ಪುಲ್ವಾಮಾ ದಾಳಿಗೆ ಕಾರಣ ಯಾರು? ಕಾಂಗ್ರೆಸ್ ಪ್ರಶ್ನೆ
ನವದೆಹಲಿ, ಫೆಬ್ರವರಿ 14: ಪುಲ್ವಾಮಾ ದಾಳಿ ನಡೆದು 40 ಯೋಧರು ಹುತಾತ್ಮರಾಗಿ ಇಂದಿಗೆ ಒಂದು ವರ್ಷ ಆದ ಬೆನ್ನಲ್ಲೆ ಪುಲ್ವಾಮಾ ದಾಳಿ ಕುರಿತು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಪುಲ್ವಾಮಾ ದಾಳಿಗೆ ಯಾರು ಕಾರಣ ಎಂದು ಪ್ರಶ್ನೆ ಮಾಡಿರುವ ಕಾಂಗ್ರೆಸ್, ಪುಲ್ವಾಮಾ ದಾಳಿಯ ತನಿಖೆಯ ವಿವರಗಳನ್ನು ಕೇಂದ್ರ ನೀಡಬೇಕೆಂದು ಆಗ್ರಹಿಸಿದೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಪುಲ್ವಾಮಾ ದಾಳಿಯ ಬಗ್ಗೆ ಟ್ವಿಟ್ಟರ್ ಖಾತೆಯಲ್ಲಿ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದು, 'ಪುಲ್ವಾಮಾ ದಾಳಿ ಬಗ್ಗೆ ಗುಪ್ತಚರ ವರದಿಗಳನ್ನು ನಿರ್ಲಕ್ಷಿಸಿದ್ದು ಏಕೆ?' ಎಂದು ಪ್ರಶ್ನೆ ಮಾಡಿದ್ದಾರೆ.

ಸರ್ಕಾರದ ತನಿಖೆಯ ಸ್ಥಿತಿ-ಗತಿ ಏನು? ಭದ್ರತಾ ವೈಫಲ್ಯಕ್ಕೆ ಕಾರಣಕರ್ತರು ಯಾರು? ಎಂದು ಪ್ರಶ್ನಿಸಿದ್ದಾರೆ. ಹುತಾತ್ಮ ಕುಟುಂಬದವರಿಗೆ ಬರಬೇಕಾದ ಹಕ್ಕಿನ ಪರಿಹಾರದ ಹಣಕ್ಕಾಗಿ ಅವರು ಪರದಾಡುವಂತಾಗಿದೆ. 'ಭಾರತ್ ಕೇ ವೀರ್' ಹೆಸರಿನಲ್ಲಿ 242 ಕೋಟಿ ಅನುದಾನ ಏನಾಯಿತು? ಎಂದು ಪ್ರಶ್ನಿಸಿದ್ದಾರೆ.
ಭದ್ರತಾ ವೈಫಲ್ಯಕ್ಕೆ ಕಾರಣವಾಗಿದ್ದಕ್ಕೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಟ್ಟಿದ್ದಕ್ಕಾ? ಎಂದು ಕೇಂದ್ರದ ಕಾಲೆಳೆದಿದ್ದಾರೆ ವೇಣುಗೋಪಾಲ್.












Click it and Unblock the Notifications