India & Sri Lanka: ಶ್ರೀಲಂಕಾ ಅಧ್ಯಕ್ಷರ ಜೊತೆ ಪ್ರಧಾನಿ ಚರ್ಚೆ
ನವದೆಹಲಿ: ಅಕ್ಕಪಕ್ಕದ ದೇಶಗಳ ಜೊತೆ ಭಾರತ ಮೊದಲಿನಿಂದ ಉತ್ತಮ ಸಂಬಂಧವನ್ನು ಹೊಂದಿದೆ. ಆದರೆ ಇದನ್ನು ಕೆಡಿಸಲು ಶತ್ರು ರಾಷ್ಟ್ರಗಳು ಆಗಾಗ ಪ್ರಯತ್ನ ಮಾಡುತ್ತಿವೆ ಎಂಬ ಆರೋಪವಿದೆ. ಈ ಕಾರಣಕ್ಕೆ ಭಾರತ ಇತ್ತೀಚೆಗೆ ತನ್ನ ನೆರೆಹೊರೆ ರಾಷ್ಟ್ರಗಳ ಜೊತೆ ಸಂಬಂಧ ವೃದ್ಧಿಗೆ ಕ್ರಮ ಕೈಗೊಳ್ಳುತ್ತಿದ್ದು, ಇದೀಗ ಶ್ರೀಲಂಕಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಜೊತೆ ಚರ್ಚಿಸಿದ್ದಾರೆ.
ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆಗೆ ಮುನ್ನ ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. 'ಬರೋಬ್ಬರಿ 75 ವರ್ಷ ಇತಿಹಾಸವಿರುವ ಈ ರಾಜತಾಂತ್ರಿಕ ಸಂಬಂಧ ಮುಂದುವರಿಸಲು ಉಭಯ ದೇಶಗಳಿಗೆ ಇದು ಸೂಕ್ತ ಸಮಯ' ಎಂದು ವಿದೇಶಾಂಗ ಸಚಿವಾಲಯದ ವಕ್ತಾರರಾದ ಆರಿಂದಮ್ ಬಾಗ್ಚಿ ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಿದ್ದು ಚರ್ಚೆ ನಡೆಸಿದ್ದಾರೆ. ರಾಜಧಾನಿ ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ಇಬ್ಬರೂ ನಾಯಕರು ಎರಡೂ ದೇಶಗಳ ಹಿತಾಸಕ್ತಿಯ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಭೇಟಿಯ ವಿಶೇಷತೆ ಏನು?
ಅಂದಹಾಗೆ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಎರಡು ದಿನಗಳ ಭೇಟಿಗಾಗಿ ನಿನ್ನೆಯೇ ಭಾರತಕ್ಕೆ ಬಂದಿದ್ದರು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಡೊಭಾಲ್ ಜೊತೆಗೆ ಈಗಾಗಲೇ ಮಹತ್ವದ ಮಾತುಕತೆ ನಡೆಸಿದ್ದಾರೆ ರಾನಿಲ್ ವಿಕ್ರಮಸಿಂಘೆ. ಈ ನಡುವೆ ಪ್ರಧಾನಿ ಮೋದಿ ಅವರನ್ನೂ ಭೇಟಿ ಮಾಡಿದ್ದಾರೆ. ಶ್ರೀಲಂಕಾ ಕಳೆದ ವರ್ಷ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾಗೆ ಭಾರತ ಸಾಕಷ್ಟು ಸಹಾಯವನ್ನ ಮಾಡಿದೆ. ಭಾರತ ಸುಮಾರು ₹32 ಸಾವಿರ ಕೋಟಿ ರೂಪಾಯಿ ನೆರವನ್ನ ನೀಡಿದೆ. ಹೀಗೆ ಈ ಸಹಾಯದ ಬಳಿಕ ಲಂಕಾ ಅಧ್ಯಕ್ಷರು ಭಾರತಕ್ಕೆ ಕೈಗೊಂಡ ಮೊದಲ ಭೇಟಿ ಇದಾಗಿದೆ.
#WATCH | Delhi: Prime Minister Narendra Modi holds a meeting with Ranil Wickremesinghe, President of Sri Lanka pic.twitter.com/g1qubFJGnO
— ANI (@ANI) July 21, 2023
ಭಾರತೀಯ ವಾಯುಪಡೆ ಮುಖ್ಯಸ್ಥರ ಭೇಟಿ
ಇದೇ ವರ್ಷದ ಮೇ ತಿಂಗಳಲ್ಲಿ, ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅವರು ಶ್ರೀಲಂಕಾಗೆ ಭೇಟಿ ನೀಡಿದ್ದರು. ಆಗ ಶ್ರೀಲಂಕಾದ ಅಧ್ಯಕ್ಷರಾದ ರಾನಿಲ್ ವಿಕ್ರಮಸಿಂಘೆ ಸೇರಿ ಪ್ರಧಾನಿ ದಿನೇಶ್ ಗುಣವರ್ಧನೆ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ವೇಳೆ ಹಲವು ವಿಚಾರ ಪ್ರಸ್ತಾಪಿಸಲಾಗಿತ್ತು. ಶ್ರೀಲಂಕಾದ ಏರ್ ಮಾರ್ಷಲ್ ಎಸ್.ಕೆ. ಪತಿರಾಣ ಆಹ್ವಾನದ ಹಿನ್ನೆಲೆ ಚೌಧರಿ ಈ ಪ್ರವಾಸ ಕೈಗೊಂಡಿದ್ದರು. ಇದೇ ಭೇಟಿ ಸಂದರ್ಭದಲ್ಲಿ ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದ ದ್ವಿಪಕ್ಷೀಯ ಸಹಕಾರದ ಬಗ್ಗೆ ಮಹತ್ವದ ಚರ್ಚೆ ನಡೆದಿತ್ತು. 2 ದೇಶಗಳು ರಕ್ಷಣಾ ವಿಷಯದಲ್ಲಿ ಪರಸ್ಪರ ಬದ್ಧತೆ ಕಾಯ್ದುಕೊಳ್ಳುವ ಬಗ್ಗೆ ಗಂಭೀರ ಮಾತುಕತೆ ನಡೆಸಲಾಗಿತ್ತು. ಇದೀಗ ಶ್ರೀಲಂಕಾ ಅಧ್ಯಕ್ಷರೇ ಭಾರತಕ್ಕೆ ಬಂದಿದ್ದಾರೆ.

ಒಟ್ನಲ್ಲಿ ಭಾರತ ಹಾಗೂ ಶ್ರೀಲಂಕಾ ಸಂಬಂಧ ಮತ್ತಷ್ಟು ವೃದ್ಧಿಸುತ್ತಿದೆ. ಹೀಗೆ ಸಂಬಂಧ ವೃದ್ಧಿಗೆ ಭಾರತ ಕೂಡ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮುಂದೆ ಇದು ಭಾರತ & ಶ್ರೀಲಂಕಾ ಅಭಿವೃದ್ಧಿಗೆ ಪೂರಕವಾಗುವ ಜೊತೆಗೆ, ಗಡಿ ಭದ್ರತೆ ವಿಚಾರದಲ್ಲೂ ಮಹತ್ವದ ಬಲ ನೀಡಲಿದೆ. ಹೀಗಾಗಿಯೇ ಆರ್ಥಿಕ ಸಂಕಷ್ಟದಲ್ಲಿ ಪರದಾಡುತ್ತಿರುವ ಲಂಕಾಗೆ ನೆರವಿನ ಜೊತೆ ಆತ್ಮಸ್ಥೈರ್ಯ ತುಂಬಲಾಗುತ್ತಿದೆ. ಅಂತಾರಾಷ್ಟ್ರೀಯ ಪರಿಸ್ಥಿತಿಗಳನ್ನು ಗಮನಿಸಿದರೆ ಈಗಿನ ಈ ಬೆಳವಣಿಗೆಗಳು ಲಂಕಾ ಜೊತೆಗೆ ಭಾರತದ ಸಂಬಂಧ ವೃದ್ಧಿಗೆ ಪೂರಕವಾಗಿದೆ.












Click it and Unblock the Notifications