'ಭಾರತದ ವ್ಯಾಗ್ನರ್ ಗ್ರೂಪ್'ನಿಂದ ಬಿಜೆಪಿ ಪತನ: ರಷ್ಯಾ ಅಂತರ್ಯುದ್ದಕ್ಕೆ ಲಿಂಕ್ ಮಾಡಿದ ಉದ್ಧವ್ ಠಾಕ್ರೆ
ಮುಂಬೈ, ಜೂನ್ 26: ರಷ್ಯಾದಲ್ಲಿನ ವ್ಯಾಗ್ನರ್ ಗ್ರೂಪ್ ಬಂಡಾಯವು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಧಿಕಾರಕ್ಕೆ ಕುತ್ತು ತಂದಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆಯನ್ನು ಭಾರತದ ರಾಜಕೀಯ ಪರಿಸ್ಥಿತಿಗೆ ಲಿಂಕ್ ಮಾಡಿರುವ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ವಿರುದ್ಧ ಒಂದಾಗಿರುವ ವಿರೋಧ ಪಕ್ಷಗಳ ಒಕ್ಕೂಟವನ್ನು 'ಭಾರತದ ವ್ಯಾಗ್ನರ್ ಗುಂಪು' ಎಂದು ಉದ್ದವ್ ಠಾಕ್ರೆ ಪ್ರತಿಪಾದಿಸಿದ್ದಾರೆ. ಈ ಗುಂಪು ಅಹಿಂಸೆಯ ಮಾರ್ಗವನ್ನು ಬಳಸಿಕೊಂಡು ಮತಪೆಟ್ಟಿಗೆಯ ಮೂಲಕ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೊಗೆಯಲಿದೆ ಎಂದು ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಸೋಮವಾರ ಪ್ರತಿಪಾದಿಸಿದೆ.

ಕಳೆದ ಶನಿವಾರ ನಾಟಕೀಯ ಬೆಳವಣಿಗೆಯಲ್ಲಿ, ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಸಶಸ್ತ್ರ ದಂಗೆಗೆ ಕರೆ ನೀಡಿದ್ದಾರೆ. ರಷ್ಯಾದ ದಕ್ಷಿಣ ನಗರವಾದ ರೋಸ್ಟೊವ್-ಆನ್-ಡಾನ್ ಅವರ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ. ಅವರ ಪಡೆಗಳು ಮಿಲಿಟರಿ ಸೌಲಭ್ಯಗಳನ್ನು ಹೊಂದಿವೆ ಎಂದು ತಿಳಿಸಿದ್ದಾರೆ. ಇದು ಮಾಸ್ಕೋದಲ್ಲಿನ ವ್ಲಾಡಿಮಿರ್ ಪುಟಿನ್ ಅವರಿಗೆ ಬೆದರಿಕೆಯೊಡ್ಡುವ ಬೆಳವಣಿಗೆ ಆಗಿದೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದಂಗೆಯನ್ನು ದ್ರೋಹ ಮತ್ತು ದೇಶದ್ರೋಹದ ಕೃತ್ಯ ಎಂದು ಕರೆದ್ದಾರೆ. ಬೆಲರೂಸಿಯನ್ ಅಧ್ಯಕ್ಷರು ನಡೆಸಿದ ಮಾತುಕತೆಗಳ ನಂತರ, ಶುರುವಾಗಬೇಕಿದ್ದ ಅಂತರ್ಯದ್ಧ ಸ್ಪಲ್ಪ ತಣ್ಣಗಾಗಿದೆ ಎಂದು ಹೇಳಲಾಗುತ್ತಿದೆ. ಆದರೂ, ಪರಿಸ್ಥಿತಿ ಇನ್ನೂ ಹತೋಟೆಗೆ ಬಂದಿಲ್ಲವೆಂಬ ಮಾತುಗಳು ಕೇಳಿಬಂದಿವೆ.
ಶಿವಸೇನಾ ಮುಖವಾಣಿ 'ಸಾಮ್ನಾ' ದ ಸಂಪಾದಕೀಯದಲ್ಲಿ ವ್ಯಾಗ್ನರ್ ಗುಂಪಿನ ಬಂಡಾಯದ ಬಗ್ಗೆ ಬರೆಯಲಾಗಿದೆ. 'ರಷ್ಯಾದ ಅಧ್ಯಕ್ಷ ಪುಟಿನ್ ವಿರುದ್ಧದ ದಂಗೆ' ಹಾಗೂ ಕಳೆದ ವಾರ ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆಯ ನಡುವೆ ಸಮೀಕರಿಸಿ ಬರೆಯಲಾಗಿದೆ.

ದೇಶದ ಹನ್ನೆರಡಕ್ಕೂ ಹೆಚ್ಚು ವಿರೋಧ ಪಕ್ಷಗಳ 32 ಕ್ಕೂ ಹೆಚ್ಚು ನಾಯಕರು ಶುಕ್ರವಾರ ಸಭೆ ಸೇರಿದ್ದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆಯೋಜಿಸಿದ್ದ ನಿರ್ಣಾಯಕ ಸಭೆಯನ್ನು ನಡೆಸಿದರು. 2024 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಒಗ್ಗಟ್ಟಿನಿಂದ ಎದುರಿಸಲು ನಿರ್ಧರಿಸಲಾಯಿತು.
ಭಾರತದ ವ್ಯಾಗ್ನರ್ ಗುಂಪು ಸರ್ವಾಧಿಕಾರಕ್ಕೆ ಸವಾಲು ಒಡ್ಡಬಹುದು ಎಂದು ಸಾಮ್ನಾ ಸಂಪಾದಕೀಯ ಹೇಳಿದೆ.
'ಅದು ಪ್ರಧಾನಿ ಮೋದಿಯಾಗಿರಲಿ ಅಥವಾ ಪುಟಿನ್ ಆಗಿರಲಿ, ಅವರು ಬಂಡಾಯವನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಸರ್ಕಾರವನ್ನು ಅಹಿಂಸಾತ್ಮಕವಾಗಿ ಕೆಳಗಿಳಿಸಲಾಗುತ್ತದೆ. ಆ ಮಾರ್ಗವು ಮತಪೆಟ್ಟಿಗೆಯ ಮೂಲಕ ಇರುತ್ತದೆ' ಎಂದು ಅದು ಹೇಳಿಕೊಂಡಿದೆ.
ಪುಟಿನ್ ಅವರಂತೆ ಪ್ರಧಾನಿ ಮೋದಿ ಹೋಗಬೇಕು. ಆದರೆ ಪ್ರಜಾಪ್ರಭುತ್ವದ ರೀತಿಯಲ್ಲಿ ಹೋಗಬೇಕು ಎಂದು ಅದು ಹೇಳಿದೆ.

ಕಳೆದ ವಾರ ಬಿಹಾರದ ರಾಜಧಾನಿಯಲ್ಲಿ ನಡೆದ ವಿರೋಧ ಪಕ್ಷಗಳ ಸಮಾವೇಶವನ್ನು ಉಲ್ಲೇಖಿಸಿ 'ಭಾರತದ ವ್ಯಾಗ್ನರ್ ಗುಂಪು ಪ್ರಜಾಪ್ರಭುತ್ವದ ರಕ್ಷಕನಾಗಿ ಪಾಟ್ನಾದಲ್ಲಿ ಒಟ್ಟುಗೂಡಿದೆ' ಎಂದು ಸಾಮ್ನಾದಲ್ಲಿ ಬರೆದುಕೊಂಡಿದೆ.
ವಿದ್ಯುನ್ಮಾನ ಮತಯಂತ್ರಗಳು (ಇವಿಎಂಗಳು) 2024 ರಲ್ಲಿ ಫಲಿತಾಂಶಗಳನ್ನು ನಿರ್ಧರಿಸುವುದಿಲ್ಲ. ಆದರೆ ಜನರು ನಿರ್ಧರಿಸುತ್ತಾರೆ ಎಂದು ಅದು ಹೇಳಿದೆ.
ಒಂದು ವೇಳೆ ಇವಿಎಂ ಹಗರಣ ನಡೆದರೆ ದೇಶದಲ್ಲಿ ಮಣಿಪುರದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಸರ್ಕಾರದ ವಿರುದ್ಧ ಜನರಲ್ಲಿ ಆಕ್ರೋಶವಿದೆ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.
ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಸುಮಾರು 120 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 3,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೈಟೆಯಿ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರದಲ್ಲಿ ಅನೇಕ ಜನರನ್ನು ನಿರಾಶ್ರಿತರನ್ನಾಗಿ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯ ಮನೆಗಳನ್ನು ಸುಟ್ಟುಹಾಕಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಂತಹ ಅನೇಕ ಜನರನ್ನು ಬಿಜೆಪಿ ತನ್ನ ರಕ್ಷಕನಂತೆ ಇಟ್ಟುಕೊಂಡಿದೆ. ನಾಳೆ ಅದೇ ಜನರು ಬಿಜೆಪಿಯನ್ನು ಇರಿಯುತ್ತಾರೆ ಎಂದು ಸಂಪಾದಕೀಯ ಹೇಳಿದೆ.
ಶಿಂಧೆ ಅವರು ಕಳೆದ ವರ್ಷ ಜೂನ್ನಲ್ಲಿ ಶಿವಸೇನೆ ನಾಯಕತ್ವದ ವಿರುದ್ಧ ಬಂಡಾಯವೆದ್ದರು. ಇದು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನಕ್ಕೆ ಕಾರಣವಾಯಿತು. ನಂತರ ಬಿಜೆಪಿ ಬೆಂಬಲದೊಂದಿಗೆ ಶಿಂಧೆ ಮುಖ್ಯಮಂತ್ರಿಯಾದರು.












Click it and Unblock the Notifications