Operation Sindoor: ಉಗ್ರ ಮಸೂದ್ ಅಜರ್ ಕುಟುಂಬದ 10 ಸದಸ್ಯರು ಬಲಿ
ನವದೆಹಲಿ, ಮೇ 07: ಭಾರತ 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಪಾಕಿಸ್ತಾನದ 9 ಕಡೆ ಕ್ಷಿಪಣಿ ದಾಳಿಯನ್ನು ಮಾಡಿದೆ. ಈ ದಾಳಿಯಲ್ಲಿ 19 ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 28 ಪ್ರವಾಸಿಗರು ಮೃತಪಟ್ಟಿದ್ದರು. ಈ ದಾಳಿಗೆ ಪ್ರತ್ಯುತ್ತರವಾಗಿ ಈ ದಾಳಿಯ ಯೋಜನೆಯನ್ನು ರೂಪಿಸಿದ್ದ ಪಾಕಿಸ್ತಾನದ ಸ್ಥಳಗಳ ಮೇಲೆ ಕ್ಷಿಪಣಿ ದಾಳಿಯನ್ನು ಭಾರತ ನಡೆಸಿದೆ. ಈ ದಾಳಿ ಬಳಿಕ ಭಾರತದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಭಾರತೀಯ ವಾಯುಪಡೆ ಕ್ಷಿಪಣಿ ದಾಳಿಯಲ್ಲಿ ಉಗ್ರ ಮಸೂದ್ ಅಜರ್ ಕುಟುಂಬದ 10 ಸದಸ್ಯರು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಬುಧವಾರ ಮುಂಜಾನೆ ಭಾರತ ಬಹವಾಲ್ಪುರದಲ್ಲಿರುವ ಜೈಷ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ಗೆ ಸಂಬಂಧಿಸಿದ ಮದರಸಾ ಮೇಲೆ ದಾಳಿ ನಡೆಸಿದೆ.

ಈ ದಾಳಿಯಲ್ಲಿ ಉಗ್ರ ಮಸೂದ್ ಅಜರ್ ಸಹೋದರಿ, ಭಾವ ಸೇರಿದಂತೆ ಕುಟುಂಬದ 10 ಸದಸ್ಯರು ಮೃತಪಟ್ಟಿದ್ದಾರೆ. ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಟೆಂಡ್ ಉಗ್ರ ಮಸೂದ್ ಅಜರ್ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದು, ಉಗ್ರರಿಗೆ ತರಬೇತಿ ನೀಡಲು ತನ್ನದೇ ಆದ ಶಿಬಿರವನ್ನು ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ಭಾರತದ ಕಂದಹಾರ್ ವಿಮಾನ ಹೈಜಾಕ್ ಪ್ರಕರಣದ ಸಂಚುಕೋರ, ಸಂಸತ್ ಭವನದ ಮೇಲಿನ ದಾಳಿರ ರೂವಾರಿ ಮಸೂದ್ ಅಜರ್. ಈತ ಜೆಇಎಂ ಸಂಘಟನೆಯ ಮುಖ್ಯಸ್ಥ. ಮುಂಬೈ ಮೇಲಿನ ದಾಳಿಯಲ್ಲಿಯೂ ಈತನ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಪಂಜಾಬ್ನಲ್ಲಿ 4 ಗುರಿಗಳ ಮೇಲೆ ದಾಳಿ ಮಾಡಲಾಗಿದೆ. ಈ ಗುರಿಗಳಲ್ಲಿ ಜೆಇಎಂ ಮತ್ತು ಲಷ್ಕರ್ ಮುಖ್ಯ ಕಚೇರಿಗಳು ಇವೆ ಮತ್ತು ಪಿಒಕೆಯಲ್ಲಿ 5 ಗುರಿಗಳನ್ನು ನಾಶಪಡಿಸಲಾಗಿದೆ.
ಉಗ್ರ ಮಸೂದ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಭಾರತೀಯ ದಾಳಿಯಲ್ಲಿ ತನ್ನ ಕುಟುಂಬದ 10 ಸದಸ್ಯರು ಸಾವನ್ನಪ್ಪಿದ್ದಾರೆಂದು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಮಾಧ್ಯಮಗಳು 14 ಜನರು ಆತನ ಮದರಸಾ ಮೇಲಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿವೆ.
'ಆಪರೇಷನ್ ಸಿಂಧೂರ್' ದಾಳಿಯ ಎರಡು ಪ್ರಮುಖ ಸ್ಥಳಗಳಲ್ಲಿ ಬಹಾವಲ್ಪುರದ ಸುಭಾನ್ ಅಲ್ಲಾ ಸಂಕೀರ್ಣ ಸೇರಿದೆ. ಭಾರತ ಸರ್ಕಾರ ಉಗ್ರರ ನೆಲೆಗಳನ್ನು ಗುರುತಿಸಿ ದಾಳಿ ಮಾಡಲಾಗಿದೆ. ಈ ದಾಳಿಗಳು ಪಾಕಿಸ್ತಾನದ ಸೈನಿಕ ನೆಲೆಗಳ ಮೇಲೆ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈಗ ದಾಳಿ ಮಾಡಿರುವ ಭಯೋತ್ಪಾದನಾ ಶಿಬಿರಗಳಲ್ಲಿಯೇ ಪಹಲ್ಗಾಮ್ ದಾಳಿಯ ಸಂಚು ರೂಪಿಸಲಾಗಿತ್ತು ಎಂದು ಭಾರತ ಹೇಳಿದೆ.
ಕ್ಷಿಪಣಿ ದಾಳಿಯಲ್ಲಿ ಲಷ್ಕರ್ನ ಧಾರ್ಮಿಕ ಮುಖಂಡ ಮೊಹ್ಮದ್ ಇಕ್ಬಾಲ್ ಪಿಒಕೆಯ ಕೊಟ್ಲಿಯಲ್ಲಿ ಹತ್ಯೆಯಾಗಿದ್ದಾನೆ ಎಂಬ ಮಾಹಿತಿಯೂ ಇದೆ. ಸರ್ಕಾರವು ಯಾವುದೇ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿಲ್ಲ. ದಾಳಿಯಲ್ಲಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಲಾಗಿದೆ ಎಂಬ ಪಾಕಿಸ್ತಾನದ ಆರೋಪಗಳನ್ನು ಭಾರತ ತಳ್ಳಿ ಹಾಕಿದೆ.












Click it and Unblock the Notifications