ಭ್ರಷ್ಟರ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದ್ದೇಕೆ?
ನವದೆಹಲಿ, ಸೆಪ್ಟೆಂಬರ್ 27: ಶಿಕ್ಷೆಗೆ ಗುರಿಯಾದ ಶಾಸಕರು/ ಸಂಸದರನ್ನು ಚುನಾವಣೆ ಸ್ಪರ್ಧೆಯಿಂದ ಅನರ್ಹಗೊಳಿಸುವ ಸಂಬಂಧ ಸುಪ್ರೀಂಕೋರ್ಟಿಗೆ ಸಡ್ಡು ಹೊಡೆದು, ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಿರುವುದು ಶುದ್ಧ ತಪ್ಪು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಖಡಾಖಂಡಿತವಾಗಿ ಹೇಳಿದ್ದರ ಹಿಂದಿನ ಉದ್ದೇಶ ಏನು? ಇದು ಸದ್ಯದ ಭಾರಿ ಚರ್ಚೆಯ ವಿಷಯ.
ಬಿಜೆಪಿಯ ಪ್ರಹ್ಲಾದ ಜೋಷಿ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ 'ರಾಹುಲ್ ಈಗ ದೊಡ್ಡವರಾಗಿದ್ದಾರೆ' ಎಂದಿದ್ದಾರೆ. ಇದು ಒಂದು ರೀತಿಯಲ್ಲಿ ನಿಜ ಅಂತಲೂ ಅನ್ನಿಸುತ್ತಿದೆ.
ಏಕೆಂದರೆ ಒಂದು ಮೂಲದ ಪ್ರಕಾರ ರಾಹುಲ್ ಗಾಂಧಿಯ ವಿರೋಧದ ನಡುವೆಯೂ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು 'ರಾಹುಲ್ ಇನ್ನೂ ದೊಡ್ಡವನಾಗಿಲ್ಲ. ಅವನ ಮಾತನ್ನು ಗಣನೆಗೆ ತೆಗೆದುಕೊಳ್ಳುವುದು ಬೇಡ. ನಾವು ಸುಗ್ರೀವಾಜ್ಞೆಯನ್ನು ಜಾರಿಗೆ ತಂದೇ ಬಿಡೋಣ' ಎಂದು ಅಧ್ಯಾದೇಶವನ್ನು ಪಾಸ್ ಮಾಡಿಸಿದರು ಎನ್ನಲಾಗಿದೆ.

ಕಾಂಗ್ರೆಸ್ ವಕ್ತಾರ, ದಿಲ್ಲಿಯ ಅಜಯ್ ಮಾಖನ್.
ಈ ಸೂಕ್ಷ್ಮ ರಾಹುಲ್ ಗಾಂಧಿಗೆ ತಡವಾಗಿ ಅರಿವಾಗಿ ಹೇಗಾದರೂ ಸರಿಯೇ ತಾನು ತನ್ನ ವಿರೋಧವನ್ನು ಸರಿಯಾಗಿ ದಾಖಲಿಸಬೇಕು ಅಂತ ಸೀದಾ ಪ್ರೆಸ್ ಕ್ಲಬ್ ಆಫ್ ಇಂಡಿಯಾಕ್ಕೆ ನುಗ್ಗಿದ್ದಾರೆ.
ತಾವು ಹೇಳುವ ಪ್ರತಿಯೊಂದು ಮಾತನ್ನು ಮಾಧ್ಯಮಗಳು ಇಡೀ ದೇಶದ ಕಿವಿಗೆ ಹಾಕುವಂತಿರಬೇಕು ಎಂದು ನಿರ್ಧರಿಸಿಯೇ ಮಾತನಾಡಿದ್ದಾರೆ. ವಾಸ್ತವವಾಗಿ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಆ ಸಮಯದಲ್ಲಿ ಮಾತನಾಡಬೇಕಿದ್ದು ಕಾಂಗ್ರೆಸ್ ವಕ್ತಾರ, ದಿಲ್ಲಿಯ ಅಜಯ್ ಮಾಖನ್.

ಆದರೆ ಅಲ್ಲಿ ವಿಜೃಂಭಿಸಿದ್ದು ಮಾತ್ರ ರಾಹುಲ್ ಗಾಂಧಿ
ಆದರೆ ಸ್ವಲ್ಪ ಪ್ಲಾನ್ ಮಾಡಿದ ರಾಹುಲ್ ಗಾಂಧಿ ಮಾಧ್ಯಮ ಪ್ರತಿನಿಧಿಗಳು ಭಾರಿ ಪ್ರಮಾಣದಲ್ಲಿ ಜಮಾಯಿಸುವಂತೆ ಅಜಯ್ ಮಾಖನ್ ಗೆ ಹೇಳಿದ್ದಾರೆ. ಆದರೆ ಪೂರ್ವಾಪರ ತಿಳಿಯದ ಅಜಯ್ ಮಾಖನ್ ತಾವೇ ಮಾತನಾಡುವುದಾಗಿ ಮಾಧ್ಯಮ ಮಿತ್ರರಿಗೆ ಹೇಳಿ Meet the Press ಆಯೋಜಿಸಿದ್ದಾರೆ.
ಆದರೆ ಅಲ್ಲಿ ವಿಜೃಂಭಿಸಿದ್ದು ಮಾತ್ರ ರಾಹುಲ್ ಗಾಂಧಿ. ಮನಮೋಹನ್ ಸಿಂಗ್ ನೃತೃತ್ವದ ಕೇಂದ್ರ ಸರಕಾರದ ವಿರುದ್ಧ ಸಮ ಮುಗಿಬಿದ್ದ ರಾಹುಲ್ ಅವರು ಸುಗ್ರೀವಾಜ್ಞೆ ಕುರಿತು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಖಾರವಾಗಿ ಮಂಡಿಸಿಬಿಟ್ಟರು.

ನಿಜಕ್ಕೂ ಬುದ್ಧಿವಂತಿಕೆಯ ರಾಜಕೀಯ ನಡೆಯಾ?
ಆದರೆ ಭವಿಷ್ಯದ ಪ್ರಧಾನಿ, ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತರಾದ ರಾಹುಲ್ ಗಾಂಧಿ ಅವರಿಂದ ಇದು ನಿಜಕ್ಕೂ ಬುದ್ಧಿವಂತಿಕೆಯ ರಾಜಕೀಯ ನಡೆಯಾ? ಎಂದು ಸ್ವತಃ ಕಾಂಗ್ರೆಸ್ಸಿಗರೇ ಮೂಗಿನ ಮೇಲೆ ಬೆರಳಿಟ್ಟುಕೊಂಡು ಯಾರಿಗೂ ಕೇಳದಂತೆ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾರೆ.

ದೇಶದ ಸದ್ಯದ ಮನಸ್ಥಿತಿಗೆ ತಕ್ಕಂತೆ ರಾಹುಲ್ ಮಾತು
ರಾಹುಲ್ ಗಾಂಧಿ ಆಗೊಮ್ಮೆ ಈಗೊಮ್ಮೆ ಹೀಗೆ ಮಾತನಾಡಿರುವ ಉದಾಹರಣೆಗಳಿವೆ. ಆದರೆ ತೀರಾ ಈ ಪರಿ ತಮ್ಮದೇ ಸರಕಾದರ ವಿರುದ್ಧ ವ್ಯಘ್ರರಾಗಿರುವುದು ಸೋಜಿಗವಾಗಿದೆ.
ಆದರೆ ಇಡೀ ದೇಶದ ಸದ್ಯದ ಮನಸ್ಥಿತಿಗೆ ತಕ್ಕಂತೆ ರಾಹುಲ್ ಗಾಂಧಿ ಮಾತನಾಡಿರುವುದು ವಿಶೇಷವಾಗಿದೆ. ಇಡೀ ದೇಶದಲ್ಲಿ ಕಳಂಕಿತ ರಾಜಕಾರಣಿಗಳ ವಿರುದ್ಧ ಜನ ರೋಸಿ ಹೋಗಿರುವಾಗ ರಾಹುಲ್ ಗಾಂಧಿ ಹೇಳಿರುವುದು ಸತ್ಯ ಸತ್ಯ ಎನ್ನುವಂತಾಗಿದೆ.

ಕಳಂಕಿತರ ವಿರುದ್ಧ ಮೊದಲು ಗುಟುರು ಹಾಕಿದ್ದ ರಾಹುಲ್
ಅಂದಹಾಗೆ ಕಳಂಕಿತ/ ಅಪರಾಧ ಹಿನ್ನೆಲೆಯುಳ್ಳವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಬಾರದು ಎಂದು ಗುಟುರು ಹಾಕಿದ್ದ ರಾಹುಲ್ ಗಾಂಧಿ, ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದರು. ಕರ್ನಾಟಕದ ವಿಷಯದಲ್ಲಂತೂ ಕಳಂಕಿತಯರು ಪಕ್ಷಕ್ಕೆ ಎಷ್ಟೇ ನಿಷ್ಠರಾಗಿದ್ದರೂ ಅವರಿಗೆ ಯಾವುದೇ ಸ್ಥಾನಮಾನ ನೀಡಬೇಡಿ ಎಂದು ಪಕ್ಷದ ವತಿಯಿಂದ ಸುಗ್ರೀವಾಜ್ಞೆ ಹೊರಡಿಸಿದವರು ಇದೇ ರಾಹುಲ್. ಅದುವರೆಗೂ ಕಳಂಕಿತರ ವಿರುದ್ಧ ಪಕ್ಷದಲ್ಲಿ ಯಾರೂ ಮಾತನಾಡಿದವರೇ ಇರಲಿಲ್ಲ.

ಕೇಳೋಣ ಅಂದ್ರೆ ಪ್ರಧಾನಿ ಸಿಂಗ್ ವಾಷಿಂಗ್ಟನ್ ನಲ್ಲಿದ್ದಾರೆ
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆದ್ದು ಪ್ರಧಾನಿಯಾಗುವ ಕನಸು ಕಾಣುತ್ತಿರುವ ರಾಹುಲ್ ಗಾಂಧಿ ಸಹಜವಾಗಿಯೇ ಕಳಂಕಿತರ ವಿರುದ್ಧ ಸೊಲ್ಲೆತ್ತಿದ್ದಾರೆ. ಜತೆಗೆ ಯುವ ಪಡೆಗೆ ಮಣೆ ಹಾಕಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇಂದು ಏಕಾಂಗಿಯಾಗಿ ಮಾಧ್ಯಮಗಳ ಎದುರು ಕಳಂಕಿತರ ವಿರುದ್ಧ ತಮ್ಮ ಆಕ್ರೋಶವನ್ನು ಪ್ರಮಾಣಿಕವಾಗಿ ಹೊರಹಾಕಿದ್ದಾರೆ. ಅದೂ ಪ್ರಧಾನಿ ಸಿಂಗ್ ವಾಷಿಂಗ್ಟನ್ ನಲ್ಲಿರುವಾಗ! ಏನೇ ಆಗಲಿ ಭ್ರಷ್ಟಾಚಾರದ ವಿರುದ್ಧ ತಮ್ಮ ಸಿಟ್ಟನ್ನು ದಾಖಲಿಸಿರುವ ರಾಹುಲ್ ಗೆ ಈ ಘಳಿಗೆಯಲ್ಲಿ ಒಂದು ಥ್ಯಾಂಕ್ಸ್ ಹೇಳೋಣ.












Click it and Unblock the Notifications