ಅಧಿಕಾರದ ದಾಹ: ರಾಜಕೀಯದ ಬಗ್ಗೆ ನಿತಿನ್ ಗಡ್ಕರಿ ಆತ್ಮಸಾಕ್ಷಿಯ ಮಾತು
ನಾಗಪುರ, ಜುಲೈ 26: ಸಂಘ ಪರಿವಾರ ಮತ್ತು ಬಿಜೆಪಿ ಎರಡರಲ್ಲೂ ಪ್ರಭಲರಾಗಿರುವ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಸಕ್ತ ರಾಜಕೀಯದ ಬಗ್ಗೆ ಬೇಸರದ ಮಾತನ್ನಾಡಿದ್ದಾರೆ. ಕೆಲವೊಮ್ಮೆ ಈ ರಾಜಕೀಯದದಿಂದ ಹಿಂದಕ್ಕೆ ಸರಿಯೋಣ ಎಂದೆನಿಸುತ್ತದೆ ಎಂದು ಹೇಳಿದ್ದಾರೆ.
ನಗರದಲ್ಲಿ ಸೋಮವಾರ (ಜುಲೈ 25) ಸಾಮಾಜಿಕ ಕಾರ್ಯಕರ್ತ ಗಿರೀಶ್ ಗಾಂಧಿ ಅವರಿಗೆ ಗೌರವ ಸಮರ್ಪಣೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗಡ್ಕರಿ, "ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ರಾಜಕೀಯ ತ್ಯಜಿಸುವ ಬಗ್ಗೆ ಆಲೋಚಿಸಿದ್ದೆ" ಎನ್ನುವ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
"ರಾಜಕೀಯ ಕ್ಷೇತ್ರಕ್ಕಿಂತ ಜೀವನದಲ್ಲಿ ಇನ್ನಷ್ಟು ಮಾಡುವುದಿದೆ, ರಾಜಕೀಯ ಈಗ ಸಾಮಾಜಿಕ ಬದಲಾವಣೆ ತರುವ ಅಸ್ತವಾಗಿ ಉಳಿದಿಲ್ಲ. ಅಧಿಕಾರವನ್ನೇ ಹೆಚ್ಚು ಹುಡುಕಿಕೊಂಡು ಹೋಗುವಂತಾಗಿದೆ"ಎಂದು ನಿತಿನ್ ಗಡ್ಕರಿ ಅಭಿಪ್ರಾಯ ಪಟ್ಟಿದ್ದಾರೆ.

"ರಾಜಕಾರಣಿಗಳು ಆತ್ಮಸಾಕ್ಷಿಯಾಗಿ ರಾಜಕೀಯ ಎನ್ನುವ ಪದವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಯಾಕೆಂದರೆ, ಈ ಕ್ಷೇತ್ರದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕ ಸುಧಾರಣೆಯನ್ನು ಮಾಡಬಹುದಾಗಿದೆ. ಆ ಬಗ್ಗೆ ಎಲ್ಲರೂ ಚಿಂತಿಸಬೇಕಾಗಿದೆ" ಎಂದು ನಿತಿನ್ ಗಡ್ಕರಿ ಮನವಿ ಮಾಡಿದ್ದಾರೆ.
"ಈಗ ಎಲ್ಲಾ ರಾಜಕಾರಣಿಗಳಿಗೆ ಅಧಿಕಾರ ಬೇಕಾಗಿದೆ, ಇದು ದೇಶದ, ಸಮಾಜದ ಹಿತಕ್ಕಾಗಿ ಶ್ರಮಿಸುವುದಕ್ಕಾ ಎನ್ನುವುದನ್ನು ಎಲ್ಲರೂ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ಇಂತಹ ಆತ್ಮಾವಲೋಕನ ಎಲ್ಲರಿಗೂ ಅನ್ವಯಿಸುತ್ತದೆ"ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

"ನಾನು ಪದೇಪದೇ ರಾಜಕೀಯ ತ್ಯಜಿಸಿಬಿಡಲೇ ಎಂದು ಯೋಚಿಸುತ್ತಿದ್ದೇನೆ. ಯಾವುದೇ ಮುಖಂಡರು ಒಂದು ಪಕ್ಷವನ್ನು ಬಿಟ್ಟು, ಇನ್ನೊಂದು ಪಕ್ಷಕ್ಕೆ ಬಂದರೆ ಅದು ಅಧಿಕಾರಕ್ಕಾಗಿ ಎಂದು ಸಾರ್ವಜನಿಕರು ಮಾತನಾಡುವಂತಾಗಿದೆ"ಎಂದು ನಿತಿನ್ ಗಡ್ಕರಿ ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications