ಎಚ್ಎ ಎಲ್ ಅಧ್ಯಕ್ಷ ಡಾ.ಆರ್.ಕೆ.ತ್ಯಾಗಿ ಸಂದರ್ಶನ
ಬೆಂಗಳೂರು,ಜ. 28: ಇನ್ನು ಕೆಲವೇ ವರ್ಷಗಳಲ್ಲಿ ಹಿಂದೂಸ್ತಾನ್ ಏರಾನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ವಿಶ್ವದ ಪ್ರಮುಖ 20 ಏರೋಸ್ಪೇಸ್ ಸಂಸ್ಥೆಗಳನ್ನು ಹಿಂದಿಕ್ಕಲಿದೆ ಎಂದು ಎಚ್ಎಎಲ್ ಅಧ್ಯಕ್ಷ ಡಾ. ಆರ್.ಕೆ.ತ್ಯಾಗಿ ಹೇಳಿದ್ದಾರೆ.
ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಅನೇಕ ಮಾಹಿತಿ ಹೊರಹಾಕಿದ ತ್ಯಾಗಿ, 2019ರ ವೇಳೆಗೆ ಎಚ್ಎಎಲ್ 'ಮಹಾರತ್ನ' ಸ್ಥಾನ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.
ಎಚ್ಎಎಲ್ ಅಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಧಿಸಬೇಕಾದ್ದು ಇನ್ನು ಬಹಳ ಇದೆ. ಸಂಸ್ಥೆಗೆ ಆಧುನಿಕ ಸ್ಪರ್ಶ ನೀಡುವುದಷ್ಟೇ ಮುಖ್ಯವಲ್ಲ ಜತೆಗೆ ಕೌಶಲ್ಯ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲ ಸದ್ಬಳಕೆಗೂ ಗಮನ ನೀಡಲಾಗುತ್ತಿದೆ ಎಂದು ತಿಳಿಸಿದರು.[ಹೆಚ್ಚಿತು ಭಾರತೀಯ ವಾಯು ಸೇನೆಯ 'ತೇಜಸ್ಸು']

ಮಾನವ ಸಂಪನ್ಮೂಲ ಸದ್ಬಳಕೆ
ಉದ್ಯೋಗಿಗಳಿಗೆ ಆರೋಗ್ಯ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಒದಗಿಸಿ ಕೊಡಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಸಂಸ್ಥೆಯ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಉದ್ಯೋಗಿಗಳ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ಒತ್ತಡ ಹೇರಲಾಗುತ್ತಿಲ್ಲ. ಇದು ಕೆಲಸದಲ್ಲಿ ಗುಣಾತ್ಮಕ ಅಂಶ ಕಾಯ್ದುಕೊಳ್ಳಲು ನೆರವಾಗಿದೆ ಎಂದು ಹೇಳಿದರು.
ಉದ್ಯೋಗಿಗಳ ಪ್ರತಿಕ್ರಿಯೆ ಅಳೆಯಲು ಸಮೀಕ್ಷೆಯೊಂದನ್ನು ನಡೆಸಲಾಗಿತ್ತು. ಯಾವ ಯಾವ ವಿಭಾಗಗಳಲ್ಲಿ ಬದಲಾವಣೆ ಅಗತ್ಯವಿದೆ? ಹೊಸ ಯೋಜನೆ ಕಾರ್ಯರೂಪಕ್ಕೆ ಸಲಹೆಗಳೇನು? ಎಂಬುದನ್ನು ಉದ್ಯೋಗಿಗಳಿಂದಲೇ ಕೇಳಲಾಗಿತ್ತು ಎಂದು ತಿಳಿಸಿದರು.

ಶಕ್ತಿ ತುಂಬಿದ ಆಧುನಿಕತೆ ಅಳವಡಿಕೆ
ಕಂಪನಿಯನ್ನು ಆಧುನೀಕರಣ ಮಾಡಲು 7200 ಕೋಟಿ. ರೂ ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದ್ದು ಆಡಳಿತ ಒಪ್ಪಿಗೆ ನೀಡಿದೆ. ಸ್ಫರ್ಧಾತ್ಮಕ ಜಗತ್ತಿನಲ್ಲಿ ನೀವು ನೀಡುವ ಪ್ರತಿಯೊಂದು ಉತ್ಪನ್ನವೂ ಸಮಯಕ್ಕೆ ಸರಿಯಾಗಿ ಗುಣಮಟ್ಟದಿಂದ ಕೂಡಿರಬೇಕು. ಈ ಸಂಗತಿಯಲ್ಲಿ ಸಂಸ್ಥೆ ಹಿಂದೆ ಬಿದ್ದಿಲ್ಲ ಎಂದು ತಿಳಿಸಿದರು. ತೇಜಸ್ ಯುದ್ಧ ನೌಕೆ ಉತ್ಪಾದನೆ ಕಂಪನಿಗೆ ಹೊಸ ಹೆಸರು ತಂದುಕೊಟ್ಟಿದೆ. ನಾವು ಯುದ್ಧ ನೌಕೆಗಳ ತಯಾರಿಕೆ ಸಂಖ್ಯೆಯನ್ನು ಹೆಚ್ಚು ಮಾಡಲಿದ್ದೇವೆ ಎಂದು ತಿಳಿಸಿದರು.[ಎಎಚ್ಎಲ್ ನಲ್ಲಿ ವಿಮಾನಯಾನಕ್ಕೆ ಸಚಿವ ಮನೋಹರ್ ಒಲವು]
ಭವಿಷ್ಯದ ಹೆಜ್ಜೆಗಳೇನು?
ಭಾರತದ ವಾಯುಸೇನೆಯ ಅಗತ್ಯಕ್ಕೆ ತಕ್ಕಂತೆ ಯುದ್ಧೋಪಕರಣಗಳನ್ನು ತಯಾರಿಸಿ ನೀಡುವುದು ನಮ್ಮ ಮುಖ್ಯ ಧ್ಯೇಯ. ಕೆಲವೊಮ್ಮೆ ಕಷ್ಟವೆನಿಸಿದರೂ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮೇಲ್ನೋಟಕ್ಕೆ ಇದು ತಪ್ಪು ಎಂದು ಭಾಸವಾದರೂ ನಿಧಾನವಾಗಿ ಅದರ ಲಾಭ ದೊರೆಯುತ್ತದೆ ಎಂದು ಹೇಳಿದರು.

ಸರ್ಕಾರ ಖಾಸಗಿ ವಲಯಕ್ಕೆ ಅಥವಾ ಇನ್ನೊಂದು ಕಂಪನಿಗೆ ತಯಾರಿಕೆ ಹೊಣೆ ವಹಿಸದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದರೆ ನಮ್ಮ ಉತ್ಪನ್ನಗಳಲ್ಲಿ ಯಾವುದೆ ರೀತಿಯ ಕೊರತೆ ಕಂಡುಬರಬಾರದು. ಇದು ಸಂಸ್ಥೆಯ ಪ್ರತಿಯೊಬ್ಬ ಉದ್ಯೋಗಿಯ ಮನಸ್ಸಿನಲ್ಲಿರಬೇಕು ಎಂದು ಹೇಳಿದರು.
ಧ್ರುವ್ ಮತ್ತು ರುದ್ರ ಕ್ಷಿಪಣಿ ತಯಾರಿಸಿದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಎಚ್ಎಎಲ್ ಹೆಸರು ಮಾಡಿದೆ. ಉಳಿದ ಎಲ್ಲ ಸಂಸ್ಥೆಗಳಿಗಿಂತ ಭಿನ್ನವಾಗಿರುವ ನಾವು ಅದನ್ನು ಕಾಪಾಡಿಕೊಂಡು ಹೋಗಲು ಸದಾ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.[ಎಚ್ಎಎಲ್ ಇಮೇಲ್ ಐಡಿ ಹ್ಯಾಕ್ ರಾದ್ಧಾಂತ!]

ಭಾರತದ ಸೇನಾ ಶಕ್ತಿಗೆ ಕೊಡುಗೆ
ಇನ್ನಷ್ಟು ತೇಜಸ್ ಯುದ್ಧ ವಿಮಾನ ತಯಾರಿಸಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದರೆ ಉತ್ತಮ. ಇದು ಭಾರತದ ರಕ್ಷಣಾ ಶಕ್ತಿ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಬೆಳವಣಿಗೆಗೆ ಪ್ರತಿಯೊಬ್ಬ ಉದ್ಯೋಗಿಯ ಶ್ರಮ ಕಾರಣವಾಗಿದೆ. ಇಲ್ಲಿ ಯಾರು ಹೆಸರು ಪಡೆದುಕೊಳ್ಳುತ್ತಾರೆ ಎನ್ನುವುದಕ್ಕಿಂತ ಕಂಪನಿ ಎಷ್ಟು ಮಟ್ಟದ ಹೆಸರು ಸಂಪಾದಿಸುತ್ತದೆ ಎಂಬುದೇ ಮುಖ್ಯವಾಗುತ್ತದೆ ಎಂದು ಹೇಳಿದರು. ತೇಜಸ್, ಧ್ರುವ್, ರುದ್ರಾ ಮತ್ತು ಎಲ್ ಸಿಎಚ್ ನಂಥ ಯುದ್ಧ ವಿಮಾನಗಳ ತಯಾರಿಕೆ ಸಂಸ್ಥೆಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.












Click it and Unblock the Notifications