ಮಸೂದ್ ಅಜರ್ ಸೇನಾ ಆಸ್ಪತ್ರೆಯಿಂದ ಸ್ಥಳಾಂತರ, ಹೆಚ್ಚಿದ ಭದ್ರತೆ
ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಮಾರ್ಚ್ 4: ಬಾಲಕೋಟ್ ನ ಜೈಶ್-ಇ-ಮೊಹ್ಮದ್ ಉಗ್ರ ಸಂಘಟನೆ ನೆಲೆ ಮೇಲೆ ಭಾರತ ವಾಯು ಸೇನೆ ನಡೆಸಿದ ದಾಳಿಯಲ್ಲಿ ಆ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಹತನಾಗಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿರುವ ಮಧ್ಯೆ ಜೈಶೆ ಇದನ್ನು ನಿರಾಕರಿಸಿದೆ.
ಪಾಕಿಸ್ತಾನ ಸೇನೆಯು ಆತನನ್ನು ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಿಂದ ಬಹವಲ್ಪುರದಲ್ಲಿರುವ ಗೋತ್ ಘನ್ನಿಯ ಜೈಶ್ ನೆಲೆಯಲ್ಲಿರುವ ಆಸ್ಪತ್ರೆಗೆ ಭಾನುವಾರ ರಾತ್ರಿ ರವಾನಿಸಿದೆ ಎಂದು ತಿಳಿದುಬಂದಿದೆ. ಮಸೂದ್ ಅಜರ್ ನ ಸ್ಥಳಾಂತರವಾದ ಕೆಲ ಸಮಯಕ್ಕೆ ಇಮ್ರಾನ್ ಖಾನ್ ಸರಕಾರದ ವಿರುದ್ಧ ಜೈಶ್-ಇ-ಮೊಹ್ಮದ್ ಕೆಂಡ ಕಾರಿದೆ.
ಭಾರತ ಮತ್ತು ಅಂತರರಾಷ್ಟ್ರೀಯ ಸಮುದಾಯದ ಎದುರು ಬಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಮಸೂದ್ ಅಜರ್ ಗೆ ಹಲವು ತಿಂಗಳಿಂದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲೇ ಚಿಕಿತ್ಸೆ ನಡೆಯುತ್ತಿದೆ ಎಂಬುದು ಈಗಾಗಲೇ ಇರುವ ಮಾಹಿತಿ.

ಮಸೂದ್ ಗೆ ಹೆಚ್ಚುವರಿ ಭದ್ರತೆ
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ ದಾಳಿ ನಡೆದು, ನಲವತ್ತು ಸಿಆರ್ ಪಿಎಫ್ ಸಿಬ್ಬಂದಿ ಸಾವನ್ನಪ್ಪಿದ ನಂತರ ಮಸೂದ್ ಅಜರ್ ಗೆ ಹೆಚ್ಚುವರಿ ಭದ್ರತೆ ನೀಡಲಾಗಿದೆ. ಪಾಕಿಸ್ತಾನದ ಸ್ಪೆಷಲ್ ಸರ್ವೀಸ್ ಗ್ರೂಪ್ ನ ಹತ್ತು ಕಮ್ಯಾಂಡೋಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಮ್ಮ ಮೇಲೆ ದಾಳಿ ನಡೆಸಿದ್ದು ನಿಜ
ಜೈಶ್-ಇ-ಮೊಹ್ಮದ್ ಭಾನುವಾರದಂದು ಹೇಳಿಕೆ ನೀಡಿದ್ದು, ಮಸೂದ್ ಅಜರ್ ಜೀವಂತ ಇದ್ದು, ಆರೋಗ್ಯವಾಗಿ ಇರುವುದಾಗಿ ತಿಳಿಸಿದೆ. ಜತೆಗೆ ಭಾರತೀಯ ವಾಯು ಸೇನೆಯು ಬಾಲಕೋಟ್ ನಲ್ಲಿ ಜೈಶೆ ತರಬೇತಿ ಕೇಂದ್ರದ ಮೇಲೆ ದಾಳಿ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದಿದೆ. ಭಾರತದ ಯುದ್ಧ ವಿಮಾನಗಳು, ಜತೆಗೆ ಇಸ್ರೇಲಿನ ನಿರ್ದೇಶಿತ ಕ್ಷಿಪಣಿಗಳು ನಮ್ಮ ಮೇಲೆ ದಾಳಿ ನಡೆಸಿದವು. ಆದರೆ ಅಲ್ಲಾಹ್ ನ ದೇವತೆಗಳು ಅವರನ್ನು ಬೇರೆಡೆ ದಿಕ್ಕು ತಪ್ಪಿಸಿದರು ಮತ್ತು ನಮ್ಮನ್ನು ರಕ್ಷಿಸಿದರು ಎಂದು ಹೇಳಲಾಗಿದೆ.

ಮುಷರಫ್ ನೀತಿಯನ್ನು ಅನುಸರಿಸುತ್ತಿರುವ ಇಮ್ರಾನ್
ಇನ್ನು ಇಮ್ರಾನ್ ಖಾನ್ ಸರಕಾರವು ಮಾಜಿ ಅಧ್ಯಕ್ಷ- ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅನುಸರಿಸಿದ ನೀತಿಗಳನ್ನು ಅನುಸರಿಸುತ್ತಿದೆ ಎಂದಿದೆ. ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ದಾಳಿ ನಡೆದ ನಂತರ ಮುಷರಫ್ ಹಲವು ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಂಡರು. ಅಮೆರಿಕದ ಸೂಚನೆ ಮೇರೆಗೆ ಹೀಗೆ ನಡೆದುಕೊಂಡಿದ್ದರು ಎಂದಿದೆ.

ಜೈಶ್ ಸದಸ್ಯರು ವಲಸೆಗೆ, ಹೊಸ ಸವಾಲಿಗೆ ಸಿದ್ಧರಾಗಿ
ಇಮ್ರಾನ್ ಖಾನ್ ಸರಕಾರ ಮೊದಲಿಗೆ ಭಾರತದ ಪೈಲಟ್ ಅನ್ನು ಬಿಡುಗಡೆ ಮಾಡಿತು. ಇದೀಗ ನಮ್ಮ ಸಂಸ್ಥೆಗಳ ಮೇಲೆ ದಾಳಿಗೆ ನಿರ್ಧರಿಸಿದ್ದಾರೆ. ಅವರಿಗೆ ಶತ್ರುಗಳ (ಭಾರತ) ಬಗ್ಗೆ ಮೃದು ಧೋರಣೆ ತಳೆದು, ತಮ್ಮದೇ ಜನರ (ಜೈಶೆ) ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರ್ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಜೈಶೆ ಸದಸ್ಯರು ವಲಸೆಗೆ, ಹೊಸ ಸವಾಲಿಗೆ ಸಿದ್ಧರಾಗಿ ಎಂದು ಕೂಡ ಹೇಳಲಾಗಿದೆ.












Click it and Unblock the Notifications