ಮೋದಿ ದಕ್ಷಿಣ ತೀರ್ಥಯಾತ್ರೆ: ಬಿಜೆಪಿ ಗೆಲ್ಲದಿದ್ದರೆ ಏನಂತೆ ನೀವೂ ನಮ್ಮವರೇ
ಅಭೂತಪೂರ್ವ ಬಹುಮತದೊಂದಿಗೆ ಎರಡನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾಗಿದ್ದಾರೆ. ಕೆಲವು ರಾಜ್ಯಗಳಲ್ಲಿ ನಿರೀಕ್ಷೆ ಮಾಡದಷ್ಟು ಸೀಟನ್ನು ಬಿಜೆಪಿ ಗೆದ್ದಿದ್ದರೆ, ಕೆಲವೊಂದು ರಾಜ್ಯಗಳಲ್ಲಿ ಬಿಜೆಪಿ ಲೆಕ್ಕಾಚಾರ ವರ್ಕೌಟ್ ಆಗಿಲ್ಲ.
ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸದ ನಂತರ, ಮೋದಿ, ದಕ್ಷಿಣ ಭಾರತದ ಎರಡು ಪುರಾಣ ಪ್ರಸಿದ್ದ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ, ತುಲಾಭಾರನೂ ಮಾಡಿಸಿಕೊಂಡಿದ್ದಾರೆ.
ಕೇರಳದ ಗುರುವಾಯೂರು ಕೃಷ್ಣ ದೇವಸ್ಥಾನ ಮತ್ತು ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ವಾರಣಾಸಿ ಹೇಗೆ ನನ್ನ ಕ್ಷೇತ್ರವೋ, ಕೇರಳ ಮತ್ತು ಆಂಧ್ರ ಪ್ರದೇಶವೂ ನನಗೆ ವಾರಣಾಸಿಯಂತೆ ಎಂದು ಮೋದಿ ಹೇಳಿದ್ದಾರೆ.
ತಿರುಪತಿ ಮತ್ತು ಗುರುವಾಯೂರು ದೇವಾಲಯವನ್ನೇ ಆಯ್ಕೆ ಮಾಡಿಕೊಂಡಿರುವುದರ ಹಿಂದೆ, ಹಲವು ರಾಜಕೀಯ ಲೆಕ್ಕಾಚಾರವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದೇಶದ ಎಲ್ಲಾ ರಾಜ್ಯವೂ ನನಗೆ ಒಂದೇ ಎನ್ನುವ ಸಂದೇಶವನ್ನು ಸಾರಲು, ಮೋದಿ ಈ ದೇವಾಲಯಗಳಿಗೆ ಭೇಟಿ ನೀಡಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ.

ಗುರುವಾಯೂರು ದೇವಾಲಯಕ್ಕೆ ಮೋದಿ ಭೇಟಿ
ಗುರುವಾಯೂರು ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾತನಾಡುತ್ತಿದ್ದ ಮೋದಿ, ಪ್ರಜಾಪ್ರಭುತ್ವದ ಹಬ್ಬದಲ್ಲಿ (ಚುನಾವಣೆ) ನೀವು ಭಾಗವಹಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಕೇರಳದಲ್ಲಿ ನಮ್ಮ ಪಕ್ಷದ ಯಾವ ಅಭ್ಯರ್ಥಿಯೂ ಜಯಗಳಿಸದಿದ್ದರೂ, ಇಲ್ಲಿನ ಎಲ್ಲಾ ಕ್ಷೇತ್ರವು ನನಗೆ ವಾರಣಾಸಿ ಇದ್ದಂತೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಮೋದಿ, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆಂದು ರಾಹುಲ್ ಟೀಕೆಗೆ ಮೋದಿಯ ತಿರುಗೇಟು ಇದು ಎಂದು ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡುತ್ತಿದ್ದಾರೆ.

ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ, ಮೋದಿ ಭೇಟಿಯ ಹಿಂದಿನ ಉದ್ದೇಶ
ಇನ್ನೆರಡು ವರ್ಷಗಳಲ್ಲಿ ಕೇರಳದಲ್ಲಿ ಚುನಾವಣೆ ನಡೆಯಲಿದೆ. ಶಬರಿಮಲೆ ವಿವಾದದ ನಂತರ, ಬಿಜೆಪಿಯ ಜನಪ್ರಿಯತೆ ಇಲ್ಲಿ ಹೆಚ್ಚುತ್ತಿದ್ದರೂ, ಅದು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೀಟಾಗಿ ಪರಿವರ್ತನೆಗೊಂಡಿರಲಿಲ್ಲ. ಪತ್ತನಂತಿಟ್ಟ, ತಿರುವನಂತಪುರಂ, ತ್ರಿಶೂರು, ಕಾಸರಗೋಡು, ಈ ನಾಲ್ಕು ಕ್ಷೇತ್ರಗಳಲ್ಲಿ ಎಲ್ಲಾದರೂ ಅಕೌಂಟ್ ಓಪನ್ ಮಾಡಬಹುದು ಎನ್ನುವ ಬಿಜೆಪಿ ಲೆಕ್ಕಾಚಾರ ಉಲ್ಟಾ ಹೊಡೆದಿತ್ತು. ಗುರುವಾಯೂರು ಭೇಟಿಯ ಜೊತೆಗೆ, ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ, ಮೋದಿ ಭೇಟಿಯ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತಿದೆ.

ಮೋದಿಗೆ ತುಂಬಾ ಆಪ್ತರಂತೆ ಕಾಣುವ ಆಂಧ್ರ ಮುಖ್ಯಮಂತ್ರಿ ವೈ ಎಸ್ ಜಗನ್
ಇನ್ನು ಆಂಧ್ರಪ್ರದೇಶದಲ್ಲೂ ಬಿಜೆಪಿ ಖಾತೆ ತೆರೆಯಲು ವಿಫಲವಾಗಿದೆ. ಮೋದಿ ತಿರುಪತಿ ದೇವಾಲಯ ಭೇಟಿಯ ವೇಳೆ, ಅವರಿಗೆ ತುಂಬಾ ಆಪ್ತರಂತೆ ಕಾಣುವ ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿ ವೈ ಎಸ್ ಜಗನ್ ಕೂಡಾ ಇದ್ದರು. ಆಂಧ್ರಪ್ರದೇಶದ ಅಭಿವೃದ್ದಿಗೆ ಸಾಕಷ್ಟು ದಾರಿಗಳಿವೆ. ಕೇಂದ್ರದಿಂದ ಎಲ್ಲಾ ರೀತಿಯ ಬೆಂಬಲ ನಿಮಗೆ ಸಿಗಲಿದೆ ಎಂದು ಜಗನ್ ಗೆ ಮೋದಿ ಹೇಳಿದ್ದಾರೆ. ರಾಜ್ಯದ 25 ಲೋಕಸಭಾ ಕ್ಷೇತ್ರಗಳ ಪೈಕಿ 22ಕ್ಷೇತ್ರಗಳನ್ನು ವೈಎಸ್ಆರ್ ಕಾಂಗ್ರೆಸ್ ಗೆದ್ದಿತ್ತು.

ಕೇರಳ, ಆಂಧ್ರದಲ್ಲಿ ಖಾತೆ ತೆರೆಯದ ಬಿಜೆಪಿ
ಕೇರಳದ ಅಟ್ಟಿಂಗಲ್ ಶೇ. 24.69, ಕೋಝಿಕೋಡ್ ಶೇ. 14.98, ಪಾಲಕ್ಕಾಡ್ 21.26, ಪತ್ತನಂತಿಟ್ಟ ಶೇ. 28.97, ತಿರುವನಂತಪುರಂ ಶೇ. 31.3, ತ್ರಿಶೂರು ಶೇ. 28.2 ಮತಗಳನ್ನು ಬಿಜೆಪಿ ಪಡೆದಿತ್ತು. ಶಬರಿಮಲೆ ವಿವಾದ, ಬಿಜೆಪಿ - ಕಮ್ಯೂನಿಸ್ಟ್ ಕಾರ್ಯಕರ್ತರ ಕಗ್ಗೊಲೆ ಮುಂತಾದ ವಿಚಾರ ಮುನ್ನಲೆಗೆ ಬರಬಹುದು ಎನ್ನುವ ಬಿಜೆಪಿ ಲೆಕ್ಕಾಚಾರ ಇಲ್ಲಿ ನಡೆದಿಲ್ಲ. ಇನ್ನು, ಆಂಧ್ರಪದೇಶದಲ್ಲೂ ಬಿಜೆಪಿಯದ್ದು ಇದೇ ಪರಿಸ್ಥಿತಿ.

ನಾವೆಂದೂ ನಿಮ್ಮವರೇ, ನೀವೂ ನಮ್ಮವರೇ. ದೇಶದ ಅಭಿವೃದ್ದಿಗಾಗಿ ಒಟ್ಟಾಗಿ ಕೆಲಸ ಮಾಡೋಣ
ಬಿಜೆಪಿ, ಆಂಧ್ರ ಮತ್ತು ಕೇರಳದಲ್ಲಿ ಖಾತೆ ತೆರೆಯದಿದ್ದರೂ ಮೋದಿಯ ಭೇಟಿ, ಎರಡೂ ರಾಜ್ಯಗಳಿಗೆ ಸಂದೇಶ ರವಾನಿಸಿದಂತಿದೆ. ನೀವು ಬಿಜೆಪಿಗೆ ಮತ ಹಾಕದಿದ್ದರೂ, ನಾವೆಂದೂ ನಿಮ್ಮವರೇ, ನೀವೂ ನಮ್ಮವರೇ. ದೇಶದ ಅಭಿವೃದ್ದಿಗಾಗಿ ಒಟ್ಟಾಗಿ ಕೆಲಸ ಮಾಡೋಣ ಎನ್ನುವ ಮಾತನ್ನು ಮೋದಿ ಹೇಳಿದ್ದಾರೆ. ಮೋದಿಯ ಈ ಭೇಟಿ ಮುಂದಿನ ದಿನಗಳಲ್ಲಿ ಯಾವರೀತಿ ಕೆಲಸ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications