ವಾರಣಾಸಿ ಜೈಲಿಂದ ಬಿಡುಗಡೆಗೊಂಡು ಭಗವದ್ಗೀತೆ ಕೊಂಡೊಯ್ದ ಪಾಕ್ ಕೈದಿ!
ವಾರಣಾಸಿ, ನವೆಂಬರ್ 05: ವಾರಣಾಸಿಯ ಕೇಂದ್ರ ಕಾರಾಗೃಹದಿಂದ 16 ವರ್ಷಗಳ ನಂತರ ಬಿಡುಗಡೆಯಾದ ಜಲಾಲುದ್ದಿನ್ ಎಂಬ ಕೈದಿ ತನ್ನೊಂದಿಗೆ ಭಗವದ್ಗೀತೆಯನ್ನು ಕೊಂಡೊಯ್ದಿದ್ದಾನೆ.
ಕೆಲವು ಸಂಶಯಾಸ್ಪದ ದಾಖಲೆಗಳನ್ನು ಹೊಂದಿದ್ದ ಜಲಾಲುದ್ದಿನ್ ನನ್ನು ಆತ ಪಾಕಿಸ್ತಾನಕ್ಕೆ ಮರಳುತ್ತಿದ್ದ ವೇಳೆಯಲ್ಲಿ 16 ವರ್ಷಗಳ ಹಿಂದೆ ಬಂಧಿಸಲಾಗಿತ್ತು.
2001 ರಲ್ಲಿ ಜಲಾಲುದ್ದಿನ್ ನ ಬಳಿ ಇದ್ದ ಕೆಲವು ನಕ್ಷೆಗಳು, ವಾರಣಾಸಿ ಕಂಟೋನ್ಮೆಂಟ್ ಚಿತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆಫಿಶಿಯಲ್ ಸೀಕ್ರೇಟ್ ಅಂಡ್ ಫಾರೆನರ್ಸ್ ಕಾಯ್ದೆ ಅಡಿಯಲ್ಲಿ ಆತನನ್ನು ಬಂಧಿಸಲಾಗಿತ್ತು.

16 ವರ್ಷಗಳ ನಂತರ ಆತನನ್ನು ಬಿಡುಗಡೆ ಮಾಡಲಾಗಿದ್ದು, ಜೈಲಿನಿಂದ ಹೊರಬಂದ ಜಲಾಲುದ್ದಿನ್ ತನ್ನ ಬಳಿ ಭಗವದ್ಗೀತೆಯೊಂದನ್ನು ಕೊಂಡು ಹೋಗಿದ್ದಾನೆ.
ಕಳೆದ ಮೂರು ವರ್ಷಗಳಿಂದ ಜೈಲಿನ ಕ್ರಿಕೆಟ್ ತಂಡದಲ್ಲಿ ಅಂಪಾಯರ್ ಆಗಿದ್ದ ಜಲಾಲುದ್ದಿನ್, ಜೈಲಿನಲ್ಲಿದ್ದುಕೊಂಡೇ ಎಂಎ ಪದವಿ ಸಹ ಪಡೆದಿದ್ದಾನೆ. ಅಷ್ಟೇ ಅಲ್ಲ, ಇಲೆಕ್ಟ್ರೀಶಿಯನ್ ಕೋರ್ಸ್ ಸಹ ಮಾಡಿದ್ದಾನೆ. ಇದೀಗ ಜಲಾಲುದ್ದಿನ್ ನನ್ನು ಪಾಕಿಸ್ತಾನಕ್ಕೆ ವಾಪಸ್ ಕಳಿಸುವುದಕ್ಕೆ ಸಕಲ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಭಗವದ್ಗೀತೆಯಿಂದ ಸಾಕಷ್ಟು ಪ್ರಭಾವಿತನಾದ ಆತ ಹೊರಡುವ ಮುನ್ನ, ಮರೆಯದೇ ಭಗವದ್ಗೀತೆಯ ಪ್ರತಿಯನ್ನು ತನ್ನೊಂದಿಗೆ ಕೊಂಡೊಯ್ದಿದ್ದಾನೆ.












Click it and Unblock the Notifications