ಗುಜರಾತ್ನಲ್ಲಿ ಶೈತ್ಯೀಕರಿಸಿದ ಲಸಿಕೆ ಸಾಗಾಣಿಕೆ ಘಟಕಕ್ಕೆ ಮೋದಿ ಅನುಮೋದನೆ
ನವದೆಹಲಿ, ನವೆಂಬರ್ 28: ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಸಿದ್ಧವಾಗುವ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಯ ಸಂಗ್ರಹ, ಸರಬರಾಜು ಮತ್ತು ಇತರೆ ಪ್ರಕ್ರಿಯೆಗಳಿಗೆ ಅಗತ್ಯ ತಯಾರಿಗಳು ಶುರುವಾಗುತ್ತಿವೆ. ಈ ಮಧ್ಯೆ ಗುಜರಾತ್ನಲ್ಲಿ ವಿಶೇಷ ಶೀತಲೀಕೃತ ಲಸಿಕೆ ಸಾರಿಗೆ ಘಟಕವನ್ನು ಸ್ಥಾಪಿಸಲು ಲಕ್ಸೆಂಬರ್ಗ್ನ ಪ್ರಧಾನಿ ಕ್ಸೇವಿಯರ್ ಬೆಟ್ಟೆಲ್ ಅವರ ಆಹ್ವಾನವನ್ನು ನರೇಂದ್ರ ಮೋದಿ ಸ್ವೀಕರಿಸಿದ್ದಾರೆ. ದೇಶದ ಪ್ರತಿ ಹಳ್ಳಿ ಹಳ್ಳಿಗಳಿಗೂ ಕೊನೆಯ ಹನಿ ಲಸಿಕೆಯವರೆಗೆ ತಲುಪಿಸುವುದಕ್ಕಾಗಿ ಈ ಘಟಕ ಸ್ಥಾಪನೆಗೆ ಯೋಜಿಸಲಾಗಿದೆ.
ಸೋಲಾರ್ ಲಸಿಕೆ ರೆಫ್ರಿಜರೇಟರ್ಗಳು, ಫ್ರೀಜರ್ಗಳು ಮತ್ತು ಸಾಗಣೆ ಪೆಟ್ಟಿಗೆಗಳು ಸೇರಿದಂತೆ ಲಸಿಕೆ ಶೈತ್ಯ ಸರಪಣಿಯನ್ನು ಸ್ಥಾಪಿಸುವ ಸಲುವಾಗಿ ಲಕ್ಸೆಂಬರ್ಗ್ನ ಬಿ ಮೆಡಿಕಲ್ ಸಿಸ್ಟಮ್ ಸಂಸ್ಥೆಯು ಮುಂದಿನ ವರ್ಷ ಉನ್ನತ ಮಟ್ಟದ ಸಮಿತಿಯೊಂದನ್ನು ಗುಜರಾತ್ಗೆ ಕಳುಹಿಸುತ್ತಿದೆ. ಪೂರ್ಣ ಪ್ರಮಾಣದ ಘಟಕವನ್ನು ನಿರ್ಮಿಸಲು ಸುಮಾರು ಎರಡು ವರ್ಷಗಳು ಬೇಕಾಗಲಿದೆ. ಹೀಗಾಗಿ ಕಂಪೆನಿಯು ಆರಂಭದಲ್ಲಿ ರೆಫ್ರಿಜರೇಷನ್ ಪೆಟ್ಟಿಗೆಗಳನ್ನು ಲಕ್ಸೆಂಬರ್ಗ್ನಿಂದ ಪೂರೈಕೆ ಮಾಡಲಿದೆ. ಆತ್ಮನಿರ್ಭರ ಭಾರತ ಯೋಜನೆಯಡಿ ಆಂತರಿಕ ಮಾರುಕಟ್ಟೆಯಲ್ಲಿನ ಅತ್ಯುತ್ತಮ ಸಂಪನ್ಮೂಲಗಳನ್ನು ಬಳಕೆ ಮಾಡಲಿದೆ.
ಶೀಥಲೀಕರಣ ವ್ಯವಸ್ಥೆ ಹೊಂದಿರುವ ಪೆಟ್ಟಿಗೆಗಳು ನಾಲ್ಕು ಡಿಗ್ರಿ ಸೆಲ್ಸಿಯಸ್ನಿಂದ -20 ಡಿಗ್ರಿ ಸೆಲ್ಸಿಯಸ್ವರೆಗೂ ಲಸಿಕೆಯನ್ನು ಪೂರೈಸಬಲ್ಲವು. ಲಕ್ಸೆಂಬರ್ಗ್ನ ಈ ಕಂಪೆನಿ ಶೂನ್ಯದಿಂದ ಕೆಳಗಿನ 80 ಡಿಗ್ರಿ ಸೆಲ್ಸಿಯಸ್ನಲ್ಲಿ ಲಸಿಕೆ ಸಾಗಣೆ ಮಾಡುವ ತಂತ್ರಜ್ಞಾನ ಹೊಂದಿದೆ.

ಲಕ್ಸೆಂಬರ್ಗ್ನ ಪ್ರಸ್ತಾಪವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಖುದ್ದು ಪರಿಶೀಲಿಸುತ್ತಿದ್ದಾರೆ. ಐರೋಪ್ಯ ಒಕ್ಕೂಟದಲ್ಲಿನ ಭಾರತದ ರಾಯಭಾರಿ ಸಂತೋಷ್ ಝಾ ಅವರು ನವೆಂಬರ್ 20ರಂದು ಕಂಪೆನಿಯ ಸಿಇಒ ಮತ್ತು ಡೆಪ್ಯುಟಿ ಸಿಇಒ ಗಳ ಜತೆಗೆ ಆನ್ಲೈನ್ ಮೂಲಕ ನಡೆದ ಸಭೆಯಲ್ಲಿ ಗುಜರಾತ್ನ ಸಿದ್ಧತೆಗಳನ್ನು ಅಂತಿಮಗೊಳಿಸಿದ್ದರು.
ನವೆಂಬರ್ 19ರಂದು ನಡೆದ ಮೊದಲ ದ್ವಿಪಕ್ಷೀಯ ಸಮ್ಮೇಳನದಲ್ಲಿ ಬೆಟ್ಟಲ್ ಅವರು ಮೋದಿ ಅವರಿಗೆ ಈ ಘಟಕದ ಕುರಿತು ಪ್ರಸ್ತಾಪ ಸಲ್ಲಿಸಿದ್ದರು.












Click it and Unblock the Notifications