ಕಾರ್ಯಕರ್ತರು ಕೂಡಾ ಪ್ರಿಯಾಂಕ ರಾಜಕಾರಣಕ್ಕೆ ಬರಬೇಕೆಂದು ಬಯಸುತ್ತಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ
ಉತ್ತರಪ್ರದೇಶ ಚುನಾವಣೆಯ ನಂತರ ಪ್ರಿಯಾಂಕ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸುವ ಸಾಧ್ಯತೆಯಿದೆ. ಸಹೋದರ ಸ್ಪರ್ಧಿಸುತ್ತಿದ್ದ ಅಮೇಠಿ ಕ್ಷೇತ್ರವನ್ನು ಪ್ರಿಯಾಂಕ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ.
ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್
ಪ್ರಿಯಾಂಕ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದರೂ, ದೆಹಲಿಯ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರ ಹೆಸರು ಮುಖ್ಯಮಂತ್ರಿ ಅಭ್ಯರ್ಥಿಗಳ ಹೆಸರಿನಲ್ಲಿ ಕೇಳಿ ಬರುತ್ತಿದೆ.
ಕಾರ್ಯಕರ್ತರ ಒತ್ತಾಯ
ಕಾರ್ಯಕರ್ತರು ಎಷ್ಟೇ ಒತ್ತಾಯಿಸಿದರೂ ರಾಜಕೀಯಕ್ಕೆ ಇಳಿಯಲು ಮನಸ್ಸು ಮಾಡದ ಪ್ರಿಯಾಂಕ, ಈಗ ಕಾಂಗ್ರೆಸ್ ತೀರಾ ಬಿಕ್ಕಟ್ಟಿನ ಸ್ಥಿತಿಯಲ್ಲಿರುವುದರಿಂದ ಉತ್ತರಪ್ರದೇಶದ ಮೂಲಕ ಸಕ್ರಿಯ ರಾಜಕಾರಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಒಂದೊಂದೇ ರಾಜ್ಯಗಳೂ ಪಕ್ಷದ ಕೈತಪ್ಪುತ್ತಿದೆ.
ಎರಡು ಸ್ಥಳೀಯ ಪಕ್ಷ ಮತ್ತು ಒಂದು ರಾಷ್ಟ್ರೀಯ ಪಕ್ಷ
ಎರಡು ಸ್ಥಳೀಯ ಪಕ್ಷ ಮತ್ತು ಒಂದು ರಾಷ್ಟ್ರೀಯ ಪಕ್ಷವನ್ನು ಸಮರ್ಥವಾಗಿ ಎದುರಿಸಲು ಸಿಎಂ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿಯವರನ್ನು ಬಿಂಬಿಸಬೇಕೆಂದು ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದರು. ಇದಾಗದಿದ್ದರೆ, ಬ್ರಾಹ್ಮಣ ಸಮುದಾಯದ ವ್ಯಕ್ತಿಯೊಬ್ಬರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಪ್ರಶಾಂತ್ ಕಿಶೋರ್ ಹೇಳಿದ್ದರು. ಅದರಂತೇ, ಶೀಲಾ ದೀಕ್ಷಿತ್ ಹೆಸರು ಕೇಳಿ ಬರುತ್ತಿದೆ.