ಕೋವಿಂದ್ ಆಯ್ಕೆಯ ಬಗ್ಗೆ ಭುಗಿಲೆದ್ದ ಅಸಮಾಧಾನ
ನವದೆಹಲಿ, ಜೂನ್ 19 : ಬಿಜೆಪಿಯಿಂದ ರಾಷ್ಟ್ರಪತಿ ಚುನಾವಣೆಗೆ ರಾಮ್ ನಾತ್ ಕೋವಿಂದ್ ಅವರ ಹೆಸರು ಪ್ರಕಟವಾಗುತ್ತಿದ್ದಂತೆ, ಕೆಲ ವಿರೋಧ ಪಕ್ಷಗಳು ಆರಂಭದಲ್ಲಿ ಜಾಣಮೌನ ವಹಿಸಿದ್ದರೂ, ಕೆಲವರು ವಿರೋಧ ವ್ಯಕ್ತಪಡಿಸಲು ಶುರುಮಾಡಿದ್ದಾರೆ.
ರಾಷ್ಟ್ರಪತಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುವ ಮುನ್ನ ತಮ್ಮೊಂದಿಗೆ ಚರ್ಚಿಸುವುದಾಗಿ ಅರುಣ್ ಜೇಟ್ಲಿ ಮತ್ತು ಅಮಿತ್ ಶಾ ಅವರು ಕಾಂಗ್ರೆಸ್ಸಿಗೆ ಮಾತುಕೊಟ್ಟಿದ್ದರು. ಆದರೆ, ಅವರು ನಿರ್ಧಾರ ತೆಗೆದುಕೊಂಡ ನಂತರ ಹೆಸರನ್ನು ಪ್ರಕಟಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ದನಿಗೂಡಿಸಿರುವ ಸಿಪಿಐ(ಎಂ) ನಾಯಕ ಸೀತಾರಾಂ ಯಚೂರಿ ಅವರು, ಸದ್ಯಕ್ಕೆ ಈ ನಿರ್ಧಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ವಿರೋಧ ಪಕ್ಷದ ನಾಯಕರು ಜೂನ್ 22ರಂದು ಭೇಟಿಯಾಗಲಿದ್ದು, ನಂತರ ತೀರ್ಮಾನ ಹೇಳುವುದಾಗಿ ತಿಳಿಸಿದ್ದಾರೆ.
ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಲಿತ ಶಾಖೆಯ ಪ್ರಮುಖರಾಗಿದ್ದರು, ಅಲ್ಲದೆ ಬಿಜೆಪಿಯ ದಲಿತ ಮೋರ್ಚಾದ ನಾಯಕರೂ ಆಗಿದ್ದರು. ಇದು ಒಂದು ರಾಜನೀತಿಯಾಯಿತಲ್ಲ? ಇಂಥ ತಂತ್ರಗಾರಿಕೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಯಚೂರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಬಿಹಾರದ ರಾಜ್ಯಪಾಲ ಮತ್ತು ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿಯಾಗಲು ತೆರಳಿದ್ದು, ಮುಂದಿನ ನಡೆಗಳ ಬಗ್ಗೆ ಕುತೂಹಲ ಮೂಡಿದೆ.












Click it and Unblock the Notifications