ಪವರ್ ಸ್ಟಾರ್ ಸಿನಿಮಾಗೆ ತ್ರಿಸ್ಟಾರ್: ಟಿವಿ ನೇರ ಪ್ರಸಾರದಲ್ಲಿ ಅಭಿಮಾನಿಗಳ ದಾಂಧಲೆ
ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಚಿತ್ರಕ್ಕೆ ಮೂರು ರೇಟಿಂಗ್ ನೀಡಿದ್ದಕ್ಕೆ ಕೆರಳಿದ ಅಭಿಮಾನಿಗಳಿಬ್ಬರು, ಟಿವಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ನಿರೂಪಕನ ಮೇಲೆ ಹಲ್ಲೆ ನಡೆಸಿ, ದಾಂಧಲೆ ನಡೆಸಿದ್ದಾರೆ.
ಹೈದರಾಬಾದ್, ಮಾ 28: ಸಿನಿಮಾಗೆ ಮೂರು ಸ್ಟಾರ್ ನೀಡಿದ್ದಕ್ಕೆ ಕೆರಳಿದ ಅಂಧ ಅಭಿಮಾನಿಗಳಿಬ್ಬರು ಸ್ಟುಡಿಯೋದಲ್ಲೇ ದಾಂಧಲೆ ನಡೆಸಿ, ನಿರೂಪಕನ ಮೇಲೆ ಹಲ್ಲೆ ನಡೆಸಿದ ಘಟನೆ ಸ್ಥಳೀಯ ತೆಲುಗು ಟಿವಿ ವಾಹಿನಿಯೊಂದರಲ್ಲಿ ನಡೆದಿದೆ.
ತೆಲುಗು ಚಿತ್ರೋದ್ಯಮದ ಪವರ್ ಸ್ಟಾರ್ ಪವನ್ ಕಲ್ಯಾಣ್ ಪ್ರಮುಖ ಭೂಮಿಕೆಯಲ್ಲಿರುವ 'ಕಾಟಮರಾಯಡು' ಚಿತ್ರ ಕಳೆದ ಶುಕ್ರವಾರ (ಮಾ 24)ರಂದು ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ಟಿವಿ ನಿರೂಪಕ ಮೂರು ರೇಟಿಂಗ್ ನೀಡಿದ್ದರು, ಜೊತೆಗೆ ಟಿವಿಶೋನಲ್ಲಿ ಚಿತ್ರದ ಬಗ್ಗೆ ಋಣಾತ್ಮಕ ವಿಮರ್ಶೆ ವ್ಯಕ್ತ ಪಡಿಸಿದ್ದರು.
ಇದರಿಂದ ಚರ್ಚೆಯಲ್ಲಿ ಭಾಗವಹಿಸಿದ್ದ ಪವರ್ ಸ್ಟಾರ್ ಅಭಿಮಾನಿಗಳಿಬ್ಬರು ಕೆರಳಿ ಸ್ಟುಡಿಯೋದ ಗ್ಲಾಸ್ ಒಡೆದು ಹಾಕಿ, ನಿರೂಪಕನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿ ಮತ್ತಷ್ಟು ಹಾನಿಗೆ ಮುಂದಾದರು.

ಕೂಡಲೇ ಮಧ್ಯಪ್ರವೇಶಿಸಿದ ಟಿವಿ ಸಿಬ್ಬಂದಿಗಳು ಅಭಿಮಾನಿಗಳಿಬ್ಬರನ್ನು ಸ್ಟುಡಿಯೋದಿಂದ ಹೊರಕ್ಕೆ ಹಾಕಿದರು. ಸ್ಥಳೀಯ ಮನಾ ಟಿವಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.
ನೇರ ಪ್ರಸಾರದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮದಲ್ಲಿ ಇಬ್ಬರು ಪವನ್ ಕಲ್ಯಾಣ್ ಅಭಿಮಾನಿಗಳ ಜೊತೆ ಟಿವಿ ನಿರೂಪಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಚಿತ್ರದ ಬಗ್ಗೆ ನಿರೂಪಕ ಐದರಲ್ಲಿ ಮೂರು ರೇಟಿಂಗ್ ನೀಡಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.
ಚಿತ್ರಕ್ಕೆ ಮೂರು ರೇಟಿಂಗ್ ನೀಡುತ್ತೀರಾ, ನೀವು ಯಾರು ಮೂರು ಸ್ಟಾರ್ ಕೊಡೋಕೆ, ಪವರ್ ಸ್ಟಾರ್ ಸಿನಿಮಾ ಇದು ಗೊತ್ತಾ ಎಂದು ಟಿವಿ ಸೆಟ್, ಕುರ್ಚಿ ಒಡೆದು ಹಾಕಿ ತಮ್ಮ ಅಂಧ ಅಭಿಮಾನವನ್ನು ಲೋಕಕ್ಕೆ ತೋರಿಸಿಕೊಟ್ಟರು.
ಪವನ್ ಕಲ್ಯಾಣ್, ಶೃತಿ ಹಾಸನ್, ಆಲಿ, ನಾಸರ್ ಪ್ರಮುಖ ಭೂಮಿಕೆಯಲ್ಲಿರುವ 'ಕಾಟಮರಾಯಡು' ಚಿತ್ರ ತಮಿಳಿನ ವೀರಂ ಚಿತ್ರದ ರಿಮೇಕ್. ಭಾರೀ ಸಂಖ್ಯೆಯಲ್ಲಿ ಅಭಿಮಾನಿ ಬಳಗ ಹೊಂದಿರುವ ಪವನ್ ಕಲ್ಯಾಣ್ ಅವರ ಈ ಚಿತ್ರಕ್ಕೆ ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ.
ಆಂಧ್ರ ಮತ್ತು ತೆಲಂಗಾಣದಲ್ಲಿ ಹುಚ್ಚು ಅಭಿಮಾನಿಗಳ ಅತಿರೇಕದ ವರ್ತನೆ ಹೊಸದೇನಲ್ಲ. ಈ ಹಿಂದೆ ಜ್ಯೂ. ಎನ್ಟಿಆರ್ ಮತ್ತು ಪವನ್ ಕಲ್ಯಾಣ್ ಅಭಿಮಾನಿಗಳಿಬ್ಬರ ಮಾರಾಮಾರಿಯಲ್ಲಿ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಸಾವನ್ನಪ್ಪಿದ್ದ.
ಈ ನಡುವೆ ನಮ್ಮ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ, ಸಂತೋಷ್ ಆನಂದರಾಮ್ ನಿರ್ದೇಶನದ 'ರಾಜಕುಮಾರ' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. (ಚಿತ್ರ:ಮನಾ ಟಿವಿ)












Click it and Unblock the Notifications