ಗೋಮಾಂಸವಿದೆ ಎಂದು ಕರೆ ಮಾಡಿದ್ದ ವಿಷ್ಣು ಗುಪ್ತಾ ಬಂಧನ
ನವದೆಹಲಿ, ಅಕ್ಟೋಬರ್. 28: ನವದೆಹಲಿಯ "ಕೇರಳ ಭವನ'ದಲ್ಲಿ ಬೀಫ್ ಕರಿಯನ್ನು ಉಣಬಡಿಸಲಾಗುತ್ತಿದೆ ಎಂದು ದಿಲ್ಲಿ ಪೊಲೀಸರಿಗೆ ಕರೆ ಮಾಡಿ "ಸುಳ್ಳು ಮಾಹಿತಿ' ನೀಡಿದ್ದ ಹಿಂದೂ ಸೇನೆಯ ನಾಯಕ ವಿಷ್ಣು ಗುಪ್ತಾ ಅವರನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
30 ವರ್ಷದ ವಿಷ್ಣುಗುಪ್ತಾನ ವಿರುದ್ಧ ಸುಳ್ಳು ಮಾಹಿತಿ ನೀಡಿದ್ದು ಮತ್ತು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಕಾರಣನಾದುದಕ್ಕೆ ಐಪಿಸಿ ಸೆಕ್ಷನ್ 182 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮಂಗಳವಾರ ವಿಷ್ಣು ಗುಪ್ತಾ ನೀಡಿದ ದೂರನ್ನು ಆಧರಿಸಿ ಪೊಲೀಸರು ಕೇರಳ ಭವನದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಇದಾದ ಬಳಿಕ ಪ್ರಕರಣ ಭಾರೀ ಪ್ರಚಾರ ಪಡೆದು ವಿವಾದಕ್ಕೆ ಕಾರಣವಾಗಿತ್ತು.

'ಕೇರಳ ಹೌಸ್'ನಲ್ಲಿ ಗೋಮಾಂಸ ಉಣಬಡಿಸಲಾಗುತ್ತಿದೆ ಎಂದು ಆರೋಪಿಸಿ ವಿಷ್ಣು ಗುಪ್ತಾ ಎಂಬ ಹೆಸರಿನ ಸ್ಥಳೀಯ ಹಿಂದೂ ಸೇನಾ ಮುಖಂಡರೊಬ್ಬರು ಪೊಲೀಸರಿಗೆ ದೂರವಾಣಿ ಮೂಲಕ ದೂರು ನೀಡಿದ್ದರು. ಈ ಕ್ಯಾಂಟೀನ್ ಮೇಲೆ ದಾಳಿ ನಡೆಯುವ ಸಾಧ್ಯತೆ ಇದ್ದುದರಿಂದ ಪೊಲೀಸರು ಕೂಡಲೇ ರಕ್ಷಣೆ ನೀಡಿದ್ದರು ವಿನಃ ದಾಳಿ ಮಾಡಿರಲಿಲ್ಲ ಎಂದು ಪೊಲೀಸ್ ಕಮಿಷನರ್ ಬಿ ಎಸ್ ಬಸ್ಸಿ ತಿಳಿಸಿದ್ದರು. [ದನದ ಮಾಂಸದ ಸುತ್ತ ನಾರುತ್ತಿರುವ ರಾಜಕೀಯ ದುರ್ಮಾಂಸ]
ಈ ಬಗ್ಗೆ ಸ್ಪಷ್ಟನೆ ನೀಡಿದ್ದ ದೆಹಲಿ ಪೊಲೀಸ್ ಕಮಿಷನರ್, ಬಿ ಎಸ್ ಬಸ್ಸಿ ನಾವು ಕ್ಯಾಂಟೀನ್ ಮೇಲೆ ದಾಳಿ ಮಾಡಿಲ್ಲ. ಬದಲಾಗಿ ಅವರಿಗೆ ರಕ್ಷಣೆ ನೀಡಿದ್ದೇವೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿರುವ ದೂರಿನಲ್ಲಿ ಯಾವ ಆಧಾರವೂ ಇಲ್ಲ ಎಂದು ಹೇಳಿಕೆ ನೀಡಿದ್ದರು..[ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ?]
ನಿಜವಾಗಿ ನಡೆದದ್ದು ಏನು?
ಗೋಮಾಂಸ ಉಣಬಡಿಸಲಾಗುತ್ತದೆ ಎಂಬ ದೂರು ಬಂದ ನಂತರ 20ಕ್ಕೂ ಹೆಚ್ಚು ಪೊಲೀಸರ ತಂಡ ಕ್ಯಾಂಟೀನ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪರಿಶೀಲನೆ ವೇಳೆ ಕ್ಯಾಂಟೀನ್ನಲ್ಲಿ ಉಣಬಡಿಸುತ್ತಿರುವುದು ಗೋಮಾಂಸವಲ್ಲ, ಅದು ಕೋಣದ ಮಾಂಸ ಎನ್ನುವುದು ತಿಳಿಯಿತು. ಮೆನುವಿನಲ್ಲಿ ಬೀಫ್ ಎಂದಿದ್ದರೂ ಗ್ರಾಹಕರಿಗೆ ನೀಡುತ್ತಿರುವುದು ಕೋಣದ ಮಾಂಸ ಎಂದು ಕ್ಯಾಂಟೀನ್ ನಿರ್ವಾಹಕರು ತಿಳಿಸಿದರು. ಪೊಲೀಸರು ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟ ನಂತರ ಅದನ್ನು ಮೆನುವಿನಿಂದ ತೆಗೆದುಹಾಕಲು ನಿರ್ವಾಹಕರು ಒಪ್ಪಿಕೊಂಡರು ಎಂದು ದೆಹಲಿ ಸಹಾಯಕ ಪೊಲೀಸ್ ಆಯುಕ್ತ ಜತಿನ್ ನರ್ವಾಲ್ ತಿಳಿಸಿದ್ದರು.
ಗೋಮಾಂಸ ಖಾದ್ಯವನ್ನು ಸರ್ಕಾರಿ ಕ್ಯಾಂಟೀನ್ನಲ್ಲಿ ನೀಡುತ್ತಿರಲಿಲ್ಲ ಎಂದು ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಜಿಜಿ ಥಾಮ್ಸನ್ ಹೇಳಿದ್ದಾರೆ. ಪೊಲೀಸರು ಬರುವ ಮುನ್ನವೇ ಸಂಘಟನೆಯೊಂದರ ಕೆಲವು ಕಾರ್ಯಕರ್ತರು ಪರವಾನಗಿ ಪಡೆಯದೇ ಕ್ಯಾಂಟಿನ್ ಒಳಗೆ ಪ್ರವೇಶಿಸಿದ್ದರು. ಈ ಬಗ್ಗೆ ದೆಹಲಿ ಪೊಲೀಸರಿಗೆ ದೂರು ದಾಖಲು ಮಾಡಲಾಗಿತ್ತು.












Click it and Unblock the Notifications