Covid Booster Dose In India: ಶೇ.27-28ರಷ್ಟು ಮಂದಿಗೆ ಮಾತ್ರ 3ನೇ ಡೋಸ್, ಕೇಂದ್ರ ಅಲರ್ಟ್
ಬೆಂಗಳೂರು, ಡಿಸೆಂಬರ್ 25: ಚೀನಾ ದೇಶದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಕೋವಿಡ್ ಉಪತಳಿ BF7 ಆರ್ಭಟ ದಿನೇ ದಿನೆ ಹೆಚ್ಚುತ್ತಿದ್ದು. ಭಾರತದಲ್ಲೂ ಕೋವಿಡ್ ಪಾಸಿಟಿವ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಲಸಿಕೆ ಡೋಸ್ ಪಡೆಯುವುದೇ ಪರಿಹಾರ ಎಂದು ಕೇಂದ್ರ ಆರೋಗ್ಯ ಇಲಾಖೆ ಕರೆ ನೀಡಿದೆ.
ವಿಶ್ವದಾದ್ಯಂತ ಕೊರೊನಾ ಅಲೆಯ ಆತಂಕ ಸಷ್ಟಿಯಾಗಿದೆ. ಇದನ್ನು ತಡೆಯುವ ಇಲ್ಲವೇ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸೂಕ್ತ ಎಚ್ಚರಿಕೆ ವಹಿಸುತ್ತಿದೆ. ದೇಶದಲ್ಲಿ ಇದುವರೆ ಶೇ.27-28ರಷ್ಟು ಮಂದಿ ಮಾತ್ರ ಕೊರೊನಾ ಮುನ್ನೆಚ್ಚರಿಕೆ (3ನೇ ಡೋಸ್) ಲಸಿಕೆ ಪಡೆದಿದ್ದಾರೆ. ಸೋಂಕು ವ್ಯಾಪಿಸುತ್ತಿದ್ದು, ಅದರ ನಿಯಂತ್ರಣಕ್ಕೆ 3ನೇ ಡೋಸ್ ಲಸಿಕೆ ಪಡೆಯುವುದೇ ಪರಿಹಾರ ಎಂದು ಸರ್ಕಾರದ ಅಧಿಕಾರಿಗಳು, ವೈದ್ಯರು ತಜ್ಞರು ಪ್ರತಿಪಾದಿಸಿದ್ದಾರೆ.
ಚೀನಾದಲ್ಲಿ ಕೊರೊನಾ ಉಲ್ಬಣ: ಹೊಸ ಪ್ರಕರಣಗಳ ಮಾಹಿತಿ ಪ್ರಕಟಿಸುವುದನ್ನೇ ಕೈಬಿಟ್ಟ ಚೀನಾ
ಮುನ್ನೆಚ್ಚರಿಕೆ ಭಾಗವಾಗಿ ಭಾರತದ ವಿವಿಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬೂಸ್ಟರ್ ಶಾಟ್ಗಳು, ವ್ಯಾಕ್ಸಿನೇಷನ್, ಮಾಸ್ಕ್ ಮತ್ತು ಸ್ಕ್ರೀನಿಂಗ್ ಪ್ರಮಾಣ ಹೆಚ್ಚಿಸಲಾಗಿದೆ. ಸದ್ಯ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಬೂಸ್ಟರ್ ಡೋಸ್ ಅನ್ನು ಜನರು ನಿರ್ಲಕ್ಷ್ಯಿಸದೇ ತ್ವರಿತವಾಗಿ ಪಡೆಯಬೇಕು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಒತ್ತಾಯಿಸಿದರು.
ನೀತಿ ಆಯೋಗದ ವಿ.ಕೆ ಪೌಲ್ ಅವರು ನೀಡಿದ ಮಾಹಿತಿಯಂತೆ ದೇಶದ ಒಟ್ಟು ಜನಸಂಖ್ಯೆಯ ಪೈಕಿ ದುವರೆಗೆ ಕೇವಲ ಶೇ. 27ರಿಂದ 28 ರಷ್ಟು ಮಾತ್ರ ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ. ಇದು ಸೋಂಕಿನ ಸಕ್ರಿಯ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ದೆಹಲಿಯ ಸಾಕೇತ್ನಲ್ಲಿರುವ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನಿರ್ದೇಶಕ ಡಾ. ರೋಮೆಲ್ ಟಿಕೂ ಅವರು ಸಹ ಬೂಸ್ಟರ್ ಶಾಟ್ಗಳನ್ನು ತೆಗೆದುಕೊಳ್ಳುವುದು ಈ ಸಮಯದಲ್ಲಿ ಅತ್ಯಗತ್ಯವಾಗಿದೆ. ಯಾರು ಅರ್ಹರು ಅವರು ಕೂಡಲೇ ಮೂರನೇ ಡೋಸ್ ಪಡೆಯಿರಿ ಎಂದು ತಿಳಿಸಿದ್ದಾರೆ.
ಸೋಂಕಿಗೆ ತುತ್ತಾದವರು 3 ತಿಂಗಳು ಕಾಯಿರಿ
ಒಂದು ತಿಂಗಳಲ್ಲಿ ಕೋವಿಡ್ ಸೋಂಕಿಗೆ ಒಳಗಾದವರಿಗೆ ಬೂಸ್ಟರ್ ಶಾಟ್ ಪಡೆಯುವುದು ಅನಗತ್ಯ. ಕಾರಣ ಸೋಂಕು ಬಂದ ಹೋದ ಬಳಿಕ ಅವರ ದೇಹದಲ್ಲಿ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಹೀಗಾಗಿ ಅವರು ಬೂಸ್ಟರ್ ಪಡೆಯದಿದ್ದರೆ ಅದಕ್ಕಾಗಿ ಮೂರು ತಿಂಗಳು ಕಾದು ನಂತರ ಪಡೆದರೆ ಉತ್ತಮ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡಿರುವುದರಿಂದ ಕೋವಿಡ್ ರೂಪಾಂತರದಿಂದ ಸ್ವಲ್ಪ ಮಟ್ಟಿಗೆ ರಕ್ಷಣೆ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಸದ್ಯಕ್ಕೆ ವೇಗವಾಗಿ ಕೊರೊನಾ ಹೆಚ್ಚುತ್ತಿದೆ. ಇದಕ್ಕೆ ಲಸಿಕೆ ಪಡೆಯುವುದು ಪರಿಹಾರ ಮಾರ್ಗವಾಗಿದೆ. ಅದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಶುಚಿಯಾಗಿರುವುದು, ಸಾಮಾಜಿಕ ಅಂತರದ ಪಾಲನೆ ಜೊತೆಗೆ ಸರ್ಕಾರ ಸೂಚಿಸುವ ಮಾರ್ಗೋಯಾಪಗಳನ್ನು ತಪ್ಪದೇ ಅಳವಡಿಕೊಳ್ಳಬೇಕು. ಇಲ್ಲವಾದರೆ ಸೋಂಕು ಎಲ್ಲೆಡೆ ವ್ಯಾಪಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜನರನ್ನು ಉತ್ತೇಜಿಸಬೇಕು. ಲಸಿಕೆ ಪಡೆಯಲು ಜನ ಹಿಂಜರಿಯದಂತೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಜಾಗೃತಿ ಮೂಡಿಸಬೇಕು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.