ದೇಶದ ಯುವಕರನ್ನು ರಕ್ಷಿಸಿ: ಸರ್ಕಾರಕ್ಕೆ ಬಿಜೆಪಿ ಸಂಸದನ ಮನವಿ
ನವದೆಹಲಿ, ಸೆಪ್ಟೆಂಬರ್ 14: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ವೇಳೆ ಹೊರಬಂದ ಬಾಲಿವುಡ್ನ ಡ್ರಗ್ಸ್ ನಂಟಿನ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿದ ನಟ, ಬಿಜೆಪಿ ಸಂಸದ ರವಿ ಕಿಶನ್, ಮಾದಕ ವಸ್ತುಗಳ ಹಾವಳಿಯು ಭಾರತದ ಯುವಜನರನ್ನು ನಾಶಪಡಿಸುವ ಪಾಕಿಸ್ತಾನ ಮತ್ತು ಚೀನಾದ ಸಂಚು ಎಂದು ಆರೋಪಿಸಿದರು.
ಸಂಸತ್ ಅಧಿವೇಶನದ ಮೊದಲ ದಿನವಾದ ಸೋಮವಾರ ಡ್ರಗ್ಸ್ ಪ್ರಕರಣ ವಿವಾದವನ್ನು ಪ್ರಸ್ತಾಪಿಸಿದ ಗೋರಖ್ಪುರ ಸಂಸದ ರವಿ ಕಿಶನ್, ದೇಶದ ಯುವಜನತೆಯನ್ನು ನಾಶಪಡಿಸುವ ಸಂಚು ನಡೆಯುತ್ತಿದೆ. ನಮ್ಮ ನೆರೆಹೊರೆಯ ದೇಶಗಳು ಇದರ ಹಿಂದೆ ಇದ್ದಾರೆ. ಪಾಕಿಸ್ತಾನ ಮತ್ತು ಚೀನಾದಿಂದ ಮಾದಕ ವಸ್ತುಗಳನ್ನು ಪ್ರತಿ ವರ್ಷ ಕಳ್ಳಸಾಗಣೆ ಮಾಡಲಾಗುತ್ತಿದೆ. ಪಂಜಾಬ್ ಮತ್ತು ನೇಪಾಳ ಮೂಲಕ ಅವುಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್ಸಿಬಿ) ತನಿಖೆಯಲ್ಲಿ ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೌವಿಕ್ ಮತ್ತು ಇತರೆ ನಾಲ್ವರು ಕಳೆದ ವಾರ ಬಂಧನವಾಗಿರುವುದನ್ನು ಅವರು ಉಲ್ಲೇಖಿಸಿದರು.

'ಸಿನಿಮಾ ರಂಗದಲ್ಲಿಯೂ ಮಾದಕ ವಸ್ತು ವ್ಯಸನವಿದೆ. ಅನೇಕ ಜನರನ್ನು ಬಂಧಿಸಲಾಗಿದೆ. ಎನ್ಸಿಬಿ ಉತ್ತಮ ಕೆಲಸ ಮಾಡುತ್ತಿದೆ. ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲಿಯೇ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡುತ್ತೇನೆ. ಅವರಿಗೆ ತೀಕ್ಷ್ಣವಾದ ಶಿಕ್ಷೆ ನೀಡಬೇಕು ಮತ್ತು ನೆರೆಯ ದೇಶಗಳ ಸಂಚಿಗೆ ಅಂತ್ಯ ತರಬೇಕು ಎಂದು ಕೋರಿದರು.












Click it and Unblock the Notifications