ವಿಶ್ವಸಂಸ್ಥೆ: ಉಗ್ರರ ನೆರಳಾಗಿರುವ ಪಾಕ್ ವಿರುದ್ಧ ಸುಷ್ಮಾ ಸ್ವರಾಜ್ ವಾಗ್ದಾಳಿ
ನ್ಯೂಯಾರ್ಕ್, ಸೆಪ್ಟೆಂಬರ್ 30: ಮಾನವ ಹಕ್ಕು ಉಲ್ಲಂಘನೆ ಮಾಡುವ ಉಗ್ರರ ನೆರಳಾಗಿರುವ ಪಾಕಿಸ್ತಾನವನ್ನು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತರಾಟೆಗೆ ತೆಗೆದುಕೊಂಡರು. ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡುತ್ತಾ, ಪಾಕಿಸ್ತಾನವನ್ನು ಭಯೋತ್ಪಾದನೆ ಉತ್ಪಾದಿಸಿ, ರಫ್ತು ಮಾಡುವ ರಾಷ್ಟ್ರ ಎಂದರು.
ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಪಾಕಿಸ್ತಾನದ ಪ್ರತಿನಿಧಿಗಳು ಕಳೆದ ವರ್ಷ ನಕಲಿ ಫೋಟೋಗಳನ್ನು ತೋರಿಸಿ, ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪಾಕ್ ಯತ್ನಿಸುತ್ತಲೇ ಇದೆ.

ಪಾಕಿಸ್ತಾನದ ಇಬ್ಬಗೆ ನೀತಿಯಿಂದ ಶಾಂತಿ ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಎಂಥಾ ಕಷ್ಟಕರ ಪರಿಸ್ಥಿತಿಯಲ್ಲೂ ಶಾಂತಿ ಮಾತುಕತೆಗೆ ಭಾರತ ಸಿದ್ಧವಾಗಿದೆ. ನಾವು ಎಂದೂ ಶಾಂತಿ ಮಾತುಕತೆಯನ್ನು ತಿರಸ್ಕರಿಸಿಲ್ಲ, ಉಗ್ರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮುಂದಿಟ್ಟ ಹೆಜ್ಜೆ ಹಿಂದಿಟ್ಟಿಲ್ಲ ಎಂದರು.
ಸುಮಾರು 25 ನಿಮಿಷಗಳ ತಮ್ಮ ಭಾಷಣದಲ್ಲಿ ಗಡಿ ಭಾಗದಲ್ಲಿ ಶಾಂತಿ ನೆಲೆಸಲು ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದರು. ಈ ನಡುವೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡುವ ಬಗ್ಗೆ ಪ್ರಸ್ತಾವನೆ ಬಂದರೆ ಅಮೆರಿಕ ಬೆಂಬಲಿಸಲಿದೆ ಎಂದು ಟ್ರಂಪ್ ಸರ್ಕಾರ ಹೇಳಿದೆ.












Click it and Unblock the Notifications