ಪೆಟ್ರೋಲ್ ಬೆಲೆ ಏರಿಕೆ: ಹಿಂದಿನ ಸರ್ಕಾರಗಳನ್ನು ಹೊಣೆ ಮಾಡಿದ ಪ್ರಧಾನಿ ಮೋದಿ
ನವದೆಹಲಿ, ಫೆಬ್ರವರಿ 18: ದೇಶದ ಅನೇಕ ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ಲೀಟರ್ಗೆ ನೂರು ರೂ ತಲುಪಿದೆ. ಇನ್ನು ಹಲವೆಡೆ ಶತಕದ ಅಂಚಿನಲ್ಲಿದೆ. ಕೇಂದ್ರ ಸರ್ಕಾರವು ಅಧಿಕ ಅಬಕಾರಿ ಸುಂಕ ವಿಧಿಸುವ ಮೂಲಕ ಜನಸಾಮಾನ್ಯರ ಮೇಲೆ ತೈಲ ಬೆಲೆ ಏರಿಕೆಯ ಹೊರೆ ಹೊರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಆರೋಪಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ಸರ್ಕಾರಗಳ ಹೆಗಲಿಗೆ ವರ್ಗಾಯಿಸಿದ್ದಾರೆ.
ಭಾರತದ ಇಂಧನ ಅವಲಂಬನೆಯನ್ನು ಕಡಿಮೆ ಮಾಡುವತ್ತ ಹಿಂದಿನ ಸರ್ಕಾರಗಳು ಗಮನ ಹರಿಸಿದ್ದರೆ ಮಧ್ಯಮರ್ಗಕ್ಕೆ ಈ ಹೊರೆ ಹೊತ್ತುಗೊಳ್ಳುವ ಸ್ಥಿತಿ ಬರುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ತೈಲ ಬೆಲೆ ಏರಿಕೆ ಮತ್ತು ಇಳಿಕೆಯು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯನ್ನು ಅವಲಂಬಿಸಿದೆ. ಆದರೆ ದೇಶಿ ಮಾರುಕಟ್ಟೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ತೈಲ ಬೆಲೆಯನ್ನು ನೇರವಾಗಿ ಉಲ್ಲೇಖಿಸದ ಪ್ರಧಾನಿ, 2019-20ರ ಹಣಕಾಸು ವರ್ಷದಲ್ಲಿ ತನ್ನ ಅಗತ್ಯದಲ್ಲಿ ಶೇ 85ರಷ್ಟು ತೈಲವನ್ನು ಭಾರತ ಆಮದು ಮಾಡಿಕೊಂಡಿದೆ. ಹಾಗೆಯೇ ತನಗೆ ಅಗತ್ಯವಿರುವ ಅನಿಲದಲ್ಲಿ ಸುಮಾರು ಶೇ 53ರಷ್ಟು ಅನಿಲವನ್ನು ಆಮದು ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಮೊದಲೇ ಗಮನ ಹರಿಸಿದ್ದರೆ...?
'ನಾವು ಆಮದು ಅವಲಂಬಿತರಾಗಿಯೇ ಇರಬೇಕೇ? ನಾನು ಯಾರನ್ನೂ ಟೀಕಿಸಲು ಬಯಸುವುದಿಲ್ಲ. ಆದರೆ ಈ ವಿಷಯದ ಬಗ್ಗೆ ನಾವು ಮೊದಲೇ ಗಮನ ಹರಿಸಿದ್ದರೆ, ನಮ್ಮ ಮಧ್ಯಮ ವರ್ಗವು ಈ ರೀತಿ ಹೊರೆ ಅನುಭವಿಸಬೇಕಾಗುತ್ತಿರಲಿಲ್ಲ' ತಮಿಳುನಾಡಿನಲ್ಲಿ ತೈಲ ಮತ್ತು ಅನಿಲ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಆಮದು ಅವಲಂಬನೆ ಇಳಿಕೆ
ಮಧ್ಯಮವರ್ಗದ ಜನರ ಸಂಕಷ್ಟಗಳನ್ನು ಬಗೆಹರಿಸುವಷ್ಟು ತಮ್ಮ ಸರ್ಕಾರ ಸಂವೇದನೆ ಹೊಂದಿದೆ. ಪೆಟ್ರೋಲ್ನಲ್ಲಿ ಎಥೆನಾಲ್ ಬೆರೆಸುವ ಹಂಚಿಕೆಯನ್ನು ಹೆಚ್ಚಿಸುವತ್ತ ಗಮನ ಹರಿಸಿದ್ದೇವೆ. ಹಾಗೆಯೇ ಇಂಧನ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಅಪಾಯಗಳನ್ನು ತಗ್ಗಿಸಲು ಮೂಲಗಳನ್ನು ವರ್ಗೀಕರಿಸಲು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಮರು ಬಳಕೆ ಇಂಧನಕ್ಕೆ ಆದ್ಯತೆ
ಭಾರತವು ನವೀಕರಿಸಬಹುದಾದ ಇಂಧನಗಳ ಬಳಕೆಗೆ ಮುಂದಾಗುವತ್ತ ಗಮನ ಹರಿಸಲಾಗುತ್ತಿದೆ. 2030ರ ವೇಳೆಗೆ ದೇಶದಲ್ಲಿ ಉತ್ಪಾದನೆಯಾಗುವ ಇಂಧನದಲ್ಲಿ ಶೇ 40ರಷ್ಟು ಇಂಧನಗಳು ಮರು ಬಳಕೆಗೆ ಯೋಗ್ಯವಾದ ಮಾದರಿಯಲ್ಲಿ ಇರಲಿವೆ ಎಂದಿದ್ದಾರೆ.
ಜಿಎಸ್ಟಿಗೆ ನೈಸರ್ಗಿಕ ಅನಿಲ
ಇಂಧನ ಕ್ಷೇತ್ರದಲ್ಲಿ ನೈಸರ್ಗಿಕ ಅನಿಲದ ಪಾಲುದಾರಿಕೆ ಶೇ 6.3ರಷ್ಟಿದ್ದು, ಅದನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ತರುವ ಮೂಲಕ ಶೇ 15ಕ್ಕೆ ಹೆಚ್ಚಿಸಿ, ಬಹುಬಗೆಯ ತೆರಿಗೆಗಳ ಪರಿಣಾಮಕ್ಕೆ ಒಳಗಾಗುವ ವ್ಯವಸ್ಥೆಯನ್ನು ತೆಗೆದುಹಾಕುವತ್ತ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.