ಚುನಾವಣೆ ಎದುರಿಸಲಿರುವ ತ್ರಿಪುರಾ, ಮೇಘಾಲಯಕ್ಕೆ ಪ್ರಧಾನಿ ಮೋದಿ ಭೇಟಿ
ಗುವಾಹಟಿ, ಡಿ. 18: ಇನ್ನೆರಡು ತಿಂಗಳುಗಳಲ್ಲಿ ಚುನಾವಣೆ ಎದುರಿಸಲಿರುವ ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಭೇಟಿ ನೀಡಲಿದ್ದಾರೆ.
ಈ ಭಾಗದಲ್ಲಿ 6,800 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ.
ಭಾನುವಾರ ಉದ್ಘಾಟನೆಯಾಲಿರುವ ಈ 6,800 ಕೋಟಿ ರೂಪಾಯಿಯ ಯೋಜನೆಗಳಲ್ಲಿ ವಸತಿ, ರಸ್ತೆ, ಕೃಷಿ, ದೂರಸಂಪರ್ಕ, ಐಟಿ, ಪ್ರವಾಸೋದ್ಯಮ ಮತ್ತು ಆತಿಥ್ಯ ಸೇರಿದಂತೆ ಹಲವು ಕ್ಷೇತ್ರಗಳು ಒಳಗೊಳ್ಳಲಿವೆ.

ಪ್ರಧಾನಿ ಮೋದಿ ಈಶಾನ್ಯ ಕೌನ್ಸಿಲ್ನ ಸುವರ್ಣ ಮಹೋತ್ಸವ ಆಚರಣೆ ಮತ್ತು ಶಿಲ್ಲಾಂಗ್ನಲ್ಲಿ ನಡೆಯಲಿರುವ ಅದರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಗರ್ತಲಾದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 'ಗೃಹ ಪ್ರವೇಶ' ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.
ಇತ್ತೀಚೆಗಷ್ಟೇ ಗುಜರಾತ್ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿರುವ ಬಿಜೆಪಿ ಈಗ ಚುನಾವಣೆ ಎದುರಿಸಿರುವ ತ್ರಿಪುರಾ ಮತ್ತು ಮೇಘಾಲಯದತ್ತ ಗಮನ ಹರಿಸುತ್ತಿದೆ. ತ್ರಿಪುರಾ ಮತ್ತು ಮೇಘಾಲಯ ಎರಡರಲ್ಲೂ ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಇದು ಬಿಜೆಪಿಗೆ ನಿರ್ಣಾಯಕ ಚುನಾವಣೆ ಎಂದು ಪರಿಗಣಿಸಲಾಗುತ್ತಿದೆ.
ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಲ್ಲಿ, ಸಿಕ್ಕಿಂ ಸೇರಿದಂತೆ 8 ಈಶಾನ್ಯ ರಾಜ್ಯಗಳ ಪ್ರಾದೇಶಿಕ ಯೋಜನಾ ಸಂಸ್ಥೆಯಾದ ಈಶಾನ್ಯ ಕೌನ್ಸಿಲ್ (ಎನ್ಇಸಿ) ಯ ಸುವರ್ಣ ಮಹೋತ್ಸವ ಆಚರಣೆಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ವಹಿಸಲಿದ್ದಾರೆ.

ಎಲ್ಲಾ ಎಂಟು ಈಶಾನ್ಯ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.
ಮೇಘಾಲಯದಿಂದ ತ್ರಿಪುರಾಕ್ಕೆ ತೆರಳಲಿರುವ ಪ್ರಧಾನಿ, ಅಗರ್ತಲಾದ ಸ್ವಾಮಿ ವಿವೇಕಾನಂದ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿಯೂ ಕೆಲವು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ .ಜೊತೆಗೆ ಪ್ರಧಾನಿ ಮೋದಿ ವಿವಿಧ ಕಲ್ಯಾಣ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಬಳಿಕ ಅಲ್ಲಿನ ಶಾಸಕರು ಮತ್ತು ಸಚಿವರೊಂದಿಗೆ ಸಂವಾದ ನಡೆಸಲಿದ್ದಾರೆ. ಇದಾದ ಬಳಿಕ ತ್ರಿಪುರಾ ಬಿಜೆಪಿ ಕೋರ್ ಕಮಿಟಿ ಸಭೆಯನ್ನೂ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.












Click it and Unblock the Notifications