ಸ್ವಾತಂತ್ರ್ಯೋತ್ಸವ ಭಾಷಣ: ಕಿತ್ತೂರು ಚೆನ್ನಮ್ಮನ ನೆನೆದ ರಾಷ್ಟ್ರಪತಿ
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಸ್ವಾತಂತ್ರ್ಯೋತ್ಸವ ಶುಭಾಷಯ ಭಾಷಣ. ರಾಷ್ಟ್ರಪತಿಯಾದ ನಂತರ ಮೊದಲ ಭಾಷಣ ಮಾಡಿದ ಕೋವಿಂದ್.
ನವದೆಹಲಿ, ಆಗಸ್ಟ್ 14: ''ಭಗತ್ ಸಿಂಗ್ ಅವರಂಥ ತ್ಯಾಗ ಜೀವಿಗಳನ್ನು ನೆನೆದು, ರಾಷ್ಟ್ರದ ಏಳ್ಗೆಯಲ್ಲಿ ಒಗ್ಗೂಡಿಸಿಕೊಳ್ಳಬೇಕು'' ಎಂದು ನೂತನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕರೆ ನೀಡಿದರು. ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಂಡ ಅವರು, ಅವರು ಬ್ರಿಟಿಷರ ವಿರುದ್ಧ ಹೋರಾಡಿದ ಕನ್ನಡತಿ ರಾಣಿ ಕಿತ್ತೂರು ಚೆನ್ನಮ್ಮ ಅವರನ್ನು ಸ್ಮರಿಸಿದ್ದು ವಿಶೇಷವಾಗಿತ್ತು.
ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ, ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು, ''ನಮ್ಮ ಸಮಾಜದ ಬಗ್ಗೆ ಆಲೋಚಿಸುವುದು ಸಹಜ. ಆದರೆ, ಅದರ ಜತೆಗೆ ನಾವು ನಮ್ಮ ರಾಷ್ಟ್ರದ ಬಗ್ಗೆಯೂ ಆಲೋಚಿಸಬೇಕು. ಹಾಗಾದರೆ, ಮಾತ್ರವೇ ನಾವು ಒಂದು ಸುಭದ್ರ, ಸಮೃದ್ಧ ಭಾರತವನ್ನು ಕಟ್ಟಲು ಸಾಧ್ಯ'' ಎಂದರು.
ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಲಾಲಾ ಲಜಪತ್ ರಾಯ್, ಬಾಲ ಗಂಗಾಧರ ತಿಲಕ್ ಮುಂತಾದವರು ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯದ ಕನಸಿಗೆ ತಮ್ಮ ಉದಾತ್ತ ದೇಣಿಗೆ ನೀಡಿದ್ದಾರೆ. ಭಾರತ ಸ್ವತಂತ್ರ್ಯವಾದ ನಂತರ, ನೆಹರೂ ಅವರು ಭಾರತವನ್ನು ಅಭಿವೃದ್ಧಿ ಪಥದಲ್ಲಿ ತೆರಳುವಂತೆ ಮಾಡಲು ಶ್ರಮಿಸಿದ್ದಾರೆ. ಅವರೆಲ್ಲರ ಶ್ರಮದಿಂದ ಇಂದು ನಮ್ಮ ದೇಶವೆಂಬ ಹೆಮ್ಮೆಯಲ್ಲಿ ನಾವು ಬದುಕುವಂತಾಗಿದೆ ಎಂದು ಅವರು ವಿವರಿಸಿದರು.
ರಾಷ್ಟ್ರಪತಿಯವರ ಭಾಷಣದ ಪ್ರಮುಖಾಂಶ ಇಲ್ಲಿದೆ.
- ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಇದರಲ್ಲಿ ಜಿಎಸ್ ಟಿಯೂ ಒಂದು.
- ಇದನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ದೇಶ ಕಟ್ಟುವಲ್ಲಿ ಎಲ್ಲರೂ ಪ್ರಧಾನ ಪಾತ್ರ ವಹಿಸಬೇಕು.
- ಸಂವೇದನಾಶೀಲ ರಾಷ್ಟ್ರದ ನಿರ್ಮಾಣಕ್ಕೆ ಎಲ್ಲರೂ ಪಣ ತೊಡಬೇಕು. ಸಮಾನತೆ, ಎಲ್ಲರಿಗೂ ಉದ್ಯೋಗಾವಕಾಶ, ಎಲ್ಲರಿಗೂ ಶಾಂತಿ, ನೆಮ್ಮದಿ ನೆಲೆಸಿದರೆ ಮಾತ್ರವೇ ನಾವು ಭಾರತವನ್ನು ಒಂದು ಸಮೃದ್ಧ ರಾಷ್ಟ್ರವನ್ನಾಗಿಸಲು ಸಾಧ್ಯ.
- ಸರ್ಕಾರ ಹಾಗೂ ಜನಜೀವನದ ನಡುವೆ ಒಂದು ಸಮನ್ವಯತೆಯನ್ನು ಸಾಧಿಸುವ ನಿರೀಕ್ಷೆಯಿದೆ.
- ಬಡವರಿಗೆ, ದಲಿತರಿಗೆ, ಹಿಂದುಳಿದವರಿಗೆ ಇಲ್ಲಿ ನಿಶ್ಚಿಂತೆಯಿಂದ ಬದುಕುವ ಸೌಲಭ್ಯ ಕಲ್ಪಿಸಬೇಕು.
- ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ದೇಶದ ಅಭಿವೃದ್ಧಿಗಾಗಿ ಅದನ್ನು ಬಳಸಬೇಕಿದೆ.
- ಬಡವರಿಗೆ ಎಲ್ ಪಿಜಿ ಸೌಲಭ್ಯ ನೀಡಲಾಗಿಯೇ ಹಲವಾರು ಮಂದಿ ಎಲ್ ಪಿಜಿ ಸಬ್ಸಿಡಿ ನೀಡಿದರು. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು.
- ಅನುಕೂಲಸ್ಥರು ಆರ್ಥಿಕವಾಗಿ ಸಡೃಢರಲ್ಲದ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ. ಒಬ್ಬ ಅನುಕೂಲಸ್ಥ, ಒಬ್ಬ ಬಡ ವಿದ್ಯಾರ್ಥಿಗೆ ನೆರವಾದರೂ ಸಾಕು, ನಾವು ಶೀಘ್ರದಲ್ಲೇ ಇಡೀ ಭಾರತವನ್ನು ಸಂಪೂರ್ಣ ಸಾಕ್ಷರತಾ ದೇಶವನ್ನಾಗಿಸಲು ಸಾಧ್ಯ.