ಪುಟ್ಟ ಕಂಗಳ ಬಾಲೆ, ತಲೆ ಬಾಗಿದ ಪ್ರಧಾನಿ, ಕಣ್ಣೀರು ಜಾರಿ....
ಆ ಮಗುವಿಗೆ ಅಚ್ಚರಿಯೋ ಗಾಬರಿಯೋ ತಿಳಿಯದಷ್ಟು ಸ್ವಚ್ಛ ಕಣ್ಣುಗಳು. ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಸೌಲಭ್ಯ ವಿತರಿಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ. ಅ ಮಗುವಿನ ಕಣ್ಣಲ್ಲಿ ಯಾರಿದು ಎಂಬ ಪ್ರಶ್ನೆಯಿತ್ತೋ ಏನೋ? ಅದರೆ ಅಲ್ಲಿ ಸ್ವತಃ ಬಾಗಿದ್ದು ನೂರಿಪ್ಪತ್ತೈದು ಕೋಟಿ ಜನಸಂಖ್ಯೆಯ ದೇಶವೊಂದರ ಪ್ರಧಾನಿ.
ಎಷ್ಟೆಲ್ಲ ಸುದ್ದಿ, ಏನೆಲ್ಲ ಘಟನೆಗೆ ಎಂಥ ಚಂದದ ಪದ ಪೋಣಿಸಿ ಹೇಳಿದರೂ ಒಂದು ಫೋಟೋ ಸ್ಫುರಿಸುವ ಭಾವವನ್ನು ವ್ಯಕ್ತಪಡಿಸಲು ಆದೀತೆ? ಆದ್ದರಿಂದಲೇ ನಾನಾ ಘಟನೆ, ಸನ್ನಿವೇಶಗಳನ್ನು ಫೋಟೋಗಳ ಮೂಲಕ, ಆದಷ್ಟು ಕಡಿಮೆ ಪದಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಇದು.
ವಾರಣಾಸಿ, ತಮಿಳುನಾಡು, ಅಮೆರಿಕಾ, ನವದೆಹಲಿ, ಪಾಕಿಸ್ತಾನ ಹೀಗೆ ನಾನಾ ಕಡೆಯ ಸುದ್ದಿಯ ಫೋಟೋಗಳು ಇಲ್ಲಿವೆ. ರಣಧೀರ, ಅಂಜದಗಂಡು, ಯುಗಪುರುಷ, ಶಾಂತಿ ಕ್ರಾಂತಿ ಇನ್ನೂ ಕೆಲ ಕನ್ನಡ ಸಿನಿಮಾಗಳಲ್ಲಿನ ಚೆಲುವೆ ಖುಷ್ಬೂ ಈಗ ಬೆಳೆದಿದ್ದಾರೆ. ರಾಜಕೀಯದಲ್ಲೂ ಬಿಡುವಿಲ್ಲ ಅವರಿಗೆ. ಜಯಲಲಿತಾ ಅವರು ದಾಖಲಾಗಿರುವ ಚೆನ್ನೈನ ಅಪೋಲೋ ಆಸ್ಪತ್ರೆಯಿಂದ ಹೊರಬಂದ ಕ್ಷಣದ ಫೋಟೋ ಏನೆಲ್ಲ ನೆನಪಿಗೆ ತರುತ್ತದೆ? ಒಟ್ಟಿನಲ್ಲಿ ನಾನಾ ಘಟನೆಗಳ ಮುತ್ತುಗಳನ್ನು ಪೋಣಿಸಿದ ಹಾರವಿದು.
ಮುಗ್ಧ ಸುಕನ್ಯಾ
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸೋಮವಾರ ಸುಕನ್ಯಾ ಸಮೃದ್ಧಿ ಯೋಜನೆಯಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆವರು ಪುಟಾಣಿ ಹುಡುಗಿಗೆ ಸೌಲಭ್ಯ ವಿತರಿಸಿದ ಸಂದರ್ಭವಿದು. ಮಗುವಿನ ಎದುರು ಬಾಗಿದ ಪ್ರಧಾನಿಯನ್ನು ಬಿಟ್ಟ ಕಣ್ಣಿನಿಂದ ನೋಡುತ್ತಿರುವ ಬಾಲೆಯ ಚಿತ್ರ ಎಷ್ಟೊಂದು ಮುಗ್ಧ ಮುಗ್ಧ!
ಅಮ್ಮನ ನೋಡಲು ಆಸ್ಪತ್ರೆಗೆ
ನಟಿ, ಎಐಸಿಸಿಯ ರಾಷ್ಟ್ರೀಯ ವಕ್ತಾರೆ ಖುಷ್ಬೂ ಸೋಮವಾರ ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ದಾಖಲಾಗಿರುವ ಚೆನ್ನೈನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ, ಹೊರಬಂದಾಗ ಸಿಕ್ಕ ಚಿತ್ರ ಇದು. ಕಣ್ಣು ಕಿರಿದಾದಂತೆ ಇದೆ. ಮುಖ ದೊಡ್ಡದಾಗಿರುವ ಕಾರಣಕ್ಕೋ ಅಥವಾ ದುಃಖದಿಂದ ಕಣ್ಣೀರು ಹಾಕಿದ್ದಕ್ಕೋ!?
ಉಜ್ವಲ ವಿತರಣೆ
ವಾರಣಾಸಿಯಲ್ಲಿ ಸೋಮವಾರ ಉಜ್ವಲ ಯೋಜನೆ ಅಡಿ ಉಚಿತ ಎಲ್ ಪಿಜಿ ಸಂಪರ್ಕ ವಿತರಿಸಿದ ನಂತರ ಮಹಿಳೆಗೆ ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ. ಮರ ಎತ್ತರಕ್ಕೆ ಬೆಳೆದಷ್ಟು ಬಾಗಬೇಕು ಎಂಬ ಹಿರಿಯರ ಮಾತು ನೆನಪಾಯಿತು.
ಚೆಲುವೆಯ ನಗೆ ಚಂದ
ಲಾಸ್ ಏಂಜಲೀಸ್ ನ ಫೋರ್ ಸೀಸನ್ ಹೋಟೆಲ್ ನಲ್ಲಿ ಸೋಮವಾರ ಎಲ್ಲೆ ಮಹಿಳೆಯರ ಇಪ್ಪತ್ಮೂರನೇ ವಾರ್ಷಿಕ ಕಾರ್ಯಕ್ರಮ. ಸಲಿಂಗ ಕಾಮದ ಬಗೆಗಿನ ಸಿನಿಮಾ 'ಫೈರ್' ನಿರ್ದೇಶಕಿ ಮೀರಾ ನಾಯರ್ ಹಾಗೂ ಅವರ ಎಡ ಭಾಗದಲ್ಲಿ ಲುಪಿಟಾ ನ್ಯೋಂಗೋ ಚಂದದ ನಗೆಯೊಂದನ್ನು ತೇಲಿಬಿಟ್ಟಿದ್ದಾರೆ.
ಕ್ವೆಟ್ಟಾದಲ್ಲೊಂದು ಕೆಟ್ಟ ದಿನ
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಸೋಮವಾರ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಉಗ್ರರು ಅತ್ಮಾಹುತಿ ದಾಳಿ ನಡೆಸಿದ್ದಾರೆ. ಹಲವು ಪೊಲೀಸ್ ಟ್ರೇನಿಗಳು ಪ್ರಾಣ ಚೆಲ್ಲಿದ್ದಾರೆ. ಹಲವಾರು ಮಂದಿಗೆ ಗಾಯಗಳಾಗಿವೆ. ತನ್ನವರನ್ನು ಕಳೆದುಕೊಂಡ ದುಃಖದಲ್ಲಿರುವ ವ್ಯಕ್ತಿಯನ್ನು ಸಂತೈಸುತ್ತಿರುವ ದೃಶ್ಯ ಮನಸನ್ನು ಪಿಚ್ಚೆನ್ನಿಸುತ್ತದೆ. ರಕ್ತ, ಸಾವು, ನೋವು ಯಾವ ದೇಶದಲ್ಲಾದರೂ ಕಣ್ಣೀರು ಬಂದೇ ಬರುತ್ತದೆ.
ಹ್ಞಾ, ಎಲ್ಲಿರುವನು ಆ ನಿನ್ನ ಹರಿ?
ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವದ ಸಮಾರೋಪದಲ್ಲಿ ಭಾಗಿಯಾಗಿದ್ದ ಕಲಾವಿದನೊಬ್ಬನ ಭಾವ ಭಂಗಿ ಇದು. ಅಬ್ಬಾ! ಭಾರೀ ಕಲಾವಂತಿಕೆ ಕಾಣ್ತಿದೆ ಕಣ್ರೀ. ಹಾಗೆ ಕನ್ನಡ ಸಿನಿಮಾವೊಂದರ ಡೈಲಾಗ್ ನೆನಪಿಸಿಕೊಳ್ಳೋಣ. ಭಕ್ತ ಪ್ರಹ್ಲಾದ ಸಿನಿಮಾದ್ದು. ಹ್ಞಾ, ಎಲ್ಲಿದ್ದಾನೆ ಆ ನಿನ್ನ ಹರಿ?
ದೀಪಾವಳಿ ನೃತ್ಯ
ಅಮೆರಿಕಾದ ನ್ಯೂಜೆರ್ಸಿಯಲ್ಲಿರುವ ರೋಷೆಲ್ ಪಾರ್ಕ್ ನಲ್ಲಿ ದೀಪಾವಳಿ ಸಂಭ್ರಮ ಆಗಲೇ ಬೆಳಕು ಕಾಣುತ್ತಿದೆ. ಭಾರತೀಯ ಯುವ ನೃತ್ಯಗಾರ್ತಿಯರಿಂದ ಅದ್ಭುತ ಕಾರ್ಯಕ್ರಮಗಳು ಕೂಡ ನಡೆಯುತ್ತಿವೆ. ನೇಪಥ್ಯದಲ್ಲಿ ನಿಂತು ತಮ್ಮ ಅವಕಾಶಕ್ಕಾಗಿ ಕಾದುನಿಂತ ಹೆಣ್ಣುಮಕ್ಕಳ ನಿರೀಕ್ಷೆ ಕಣ್ಣಿನಿಂದ ಆಚೆ ಹೇಗೆ ತುಳುಕುತ್ತಿದೆ ನೋಡಿ.