Operation Sindoor: ಭಾರತದ ವಾಯು ದಾಳಿಯಲ್ಲಿ ಸತ್ತ ಉಗ್ರರು ಎಷ್ಟು?
ನವದೆಹಲಿ, ಮೇ 07: ಭಾರತೀಯ ವಾಯುಪಡೆ 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಪಾಕಿಸ್ತಾನದಲ್ಲಿ ದಾಳಿಯನ್ನು ನಡೆಸಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 28 ಪ್ರವಾಸಿಗರು ಮೃತಪಟ್ಟಿದ್ದರು. ಈ ದಾಳಿಗೆ ತಕ್ಕ ಉತ್ತರವನ್ನು ಭಾರತ ನೀಡಿದ್ದು, ಪಾಕಿಸ್ತಾನದ 9 ಸ್ಥಳಗಳಲ್ಲಿ ಉಗ್ರರ ಕ್ಯಾಂಪ್ಗಳ ಮೇಲೆ ಕ್ಷಿಪಣಿ ದಾಳಿ ಮಾಡಿದೆ.
ಸದ್ಯದ ಮಾಹಿತಿಯಂತೆ ಭಾರತದ ವಾಯುಪಡೆಯ ದಾಳಿಯಲ್ಲಿ ಪಾಕಿಸ್ತಾನದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಭಾವಲ್ಪುರದ ಸುಭಾನ್ ಮಸೀದಿಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಸಾವಿನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಈ ಕುರಿತು ಸ್ಥಳೀಯ ಆಸ್ಪತ್ರೆಯ ವೈದ್ಯ ಜೋಹೈಬ್ ಅಹಮದ್ ಮಾಹಿತಿ ನೀಡಿದ್ದಾರೆ. ಆದ್ದರಿಂದ ದಾಳಿಯಲ್ಲಿ ಪಾಕಿಸ್ತಾನ ದೇಶಾದ್ಯಂತ ಒಟ್ಟು ಸಾವಿನ ಸಂಖ್ಯೆ 19ಕ್ಕೆ ಏರಿದೆ.
ಭಾರತ 'ಆಪರೇಷನ್ ಸಿಂಧೂರ್' ಕುರಿತು ಮಾಹಿತಿ ನೀಡಿದ್ದು, ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಬಳಕೆ ಮಾಡಲಾದ ಮೂಲ ಸೌಲಭ್ಯದ ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿದೆ ಎಂದು ಹೇಳಿದೆ.
ರಕ್ಷಣಾ ಸಚಿವಾಲಯ ಪಾಕಿಸ್ತಾನದ 9 ಕಡೆಗಳಲ್ಲಿ ಕ್ಷಿಪಣಿ ದಾಳಿಯನ್ನು ಮಾಡಲಾಗಿದೆ. ಈ ಸ್ಥಳಗಳಲ್ಲಿ ಪಹಲ್ಗಾಮ್ನಲ್ಲಿ ನಡೆದ ದಾಳಿಯ ಯೋಜನೆಯನ್ನು ರೂಪಿಸಲಾಗಿತ್ತು ಎಂದು ತಿಳಿಸಿದೆ.
ಭಾರತ ಹೇಳುವುದೇನು?: 'ಆಪರೇಷನ್ ಸಿಂಧೂರ್' ಕುರಿತು ಭಾರತ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. 'ಕೆಲವು ಸಮಯದ ಹಿಂದೆ, ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು, ಪಾಕಿಸ್ತಾನ ಮತ್ತು ಪಾಕಿಸ್ತಾನ-ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಮೂಲಸೌಕರ್ಯವನ್ನು ಒಡೆದು ಹಾಕಲಾಗಿದೆ. ಅಲ್ಲಿ ಭಾರತ ವಿರುದ್ಧ ಉಗ್ರ ದಾಳಿಗಳನ್ನು ಯೋಜಿಸಲಾಗಿತ್ತು ಮತ್ತು ನಿರ್ದೇಶಿಸಲಾಗಿತ್ತು. ಒಟ್ಟು 9 ಸ್ಥಳಗಳನ್ನು ಗುರಿಯಾಗಿಸಲಾಗಿದೆ ಎಂದು ಹೇಳಿದೆ.
ನಾವು ಯಾವುದೇ ಪಾಕಿಸ್ತಾನಿ ಸೈನಿಕ ಸೌಲಭ್ಯಗಳನ್ನು ಗುರಿಯಾಗಿ ದಾಳಿ ಮಾಡಿಲ್ಲ. ಗುರಿಗಳನ್ನು ಆಯ್ಕೆ ಮಾಡುವುದು ಮತ್ತು ಕಾರ್ಯಾಚರಣೆಯ ವಿಧಾನದಲ್ಲಿ ಭಾರತ ಸಾಕಷ್ಟು ತಾಳ್ಮೆಯನ್ನು ತೋರಿಸಿದೆ. ಈ ಕ್ರಮಗಳು 25 ಭಾರತೀಯರು ಮತ್ತು ಒಬ್ಬ ನೇಪಾಳಿ ನಾಗರಿಕರನ್ನು ಹತ್ಯೆ ಮಾಡಿದ ಕ್ರೂರ ಪಹಲ್ಗಾಮ್ ಉಗ್ರ ದಾಳಿಯ ನಂತರ ನಡೆದಿದೆ. ಈ ದಾಳಿಗೆ ಹೊಣೆಗಾರರಾಗಿರುವವರನ್ನು ಉತ್ತರದಾಯಕತೆಯೊಂದಿಗೆ ಎದುರಿಸುತ್ತೇವೆ ಎಂಬ ಬದ್ಧತೆಯನ್ನು ನಾವು ಪಾಲಿಸುತ್ತಿದ್ದೇವೆ ಎಂದು ತಿಳಿಸಿದೆ.
ಪಹಲ್ಗಾಮ್ ನಡೆದ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ದೇಶಾದ್ಯಂತ ಒತ್ತಾಯಿಸಲಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಸರಣಿ ಸಭೆಗಳನ್ನು ನಡೆಸಿದ್ದರು. ಸೇನೆಗೆ ಸಂಪೂರ್ಣ ಅಧಿಕಾರವನ್ನು ನೀಡಿದ್ದರು. ಹಲವು ಸುತ್ತಿನ ಸಭೆಗಳ ಬಳಿಕ ಭಾರತೀಯ ವಾಯುಪಡೆ ಪಾಕಿಸ್ತಾನದ 9 ಕಡೆಗಳಲ್ಲಿ ಕ್ಷಿಪಣಿ ದಾಳಿಯನ್ನು ನಡೆಸಿದೆ.
ಪಹಲ್ಗಾಮ್ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವಿನ ಸಂಬಂಧ ಹಳಸಿದೆ. ಎರಡೂ ರಾಷ್ಟ್ರಗಳ ನಡುವೆ ಯುದ್ಧ ನಡೆಯಲಿದೆ ಎಂದು ಅಂದಾಜಿಸಲಾಗುತ್ತಿದೆ. ಒಂದು ವೇಳೆ ಯುದ್ಧ ಪ್ರಾರಂಭವಾದರೆ ಸಾಮಾನ್ಯ ಜನರ ರಕ್ಷಣೆ ಹೇಗೆ ಮಾಡಬೇಕು ಎಂದು ದೇಶಾದ್ಯಂತ ಬುಧವಾರ ಮಧ್ಯಾಹ್ನ ಅಣುಕು ಪ್ರದರ್ಶನ ನಡೆಯಲಿದೆ.












Click it and Unblock the Notifications