Vande Bharat Express: ಬೆಂಗಳೂರು-ಎರ್ನಾಕುಲಂ ರೈಲು ಉದ್ಘಾಟನೆಗೆ ದಿನಾಂಕ ಫಿಕ್ಸ್: ಪ್ರಧಾನಿ ಚಾಲನೆ
ಬೆಂಗಳೂರು/ದೆಹಲಿ, ನವೆಂಬರ್ 07: ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಸಂಪರ್ಕಿಸುವ ಮೊದಲ ವಂದೇ ಭಾರತ್ ರೈಲು ಸೇವೆಗೆ ಉದ್ಘಾಟನೆಗೆ ದಿನಾಂಕ ಫಿಕ್ಸ್ ಆಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 8ರಂದು ಬೆಂಗಳೂರು-ಕೊಚ್ಚಿ ನಡುವಿನ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಗುರುವಾರ ಅಧಿಕೃತ ಮಾಹಿತಿ ಹೊರ ಬಿದ್ದಿದೆ.
ಪ್ರಾರಂಭಿಕ ವಿಶೇಷ ರೈಲು (06652) ಬೆಳಗ್ಗೆ 8 ಗಂಟೆಗೆ ಎರ್ನಾಕುಲಂ ಜಂಕ್ಷನ್ನಿಂದ ಹೊರಟು ಸಂಜೆ 5.50ಕ್ಕೆ ಬೆಂಗಳೂರು ಕೆಎಸ್ಆರ್ ನಿಲ್ದಾಣ ತಲುಪಲಿದೆ. ರೈಲಿನಲ್ಲಿ ಎಂಟು ಬೋಗಿಗಳು ಇರಲಿವೆ. ಈ ರೈಲು ಸೇವೆಯ ಬಗ್ಗೆ ಭಾರತೀಯ ರೈಲ್ವೆ ಇಲಾಖೆಯು ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಪ್ರಧಾನಿ ಮೋದಿಯವರು ಇದೇ ಶನಿವಾರ ನವೆಂಬರ್ 08ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ ಪಿಎಂ ಕಚೇರಿ ಮಾಹಿತಿ ನೀಡಿದೆ.

ಪ್ರಯಾಣಿಕರಿಗೆ ದೈನಂದಿನ ರೈಲು ಸೇವೆ ಸಿಗುವ ಸಾಧ್ಯತೆ ಇದೆ. ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (26651/26652) ನವೆಂಬರ್ 11ರಿಂದ ಪ್ರಾರಂಭವಾಗಲಿದೆ. ಪ್ರಸ್ತುತ ಬೆಂಗಳೂರಿನ ಕೆಲವು ಕಾರ್ಯಾಚರಣೆ ಅಡಚಣೆಗಳನ್ನು ಪರಿಹರಿಸಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಪಶ್ಚಿಮ ರೈಲ್ವೆ ಪ್ರಕಟಿಸಿದ ಪ್ರಾಥಮಿಕ ವೇಳಾಪಟ್ಟಿಯ ಪ್ರಕಾರ, ರೈಲು ಬೆಳಿಗ್ಗೆ 5.10ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 1.50ಕ್ಕೆ ಎರ್ನಾಕುಳಂ ತಲುಪಲಿದೆ. ಹಿಂತಿರುಗುವ ರೈಲು ಮಧ್ಯಾಹ್ನ 2.20ಕ್ಕೆ ಎರ್ನಾಕುಳಂನಿಂದ ಹೊರಟು ರಾತ್ರಿ 11ಕ್ಕೆ ಬೆಂಗಳೂರಿಗೆ ತಲುಪಲಿದೆ. ಪ್ರಮುಖ ನಿಲ್ದಾಣಗಳು ಕೆಆರ್ ಪುರಂ, ಸೇಲಂ, ಈರೋಡ್, ತಿರುಪ್ಪೂರು, ಕೊಯಮತ್ತೂರು, ಪಾಳಕ್ಕಾಡ್ ಮತ್ತು ತ್ರಿಶೂರ್ ಗಳಲ್ಲಿ ನಿಲುಗಡೆ ನೀಡಲಿದ್ದಾರೆ.
ರಾಜ್ಯಕ್ಕೆ 12ನೇ, ಬೆಂಗಳೂರಿಗೆ 8 ವಂದೇ ಭಾರತ್ ರೈಲು
ಈ ಮಾರ್ಗದ ಅಂತಿಮ ವೇಳಾಪಟ್ಟಿಯನ್ನು ರೈಲ್ವೆ ಬೋರ್ಡ್ ನಂತರ ಪ್ರಕಟಿಸಲಿದೆ. ಈ ರೈಲು ಕರ್ನಾಟಕದ 12ನೇ ವಂದೇ ಭಾರತ್ ಇದಾಗಿದೆ. ಬೆಂಗಳೂರಿನ ಪಾಲಿಕೆಗೆ ಇದು 8ನೇ ವಂದೇ ಭಾರತ್ ರೈಲು ದಿಆಗಿದೆ. ಇದು ಕೇರಳದ 3ನೇ ವಂದೇ ಭಾರತ್ ಹಾಗೂ ಕೇರಳ, ತಮಿಳುನಾಡು ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಮೊದಲ ರೈಲು.
ಐಟಿ ವೃತ್ತಿಪರರು, ವ್ಯಾಪಾರಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಈ ರೈಲು ಸೇವೆ ಪ್ರಯೋಜನಕಾರಿ ಆಗಲಿದೆ. ಜೊತೆಗೆ, ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಆರ್ಥಿಕತೆ ಹಾಗೂ ಪ್ರವಾಸೋದ್ಯಮ ಉತ್ತೇಜನಕ್ಕೂ ಸಹಕಾರಿ ಆಗಲಿದೆ. ಮೂರು ರಾಜ್ಯಗಳ ನಡುವೆ ಉತ್ತಮ ಸಾರಿಗೆ ಸೇತುವೆಯಾಗಲಿದೆ ಎಂದು ರೈಲ್ವೆ ಇಲಾಖೆ ಅಭಿಪ್ರಾಯಪಟ್ಟಿದೆ.












Click it and Unblock the Notifications