ನ್ಯಾ.ಲೋಯಾ ಹತ್ಯೆ ಪ್ರಕರಣ: ಎಸ್ಐಟಿ ತನಿಖೆಗಾಗಿ ವಿಪಕ್ಷಗಳಿಂದ ರಾಷ್ಟ್ರಪತಿಗೆ ಮೊರೆ
ನವದೆಹಲಿ, ಫೆಬ್ರವರಿ 9: ಅನುಮಾನಾಸ್ಪದ ಸಾವಿಗೀಡಾದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಎಚ್ ಲೋಯಾ ಪ್ರಕರಣ ಸಂಬಂಧ ಇಂದು ವಿರೋಧ ಪಕ್ಷಗಳ ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನು ಭೇಟಿಯಾಗಿದ್ದಾರೆ. ಈ ವೇಳೆ ಲೋಯಾ ಹತ್ಯೆ ಪ್ರಕರಣವನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಎಸ್ಐಟಿ ತನಿಖೆಗೆ ವಹಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ವಿರೋಧ ಪಕ್ಷಗಳು ನಮಗೆ ಸಿಬಿಐ ಅಥವಾ ಎನ್ಐಎ ಮೇಲೆ ನಂಬಿಕೆ ಇಲ್ಲ ಎಂದು ತಿಳಿಸಿವೆ. ಮನವಿಗೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ಎನ್ ಸಿಪಿ, ಆರ್.ಜೆ.ಡಿ, ಎಎಪಿ ಸೇರಿದಂತೆ 15 ಪಕ್ಷಗಳ 114 ಸಂಸದರು ಸಹಿ ಹಾಕಿದ್ದಾರೆ.
"ಕಾನೂನಿನ ಘನತೆಯನ್ನು ಎತ್ತಿ ಹಿಡಿಯಲು, ತಾವು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ನಾವು ಕೋರುತ್ತೇವೆ. ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಿಂದ ಆಯ್ಕೆ ಮಾಡಲ್ಪಟ್ಟ ಮತ್ತು ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಅಧಿಕಾರಗಳಿಂದ ಆಳವಾದ ತನಿಖೆಯ ಅಗತ್ಯವಿದೆ," ಎಂದು ಮನವಿಯಲ್ಲಿ ಹೇಳಲಾಗಿದೆ.
ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಅಥವಾ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎನ್ಐಎ) ಗೆ ಒಪ್ಪಿಸಬಾರದು, ಎಂದು ಸಂಸದರು ಮನವಿಯಲ್ಲಿ ಹೇಳಿದ್ದಾರೆ.
"ಇಂತಹ ವಿಧಾನವು ಸಾರ್ವಜನಿಕರ ದೃಷ್ಟಿಯಲ್ಲಿ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯುತ್ತದೆ. ನ್ಯಾಯ ದಾನ ಮಾಡಲು ನೀವು ನಿಮ್ಮ ಕಚೇರಿಯನ್ನು ಬಳಸುತ್ತೀರಿ ಎಂದು ನಾವು ಪ್ರಾಮಾಣಿಕವಾಗಿ ಭಾವಿಸುತ್ತೇವೆ," ಎಂದು ಮನವಿಯಲ್ಲಿ ಹೇಳಲಾಗಿದೆ.
ಮನವಿ ಸಲ್ಲಿಸಿದ ಬಳಿಕ ನಿಯೋಗದ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿ ಮಾತನಾಡಿ, ದೊಡ್ಡ ಸಂಖ್ಯೆಯ ಸಂಸದರು ಲೋಯಾ ಪ್ರಕರಣದಲ್ಲಿ ಮತ್ತು ನಂತರ ನಡೆದ ಎರಡು ಹತ್ಯೆಗಳಲ್ಲಿ ಸಂಶಯಾಸ್ಪದವಾಗಿರುವುದು ಏನೋ ನಡೆದಿದೆ ಎಂದುಕೊಂಡಿದ್ದಾರೆ. ಅವರೆಲ್ಲಾ ಸ್ವತಂತ್ರ ತನಿಖೆಯನ್ನು ಬಯಸಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವೇಳೆ ಡಿಸೆಂಬರ್ 1, 2014ರಲ್ಲಿ ನಾಗಪುರದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಧೀಶ ಲೋಯಾ ಸಾವನ್ನಪ್ಪಿದ್ದರು. ಸಹೋದ್ಯೋಗಿಯೊಬ್ಬರ ಮಗಳ ಮದುವೆಯಲ್ಲಿ ಭಾಗವಹಿಸಲು ಅವರು ತೆರಳುತ್ತಿದ್ದ ವೇಳೆ ಕಾರ್ಡಿಯಕ್ ಅರೆಸ್ಟ್ ನಿಂದ ಸಾವನ್ನಪ್ಪಿದ್ದರು.